B Khata to A Khata Conversion: ಬಿ ಖಾತೆ ಟು ಎ ಖಾತೆ ಗಡುವು ಅಂತ್ಯ: ಲಕ್ಷಾಂತರ ಆಸ್ತಿ ಮಾಲೀಕರು ‘ಎ-ಖಾತೆ’ ಭಾಗ್ಯದಿಂದ ವಂಚಿತ!

ಬೆಂಗಳೂರಿನಲ್ಲಿ ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತಿಸಲು ನೀಡಿದ್ದ ಗಡುವು ಮುಕ್ತಾಯಗೊಂಡಿದೆ. ಜಿಬಿಎ ವೆಬ್‌ಸೈಟ್‌ ಸರ್ವರ್ ಸಮಸ್ಯೆ ಹಾಗೂ ಅಧಿಕಾರಿಗಳ ವಿಳಂಬ ನೀತಿಯಿಂದ 7.50 ಲಕ್ಷ ಆಸ್ತಿಗಳ ಪೈಕಿ ಕೇವಲ 20,000 ಮನೆಗಳಿಗೆ ಮಾತ್ರ ಎ-ಖಾತೆ ಲಭಿಸಿದೆ. ಇನ್ನು ಮುಂದೆ ಎ-ಖಾತೆ ಪಡೆಯಲು ಪೂರ್ಣ ಶುಲ್ಕ ಪಾವತಿಸಬೇಕಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಗಡುವು ವಿಸ್ತರಣೆಗೆ ಆಗ್ರಹಿಸಿದ್ದಾರೆ.

B Khata to A Khata Conversion: ಬಿ ಖಾತೆ ಟು ಎ ಖಾತೆ ಗಡುವು ಅಂತ್ಯ: ಲಕ್ಷಾಂತರ ಆಸ್ತಿ ಮಾಲೀಕರು ಎ-ಖಾತೆ ಭಾಗ್ಯದಿಂದ ವಂಚಿತ!
ಬಿ-ಖಾತೆ ಟು ಎ-ಖಾತೆ ಗಡುವು ಅಂತ್ಯ
Edited By:

Updated on: Aug 25, 2026 | 8:00 AM

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಬಿ-ಖಾತೆಯಿಂದ ಎ-ಖಾತೆ ಪರಿವರ್ತನೆಯ ಗಡುವು ಇಂದಿಗೆ ಮುಕ್ತಾಯಗೊಂಡಿದೆ.
  • ತಾಂತ್ರಿಕ ತೊಂದರೆಯಿಂದ ಲಕ್ಷಾಂತರ ಆಸ್ತಿ ಮಾಲೀಕರು ಎ-ಖಾತೆಯಿಂದ ವಂಚಿತರಾಗಿದ್ದಾರೆ.
  • ಕೇವಲ ಇಪ್ಪತ್ತು ಸಾವಿರ ಮನೆಗಳಿಗೆ ಮಾತ್ರ ಎ-ಖಾತೆ ಸಿಕ್ಕಿರುವುದು ನಿರಾಸೆ ಮೂಡಿಸಿದೆ.

ಬೆಂಗಳೂರು, ಆಗಸ್ಟ್ 25: ರಾಜ್ಯ ಸರ್ಕಾರದ ಆರನೇ ಗ್ಯಾರಂಟಿ ‘ಭೂ ಗ್ಯಾರಂಟಿ’ ಯೋಜನೆಯಡಿ ಆರಂಭಿಸಲಾಗಿದ್ದ ‘ನನ್ನ ಖಾತಾ ನನ್ನ ಹಕ್ಕು’ ಕಾರ್ಯಕ್ರಮದ ಗಡುವು ಮುಕ್ತಾಯಗೊಂಡಿದೆ. ಆದರೆ, ಜಿಬಿಎ (GBA) ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ವೆಬ್‌ಸೈಟ್ ತಾಂತ್ರಿಕ ಎಡವಟ್ಟುಗಳಿಂದಾಗಿ ಲಕ್ಷಾಂತರ ಆಸ್ತಿ ಮಾಲೀಕರು ‘ಎ-ಖಾತೆ’ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

7.50 ಲಕ್ಷ ಆಸ್ತಿಗಳ ಪೈಕಿ 20,000 ಮನೆಗಳಿಗಷ್ಟೇ ‘ಎ-ಖಾತೆ’ ಭಾಗ್ಯ!

