
ಬೆಂಗಳೂರು, ಜೂನ್ 17: ಶನಿವಾರದಿಂದ(ಜೂನ್ 20) ಕರ್ನಾಟಕದಾದ್ಯಂತ ಭಾರತೀಯ ಚುನಾವಣಾ ಆಯೋಗದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಮುಂದಿನ ಹಂತ ಅಧಿಕೃತವಾಗಿ ಆರಂಭವಾಗಲಿದೆ. ಇದರ ಬೆನ್ನಲ್ಲೇ ಅತಿಯಾದ ಕೆಲಸದ ಒತ್ತಡದ ವಿರುದ್ಧ ಬೂತ್ ಮಟ್ಟದ ಅಧಿಕಾರಿಗಳು (BLOs) ಬಂಡಾಯವೆದ್ದಿದ್ದಾರೆ. ತಮಗೆ ವಹಿಸಿರುವ ಈ ಚುನಾವಣಾ ಜವಾಬ್ದಾರಿಗಳಿಂದ ಮುಕ್ತಿ ನೀಡುವಂತೆ ಆಗ್ರಹಿಸಿ ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿಗಳ (CEO) ಕಚೇರಿ ಮುಂದೆ ಸುಮಾರು 500 ರಿಂದ 1,000 ಬಿಎಲ್ಒಗಳು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನೀಡಲಾಗಿರುವ ಅವಾಸ್ತವಿಕ ಗಡುವುಗಳು, ವಿಪರೀತ ಕೆಲಸದ ಹೊರೆ ಮತ್ತು ಹಿರಿಯ ಅಧಿಕಾರಿಗಳಿಂದ ಬರುತ್ತಿರುವ ತೀವ್ರ ಒತ್ತಡದ ವಿರುದ್ಧ ಬಿಎಲ್ಒ ಸಿಬ್ಬಂದಿ ಜಂಟಿಯಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ.
ಜೂನ್ 20 ರಿಂದ ಕರ್ನಾಟಕದಾದ್ಯಂತ ಈ ಮತದಾರರ ಪರಿಷ್ಕರಣೆಯ ಪೂರ್ವಭಾವಿ ಸಿದ್ಧತೆಗಳು ಆರಂಭವಾಗಲಿದ್ದು, ಜೂನ್ 30 ರಿಂದ ಮನೆ ಮನೆ ಸಮೀಕ್ಷೆ ತೀವ್ರಗೊಳ್ಳಲಿದೆ. ರಾಜ್ಯದ ಸಾವಿರಾರು ಬಿಎಲ್ಒಗಳು ಇದರಲ್ಲಿ ಭಾಗಿಯಾಗಬೇಕಿದೆ. ಆದರೆ ಯಾವುದೇ ತಳಮಟ್ಟದ ಸಿದ್ಧತೆ ಇಲ್ಲದೆ ಹೇರಲಾಗಿರುವ ಈ ಯೋಜನೆಯಿಂದಾಗಿ ಕ್ಷೇತ್ರ ಅಧಿಕಾರಿಗಳು ಹೈರಾಣಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ‘ಎದ್ದೇಳು ಕರ್ನಾಟಕ’ ಸಂಘಟನೆಯ ಟ್ರಸ್ಟಿ ತಾರಾ ರಾವ್ , ಚುನಾವಣಾ ಆಯೋಗದ ಪ್ರಸ್ತುತ ಎಸ್ಐಆರ್ (SIR) ಜವಾಬ್ದಾರಿಯಿಂದ ತಮಗೆ ಮುಕ್ತಿ ಬೇಕೆಂದು ಹಲವು ಅಧಿಕಾರಿಗಳು ಆಗ್ರಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನೂರಾರು ಅಧಿಕಾರಿಗಳು ಇಂದು ಸಿಇಒ ಕಚೇರಿ ಮುಂದೆ ಜಮಾಯಿಸಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.
‘ಎದ್ದೇಳು ಕರ್ನಾಟಕ’ ಸೇರಿದಂತೆ ಹಲವು ನಾಗರಿಕ ಸಂಘಟನೆಗಳು ಈ ಅವೈಜ್ಞಾನಿಕ ಪರಿಷ್ಕರಣಾ ಪ್ರಕ್ರಿಯೆಯ ವಿರುದ್ಧ ತೀವ್ರ ಕಳವಳ ವ್ಯಕ್ತಪಡಿಸಿವೆ. ಆತುರಾತುರವಾಗಿ ಜಾರಿಗೊಳಿಸುತ್ತಿರುವ ಈ ನಿಯಮಗಳಿಂದಾಗಿ ರಾಜ್ಯದ ಲಕ್ಷಾಂತರ ಜನ್ಮಸಿದ್ಧ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವ ಅಪಾಯವಿದೆ ಎಂದು ಸಂಘಟನೆಗಳು ಎಚ್ಚರಿಸಿವೆ.
ವಿಶೇಷವಾಗಿ ಸಮಾಜದ ಹಿಂದುಳಿದ ವರ್ಗಗಳಾದ ವಲಸೆ ಕಾರ್ಮಿಕರು, ದಲಿತರು ಮತ್ತು ಆದಿವಾಸಿಗಳು ಹಾಗೂ ಶೇ 50 ಕ್ಕಿಂತಲೂ ಹೆಚ್ಚು ಮಹಿಳಾ ಮತದಾರರ ಹೆಸರುಗಳು ತಾಂತ್ರಿಕ ಕಾರಣಗಳಿಂದ ಪಟ್ಟಿಯಿಂದ ಡಿಲೀಟ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಆಪಾದಿಸಿದ್ದಾರೆ. ನೆಲದ ಮೇಲಿನ ವಾಸ್ತವ ಪರಿಸ್ಥಿತಿಯನ್ನು ಅರಿಯದೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವ ಚುನಾವಣಾ ಆಯೋಗದ ವಿರುದ್ಧ ಇಂದಿನ ಪ್ರತಿಭಟನೆಯಲ್ಲಿ ಬಿಎಲ್ಒಗಳು ಧ್ವನಿ ಎತ್ತಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