
ಬೆಂಗಳೂರು, ಏಪ್ರಿಲ್ 3: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಆಟೋ ಎಲ್ಪಿಜಿ ಗ್ಯಾಸ್ ಅಭಾವ (Auto LPG Crisis) ವಿಕೋಪಕ್ಕೆ ತಲುಪಿದ್ದು, ಆಟೋ ಚಾಲಕರ ಬದುಕು ಬೀದಿಗೆ ಬಂದಿದೆ. ಗ್ಯಾಸ್ ಕೊರತೆ ಮತ್ತು ಅನಿಯಂತ್ರಿತ ದರ ಏರಿಕೆಯಿಂದ ಚಾಲಕರು ಕಂಗಾಲಾಗಿದ್ದಾರೆ. ಏತನ್ಮಧ್ಯೆ, ಸೋಮವಾರದೊಳಗೆ ಸಮಸ್ಯೆ ಬಗೆಹರಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ‘ಪೀಸ್ ಆಟೋ’ ಸಂಘಟನೆ ಗಡುವು ನೀಡಿದೆ. ಇಲ್ಲದಿದ್ದರೆ ಸಚಿವರ ಮನೆಗೆ ಆಟೋ ಸಮೇತ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆಯನ್ನೂ ನೀಡಿದೆ.
ನಗರದ ಉತ್ತರ ಭಾಗದ ನಾಗೇನಹಳ್ಳಿ ಮತ್ತು ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗ್ಯಾಸ್ಗಾಗಿ ಆಟೋಗಳ ಬೃಹತ್ ಸರದಿ ಸಾಲು ಕಂಡುಬರುತ್ತಿದೆ. ಪ್ರೊಪೆಲ್ ಆಟೋ ಗ್ಯಾಸ್ ಬಂಕ್ ಬಳಿ ಸುಮಾರು 2 ಕಿಲೋಮೀಟರ್ವರೆಗೂ ಆಟೋಗಳು ಸಾಲುಗಟ್ಟಿ ನಿಂತಿವೆ.
ಚಾಲಕರು ರಾತ್ರಿ 11 ಗಂಟೆಯಿಂದಲೇ ತಿಂಡಿ-ತೀರ್ಥವಿಲ್ಲದೆ ಗ್ಯಾಸ್ಗಾಗಿ ಕಾಯುತ್ತಿದ್ದಾರೆ. ದಿನವಿಡೀ ಕ್ಯೂ ನಿಂತರೆ ದುಡಿಯುವುದು ಯಾವಾಗ? ಮಕ್ಕಳ ಶಾಲಾ ಫೀಸು, ಸಾಲದ ಕಂತು ಕಟ್ಟುವುದು ಹೇಗೆ? ಎಂದು ಚಾಲಕರು ಕಣ್ಣೀರಿಡುತ್ತಿದ್ದಾರೆ.
ಪೀಸ್ ಆಟೋ ಸಂಘಟನೆಯ ಅಧ್ಯಕ್ಷ ರಘು ಮಾತನಾಡಿ, ‘ಹಿಂದೆ 55 ರೂ. ಇದ್ದ ಗ್ಯಾಸ್ ದರ ಈಗ ಕಾಳಸಂತೆಯಲ್ಲಿ 135 ರೂ. ವರೆಗೆ ಏರಿಕೆಯಾಗಿದೆ. ಸರ್ಕಾರ ಹೋಟೆಲ್ಗಳಿಗೆ ಸಬ್ಸಿಡಿ ಹೆಚ್ಚಿಸಿ, ಆಟೋ ಚಾಲಕರ ಹೊಟ್ಟೆಗೆ ಹೊಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಚಾಲಕರು 10-20 ರೂಪಾಯಿ ಹೆಚ್ಚುವರಿ ಬಾಡಿಗೆ ಕೇಳಿದರೆ, ಗ್ರಾಹಕರು ಟ್ವಿಟರ್ನಲ್ಲಿ ದೂರು ನೀಡುತ್ತಾರೆ. ಇದರಿಂದ ಬೆಂಗಳೂರು ಪೊಲೀಸ್ ಆಯುಕ್ತರು ಚಾಲಕರ ಬಂಧನಕ್ಕೆ ಆದೇಶ ನೀಡುತ್ತಾರೆ. ಈ ಕಾರಣದಿಂದ ಚಾಲಕರು ಹೆಚ್ಚುವರಿ ದರ ಕೇಳಲು ಹಿಂಜರಿಯುತ್ತಾರೆ, ಇದು ಅವರ ನಷ್ಟವನ್ನು ಹೆಚ್ಚಿಸುತ್ತಿದೆ ಎಂದು ರಘು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಕರ್ನಾಟಕದಾದ್ಯಂತ ಆಟೋ ಗ್ಯಾಸ್ ಹಾಹಾಕಾರ: ಬಂಕ್ಗಳ ಮುಂದೆ ಕಿಲೋಮೀಟರ್ಗಟ್ಟಲೆ ಕ್ಯೂ, ಚಾಲಕರ ಬದುಕು ದುಸ್ತರ
ಬಂಕ್ ವ್ಯವಸ್ಥಾಪಕರ ಪ್ರಕಾರ, ಗ್ಯಾಸ್ ಪೂರೈಕೆ ಅನಿಶ್ಚಿತವಾಗಿದ್ದು, ಸ್ಟಾಕ್ ಬಂದ ಕೂಡಲೇ ಖಾಲಿಯಾಗುತ್ತಿದೆ. ಮುಂದಿನ ಲೋಡ್ ಯಾವಾಗ ಬರುತ್ತದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲದಿರುವುದು ಚಾಲಕರ ಆತಂಕವನ್ನು ಇಮ್ಮಡಿಗೊಳಿಸಿದೆ. ಸೋಮವಾರದೊಳಗೆ ಸರ್ಕಾರ ಶಾಶ್ವತ ಪರಿಹಾರ ನೀಡದಿದ್ದರೆ ವಿಧಾನಸೌಧದ ಬದಲು ನೇರವಾಗಿ ಸಚಿವರ ನಿವಾಸವೇ ನಮ್ಮ ಹೋರಾಟದ ಕೇಂದ್ರವಾಗಲಿದೆ ಎಂದು ಚಾಲಕರು ಎಚ್ಚರಿಕೆ ನೀಡಿದ್ದಾರೆ.
Published On - 2:22 pm, Fri, 3 April 26