ಆ ಚೀಟಿಗಳಲ್ಲಿದೆಯಾ ಸಾವಿನ ಸೀಕ್ರೆಟ್? ಯುವತಿಯ ನಗ್ನ ಮೃತದೇಹ ಪತ್ತೆ ಪ್ರಕರಣದ ಹಿಂದೆ ಹಲವು ಅನುಮಾನ
ಬೆಂಗಳೂರಿನ ಆಡುಗೋಡಿ ಯುವತಿ ಸಾವಿನ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಬಯಲಾಗಿದೆ. ಪೂಜಾ ವಾಸವಿದ್ದ ಮನೆಯ ಗೋಡೆಗಳ ಮೇಲೆ ವಿಚಿತ್ರ ಬರಹದ ಚೀಟಿಗಳು ಪತ್ತೆಯಾಗಿದ್ದು, ಆಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳೇ ಎಂಬ ಪ್ರಶ್ನೆ ಮೂಡಿದೆ. ಮತ್ತೊಂದೆಡೆ, ನಿಗೂಢ ಯುವಕನೊಬ್ಬನ ಬಗ್ಗೆ ಮನೆ ಮಾಲಕಿ ಹಾಗೂ ಸ್ಥಳೀಯರು ನೀಡಿರುವ ಹೇಳಿಕೆ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿವೆ.

ಬೆಂಗಳೂರು, ಏಪ್ರಿಲ್ 28: ಬೆಂಗಳೂರಿನ (Bengaluru) ಆಡುಗೋಡಿಯ ಬಾಡಿಗೆ ಮನೆಯಲ್ಲಿ ನಗ್ನ ಸ್ಥಿತಿಯಲ್ಲಿ ಪತ್ತೆಯಾದ ಪೂಜಾ ದತ್ತಾ ಸಾವಿನ ಪ್ರಕರಣವು (Mystery Death Case) ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಾಥಮಿಕ ತನಿಖೆಯ ವೇಳೆ, ಪೂಜಾ ವಾಸವಿದ್ದ ಮನೆಯ ಸ್ಥಿತಿಯನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ. ಇದರಿಂದಾಗಿ, ಪೂಜಾ ತೀವ್ರ ಮಾನಸಿಕ ಖಿನ್ನತೆಗೆ (Mental Depression) ಒಳಗಾಗಿದ್ದಳೇ ಎಂಬ ಅನುಮಾನ ಈಗ ದಟ್ಟವಾಗಿದೆ.
ಸಾವಿನ ಮನೆಯಲ್ಲಿ ಕಸದ ರಾಶಿ, ಗೋಡೆ ಮೇಲೆ ಚೀಟಿ!
ಪೂಜಾ ವಾಸವಿದ್ದ 1 ಆರ್ಕೆ ಮನೆಯ ದೃಶ್ಯಗಳು ನಿಜಕ್ಕೂ ಬೆಚ್ಚಿಬೀಳಿಸುವಂತಿವೆ. ಮನೆಯ ಗೋಡೆಗಳ ತುಂಬೆಲ್ಲಾ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬರೆದ ಚೀಟಿಗಳನ್ನು ಅಂಟಿಸಲಾಗಿದೆ. ಅಷ್ಟೇ ಅಲ್ಲದೆ, ಚಿತ್ರಗಳನ್ನು ಬಿಡಿಸಿ ಗೋಡೆಗೆ ಹಾಕಲಾಗಿದೆ. ಮನೆಯ ಒಂದು ಕೋಣೆಯ ಪೂರ್ತಿ ಕಸ ಮತ್ತು ಹರಿದ ಕಾಗದದ ಹಾಳೆಗಳನ್ನೇ ತುಂಬಿಸಿಟ್ಟುಕೊಳ್ಳಲಾಗಿತ್ತು. ಸುಮಾರು ಐದಾರು ಮೂಟೆಗಳಷ್ಟು ಹಳೆಯ ಕಾಗದಗಳು ಮನೆಯಲ್ಲಿ ಪತ್ತೆಯಾಗಿದ್ದು, ಪೂಜಾ ವಿಚಿತ್ರ ವರ್ತನೆಯನ್ನು ಹೊಂದಿದ್ದಳು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಘಟನೆಯ ಹಿನ್ನೆಲೆ
ಜಾರ್ಖಂಡ್ ಮೂಲದ ಪೂಜಾ ದತ್ತಾ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ಆಡುಗೋಡಿಯಲ್ಲಿ ವಾಸವಿದ್ದಳು. ಕಳೆದ ಮೂರು ದಿನಗಳಿಂದ ಆಕೆಯ ಮನೆ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಮನೆಯಿಂದ ಭಾರಿ ದುರ್ನಾತ ಬರಲಾರಂಭಿಸಿದಾಗ ಮನೆ ಮಾಲೀಕರು ಬಾಗಿಲು ಒಡೆದು ನೋಡಿದಾಗ, ಪೂಜಾಳ ಮೃತದೇಹ ನಗ್ನ ಸ್ಥಿತಿಯಲ್ಲಿ ಅರೆಕೊಳೆತ ರೀತಿ ಪತ್ತೆಯಾಗಿತ್ತು.
ಸ್ಥಳೀಯರ ಹೇಳಿಕೆ ಮತ್ತು ನಿಗೂಢ ಯುವಕ
ಪೂಜಾ ಆಗಾಗ ರಸ್ತೆಯಲ್ಲಿ ಒಬ್ಬಳೇ ಬೈದಾಡಿಕೊಂಡು ಹೋಗುತ್ತಿದ್ದಳು ಎಂದು ಸ್ಥಳೀಯ ನಿವಾಸಿ ಕಿರಣ್ ತಿಳಿಸಿದ್ದಾರೆ. ಆಕೆ ಮಾನಸಿಕವಾಗಿ ಕುಗ್ಗಿದಂತೆ ಕಾಣುತ್ತಿದ್ದಳು ಎಂಬುದು ಸ್ಥಳೀಯರ ಅಭಿಪ್ರಾಯ. ಇನ್ನು ಪೂಜಾ ಮನೆಗೆ ಓರ್ವ ಯುವಕ ಬಂದು ಹೋಗುತ್ತಿದ್ದ ಎಂದು ಮನೆ ಮಾಲೀಕರು ತಿಳಿಸಿದ್ದು, ಆತನ ಬೈಕ್ ಸದಾ ಮನೆ ಮುಂದೆ ನಿಂತಿರುತ್ತಿತ್ತು ಎಂದು ಹೇಳಿದ್ದಾರೆ. ಸದ್ಯ ಪೂಜಾಳ ಫೋನ್ ಸ್ವಿಚ್ ಆಫ್ ಆಗಿದ್ದು, ಪೊಲೀಸರು ಸಿಡಿಆರ್ (Call Detail Record) ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಯುವತಿಯ ಬೆತ್ತಲೆ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಮನೆ ಮಾಲಕಿ ಸ್ಫೋಟಕ ಹೇಳಿಕೆ
ಪೂಜಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಸ್ಪಷ್ಟವಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



