ಮನೆಗಳಿಗೆ ಸ್ಟಿಕ್ಕರ್‌ ಅಂಟಿಸುವುದು ಸಮೀಕ್ಷಾ ಪ್ರಕ್ರಿಯೆಯ ಭಾಗ: ಬಿಬಿಎಂಪಿ ಸ್ಪಷ್ಟನೆ

ಬೆಂಗಳೂರಿನಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ಸ್ಟಿಕ್ಕರ್‌ಗಳನ್ನು ಅಂಟಿಸುತ್ತಿರುವ ವಿವಾದದ ಕುರಿತು ಬಿಬಿಎಂಪಿ ಸ್ಪಷ್ಟನೆ ನೀಡಿದೆ. ಸಮೀಕ್ಷಾ ತಂಡಗಳ ಸಂಪರ್ಕವಿಲ್ಲದೆ ಸ್ಟಿಕ್ಕರ್‌ಗಳು ಅಂಟಿಸಲ್ಪಟ್ಟಿರುವ ಬಗ್ಗೆ ದೂರುಗಳು ಬಂದಿದ್ದವು. ಬಿಬಿಎಂಪಿ ಸಹಾಯವಾಣಿ ಮತ್ತು ಆನ್‌ಲೈನ್ ಪೋರ್ಟಲ್ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಟಿಕ್ಕರ್ ಕೇವಲ ತಂಡದ ಭೇಟಿಯ ಸೂಚನೆ ಎಂದು ಸ್ಪಷ್ಟಪಡಿಸಲಾಗಿದೆ.

ಮನೆಗಳಿಗೆ ಸ್ಟಿಕ್ಕರ್‌ ಅಂಟಿಸುವುದು ಸಮೀಕ್ಷಾ ಪ್ರಕ್ರಿಯೆಯ ಭಾಗ: ಬಿಬಿಎಂಪಿ ಸ್ಪಷ್ಟನೆ
ಬಿಬಿಎಂಪಿ ಸ್ಪಷ್ಟನೆ

Updated on: Jul 03, 2025 | 7:59 AM

ಬೆಂಗಳೂರು, ಜುಲೈ 03: ಕರ್ನಾಟಕದಾದ್ಯಂತ ಮತ್ತೊಮ್ಮೆ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ (caste survey) ನಡೆಯುತ್ತಿದೆ. ಆದರೆ ಅಧಿಕಾರಿಗಳು ಸಮೀಕ್ಷೆ ಮಾಡದೆ ಮನೆಗಳಿಗೆ ಕೇವಲ ಸ್ಟಿಕ್ಕರ್ ಅಂಟಿಸಿ ಹೋಗುತ್ತಿರುವುದಾಗಿ ಸ್ವತಃ ಜನರೇ ದೂರಿದ್ದರು. ಇದೀಗ ಈ ವಿಚಾರವಾಗಿ ಬಿಬಿಎಂಪಿ (bbmp) ಸ್ಪಷ್ಟೀಕರಣ ನೀಡಿದೆ. ಸಮೀಕ್ಷಾ ತಂಡಗಳು ಪ್ರತಿ ಮನೆಗೆ ಭೇಟಿ ನೀಡಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ದೃಢೀಕರಿಸುವ ಉದ್ದೇಶದಿಂದ ಮನೆ-ಮನೆಗೆ ಸ್ಟಿಕ್ಕರ್‌ಗಳನ್ನು ಅಂಟಿಸುವುದು ಸಮೀಕ್ಷಾ ಪ್ರಕ್ರಿಯೆಯ ಒಂದು ಭಾಗವಾಗಿದೆ. ಇದರಿಂದ ಯಾವುದೇ ಪರಿಶಿಷ್ಟ ಜಾತಿ ಕುಟುಂಬವು ಸಮೀಕ್ಷೆಯಿಂದ ಹೊರಗುಳಿಯದಂತೆ ಖಚಿತಪಡಿಸುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.