ಬೆಂಗಳೂರು ನಗರದಲ್ಲಿ ಸುಮಾರು 7.50 ಲಕ್ಷ ಬಿ-ಖಾತೆ ಆಸ್ತಿಗಳಿದ್ದು, ಈ ಪೈಕಿ ಕೇವಲ 90,000 ಜನರು ಮಾತ್ರ ‘ಎ-ಖಾತೆ’ಗೆ ಅರ್ಜಿ ಸಲ್ಲಿಸಿದ್ದಾರೆ. ದುರಂತವೆಂದರೆ, ಇಷ್ಟೂ ಅರ್ಜಿಗಳಲ್ಲಿ ಅಧಿಕಾರಿಗಳ ವಿಳಂಬ ನೀತಿಯಿಂದಾಗಿ ಕೇವಲ 20,000 ಮನೆಗಳಿಗೆ ಮಾತ್ರ ‘ಎ-ಖಾತೆ’ ಸಿಕ್ಕಿದ್ದು, ಬೃಹತ್ ಸಂಖ್ಯೆಯ 60,000ಕ್ಕೂ ಹೆಚ್ಚು ಅರ್ಜಿಗಳು ಜಿಬಿಎ ಅಧಿಕಾರಿಗಳ ಟೇಬಲ್ ಮೇಲೆಯೇ ಬಾಕಿ ಉಳಿದುಕೊಂಡಿವೆ.

ಸರ್ವರ್ ಡೌನ್ ಕಿರಿಕಿರಿ: ಜಿಬಿಎ ನಡೆಗೆ ಆಸ್ತಿ ಮಾಲೀಕರ ಆಕ್ರೋಶ

ಆರಂಭದಲ್ಲಿ ಮಾರ್ಗಸೂಚಿ ಮೌಲ್ಯದ ಶೇ. 5ರಷ್ಟು ಶುಲ್ಕ ವಿಧಿಸಲು ನಿರ್ಧರಿಸಿದ್ದ ಸರ್ಕಾರ, ಸಾರ್ವಜನಿಕರ ವಿರೋಧದ ಬಳಿಕ ಅದನ್ನು ಶೇ. 2ಕ್ಕೆ ಇಳಿಸಿತ್ತು. ಶುಲ್ಕ ಕಡಿತಗೊಳ್ಳುತ್ತಿದ್ದಂತೆ ಅರ್ಜಿಗಳ ಸಂಖ್ಯೆ ಏರಿಕೆ ಕಂಡಿತಾದರೂ, ಜಿಬಿಎ ವೆಬ್‌ಸೈಟ್‌ ಸರ್ವರ್ ಡೌನ್ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಸಾವಿರಾರು ಜನರು ಅರ್ಜಿ ಸಲ್ಲಿಸಲಾಗದೆ ಪರದಾಡುವಂತಾಯಿತು.

ಸದ್ಯ ಗಡುವು ಮುಕ್ತಾಯಗೊಂಡಿದ್ದು, ಇನ್ನು ಮುಂದೆ ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತಿಸಿಕೊಳ್ಳುವವರು ಪೂರ್ಣ ಪ್ರಮಾಣದ (100%) ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸ್ಪಷ್ಟಪಡಿಸಿದ್ದಾರೆ. “ಸರ್ಕಾರ ಖಜಾನೆ ತುಂಬಿಸಿಕೊಳ್ಳಲು ತೋರಿದ ಆತುರವನ್ನು, ತಾಂತ್ರಿಕ ನೆರವು ನೀಡಲು ತೋರಲಿಲ್ಲ” ಎಂದು ಮನೆ ಮಾಲೀಕ ವೀರೇಶ್ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಗಡುವು ವಿಸ್ತರಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:57 am, Tue, 25 August 26

Loading...
Unable to load recommendations.
Follow Us