ಈ ಕುರಿತಾಗಿ ಬಿಬಿಎಂಪಿ ಟ್ವೀಟ್ ಮಾಡಿದ್ದು, ಕರ್ನಾಟಕ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ, ಬೆಂಗಳೂರು ನಗರದಾದ್ಯಂತ ಪರಿಶಿಷ್ಟ ಜಾತಿ(SC) ಸಮಗ್ರ ಸಮೀಕ್ಷೆಯನ್ನು ನಡೆಸುತ್ತಿದೆ. ಈ ಸಮೀಕ್ಷೆಯು ಪ್ರತಿ ಅರ್ಹ ಕುಟುಂಬವನ್ನು ಒಳಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ. ಸಮೀಕ್ಷಾ ತಂಡಗಳು ನಿವಾಸಿಗಳೊಂದಿಗೆ ಸಂವಹನ ನಡೆಸದೆ ಮನೆಗಳ ಮೇಲೆ ಸಮೀಕ್ಷೆಯ ಸ್ಟಿಕ್ಕರ್‌ಗಳನ್ನು ಅಂಟಿಸಿವೆ ಎಂದು ಕೆಲವು ನಿವಾಸಿಗಳು, ಸಾಮಾಜಿಕ ಮಾಧ್ಯಮ, ಟಿವಿ ಸುದ್ದಿ ವಾಹಿನಿಗಳು ಮತ್ತು ನಮ್ಮ ಸಹಾಯವಾಣಿಯಲ್ಲಿ ಕಳವಳ ವ್ಯಕ್ತಪಡಿಸಿರುವುದನ್ನು ಗಮನಿಸಲಾಗಿದೆ.

ಇದನ್ನೂ ಓದಿ
ಚಾಮರಾಜನಗರ: ಕೊಡಸೋಗೆ ರಸ್ತೆಯಲ್ಲಿ 18 ಕೋತಿಗಳ ಶವ ಪತ್ತೆ
ಕಾನೂನು ಸಚಿವರ ಊರಲ್ಲೇ ಕಿರಾಣಿ ಅಂಗಡಿ, ಹೋಟೆಲ್, ಮನೆಗಳಲ್ಲೂ ಮದ್ಯ ಮಾರಾಟ!
ಮೆಟ್ರೋ ಯೆಲ್ಲೋ ಲೈನ್ ವಿಳಂಬದಿಂದ ಬಿಎಂಟಿಸಿಗೆ ಲಾಭ!
ಜಾತಿ ಸಮೀಕ್ಷೆ: ಸರ್ವೆ ಮಾಡದೆ ಮನೆಗಳಿಗೆ ಸ್ಟಿಕ್ಕರ್​ ಅಂಟಿಸಿದ ಅಧಿಕಾರಿಗಳು

ಬಿಬಿಎಂಪಿ ಟ್ವೀಟ್​ 

ಈ ಕಳವಳಗಳನ್ನು ನಿವಾರಿಸಲು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕೆಳಗಿನ ಅಂಶಗಳ ಮೂಲಕ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ಢೋಂಗಿ ಸಮೀಕ್ಷೆ: ಮನೆ ಬಾಗಿಲಿಗೆ ಸ್ಟಿಕ್ಕರ್ ಅಂಟಿಸುವುದರ ವಿರುದ್ಧ ಜೆಡಿಎಸ್ ವಾಗ್ದಾಳಿ

  • ಸಂವಹನದ ಅಗತ್ಯತೆ: ಮನೆಯ ಸದಸ್ಯರೊಂದಿಗೆ ಸಂವಹನ ನಡೆಸದೆ ಸ್ಟಿಕ್ಕರ್‌ಗಳನ್ನು ಅಂಟಿಸಬಾರದು ಎಂದು ಸಮೀಕ್ಷಾ ತಂಡಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಆದಾಗ್ಯೂ, ಕೆಲ ಸಂದರ್ಭಗಳಲ್ಲಿ ಇದನ್ನು ಅನುಸರಿಸದಿರಬಹುದು ಎಂದು ನಾವು ಒಪ್ಪಿಕೊಳ್ಳುತ್ತೇವೆ. ಸಮೀಕ್ಷೆ ನಡೆಸಿದ ಲಕ್ಷಾಂತರ ಮನೆಗಳಲ್ಲಿ, ಕೆಲವು ಮನೆಗಳು ನಮ್ಮ ಸಮೀಕ್ಷಕರಿಂದ ತಪ್ಪಿಹೋಗಿರಬಹುದು.
  • ಸಂವಹನ ನಡೆಯದಿದ್ದಲ್ಲಿ ಏನು ಮಾಡಬೇಕು? ಯಾವುದೇ ಸಂವಹನವಿಲ್ಲದೆ ಸ್ಟಿಕ್ಕರ್ ಅಂಟಿಸಿದ್ದರೆ, ದಯವಿಟ್ಟು ನಮ್ಮ ಸಹಾಯವಾಣಿ ಸಂಖ್ಯೆ 9481359000ಗೆ ಕರೆ ಮಾಡಿ (ಸಂಖ್ಯೆಯು ಸ್ಟಿಕ್ಕರ್‌ನ ಮೇಲೆ ಮುದ್ರಿತವಾಗಿರುತ್ತದೆ) ಸಮೀಕ್ಷೆಯನ್ನು ಸರಿಯಾಗಿ ಪೂರ್ಣಗೊಳಿಸಲು ಅಗತ್ಯ ವ್ಯವಸ್ಥೆ ಮಾಡುತ್ತೇವೆ.
  • ಸ್ವಯಂ ಘೋಷಣೆಯ ಆಯ್ಕೆ: ಇನ್ನು ಸಮೀಕ್ಷೆಗೆ ಒಳಪಡದ ಯಾವುದೇ ಪರಿಶಿಷ್ಟ ಜಾತಿ ಕುಟುಂಬವು ಆನ್‌ಲೈನ್‌ನಲ್ಲಿ ಸ್ವಯಂ ಘೋಷಣಾ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸಬಹುದು. ಲಿಂಕ್ ಅನ್ನು ಪ್ರವೇಶಿಸಲು ಮತ್ತು ನಿಮ್ಮ ಮಾಹಿತಿಯನ್ನು ಸಲ್ಲಿಸಲು ಸ್ಟಿಕ್ಕರ್‌ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಬಹುದಾಗಿದೆ.

ಇದನ್ನೂ ಓದಿ: ಜಾತಿ ಸಮೀಕ್ಷೆ: ಸರ್ವೆ ಮಾಡದೆ ಮನೆಗಳಿಗೆ ಸ್ಟಿಕ್ಕರ್​ ಅಂಟಿಸಿದ ಅಧಿಕಾರಿಗಳು!

  • ನಿಮ್ಮ ಭಾಗವಹಿಸುವಿಕೆ ಮುಖ್ಯ: ಸ್ಟಿಕ್ಕರ್ ಕೇವಲ ಸಮೀಕ್ಷಾ ತಂಡವು ಆ ಮನೆಗೆ ತಲುಪಿರುವುದನ್ನು ಮಾತ್ರ ಸೂಚಿಸುತ್ತದೆ. ನೇರ ಸಂವಹನ ನಡೆಯದ ಹೊರತು ಸಮೀಕ್ಷೆ ಪೂರ್ಣಗೊಂಡಿದೆ ಎಂದರ್ಥವಲ್ಲ. ತಮ್ಮ ಕುಟುಂಬವನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಿವಾಸಿಗಳು ಸಹಾಯವಾಣಿ ಅಥವಾ ಆನ್‌ಲೈನ್ ಪೋರ್ಟಲ್ ಅನ್ನು ಬಳಸಿ.
  • ಆನ್‌ಲೈನ್ ಸ್ವಯಂ ಘೋಷಣಾ ಪೋರ್ಟಲ್: https://schedulecastesurvey.karnataka.gov.in/selfdeclaration/
  • ಪರಿಶಿಷ್ಟ ಜಾತಿ ಸಮೀಕ್ಷಾ ಸಹಾಯವಾಣಿ: 9481359000 ಕರೆ ಮಾಡಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.