ಬೆಂಗಳೂರಿನಲ್ಲಿ ಇಂದು, ನಾಳೆ 2 ದಿನ ಚಿಕನ್ ಅಂಗಡಿಗಳು ಬಂದ್; ತ್ಯಾಜ್ಯ ಶುಲ್ಕದ ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು ಚಿಕನ್ ಅಂಗಡಿ ಬಂದ್: ಬೆಂಗಳೂರಿನಲ್ಲಿ BSWML ವಿಧಿಸಿರುವ ಚಿಕನ್ ತ್ಯಾಜ್ಯ ವಿಲೇವಾರಿ ಶುಲ್ಕ ವಿರೋಧಿಸಿ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಎರಡು ದಿನ ಬಂದ್‌ಗೆ ಕರೆ ನೀಡಿದೆ. ಇಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದ್ದು, ನಾಳೆ ನಗರದಾದ್ಯಂತ ಚಿಕನ್ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ.

ಬೆಂಗಳೂರಿನಲ್ಲಿ ಇಂದು, ನಾಳೆ 2 ದಿನ ಚಿಕನ್ ಅಂಗಡಿಗಳು ಬಂದ್; ತ್ಯಾಜ್ಯ ಶುಲ್ಕದ ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ
ಸಾಂದರ್ಭಿಕ ಚಿತ್ರ
Image Credit source: TV9 Network
Edited By:

Updated on: Sep 03, 2026 | 10:10 AM

ಮುಖ್ಯಾಂಶಗಳು

  • ಇಂದಿನಿಂದ ಎರಡು ದಿನ ಚಿಕನ್ ಅಂಗಡಿಗಳು ಬಂದ್
  • ಫ್ರೀಡಂ ಪಾರ್ಕ್‌ನಲ್ಲಿ ಇಂದು ಬೃಹತ್ ಪ್ರತಿಭಟನೆ
  • ತ್ಯಾಜ್ಯ ಶುಲ್ಕದ ವಿರುದ್ಧ ಅಂಗಡಿ ಮಾಲೀಕರ ಆಕ್ರೋಶ

ಬೆಂಗಳೂರು, ಸೆಪ್ಟೆಂಬರ್ 3: ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನ ಚಿಕನ್ ಅಂಗಡಿಗಳ ಬಂದ್‌ಗೆ ಕರೆ ನೀಡಲಾಗಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (ಬಿಎಸ್​ಡಬ್ಲ್ಯುಎಂಎಲ್) ಚಿಕನ್ ಅಂಗಡಿಗಳ ತ್ಯಾಜ್ಯ ವಿಲೇವಾರಿಗೆ ಪ್ರತಿ ಕೆಜಿಗೆ 5 ರೂಪಾಯಿ ಶುಲ್ಕ ನಿಗದಿ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಪ್ರತಿಭಟನೆ ನಡೆಸುತ್ತಿದೆ. ಇಂದು (ಸೆಪ್ಟೆಂಬರ್ 3) ಬೆಳಗ್ಗೆ 11 ಗಂಟೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿಕನ್ ಅಂಗಡಿಗಳು ಇಂದು ಬಂದ್ ಆಚರಿಸುತ್ತಿವೆ. ಇದೇ ವೇಳೆ, ಸೆಪ್ಟೆಂಬರ್ 4ರಂದು ನಗರದಾದ್ಯಂತ ಚಿಕನ್ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ಸಂಘಟನೆ ನಿರ್ಧರಿಸಿದೆ.

ಬೆಂಗಳೂರಿನಲ್ಲಿ 6ರಿಂದ 7 ಸಾವಿರ ಚಿಕನ್ ಅಂಗಡಿಗಳ ಮೇಲೆ ಪರಿಣಾಮ

ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಪ್ರಕಾರ, ಬಿಎಸ್​ಡಬ್ಲ್ಯುಎಂಎಲ್ ನಿಗದಿ ಮಾಡಿರುವ ತ್ಯಾಜ್ಯ ವಿಲೇವಾರಿ ಶುಲ್ಕದಿಂದ ಬೆಂಗಳೂರಿನ ಸುಮಾರು 6ರಿಂದ 7 ಸಾವಿರ ಚಿಕನ್ ಅಂಗಡಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಶುಲ್ಕವನ್ನು ಹಿಂಪಡೆಯಬೇಕು ಎಂಬುದು ಅಂಗಡಿ ಮಾಲೀಕರ ಪ್ರಮುಖ ಬೇಡಿಕೆಯಾಗಿದೆ.

ಪ್ರತಿದಿನ 2ರಿಂದ 3 ಲಕ್ಷ ಕೆಜಿ ಚಿಕನ್ ತ್ಯಾಜ್ಯ

ಸಂಘಟನೆ ನೀಡಿರುವ ಮಾಹಿತಿಯಂತೆ, ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 7 ಲಕ್ಷ ಕೆಜಿ ಚಿಕನ್ ಮಾರಾಟವಾಗುತ್ತಿದೆ. ಇದರಿಂದ ಪ್ರತಿದಿನ ಸುಮಾರು 2ರಿಂದ 3 ಲಕ್ಷ ಕೆಜಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಒಂದು ಚಿಕನ್ ಅಂಗಡಿಯಿಂದ ದಿನಕ್ಕೆ ಸರಾಸರಿ 30 ಕೆಜಿ ತ್ಯಾಜ್ಯ ಹೊರಬರುತ್ತದೆ ಎಂದು ಸಂಘಟನೆ ತಿಳಿಸಿದೆ. ಬಿಎಸ್​ಡಬ್ಲ್ಯುಎಂಎಲ್ ಪ್ರತಿ ಕೆಜಿ ತ್ಯಾಜ್ಯಕ್ಕೆ 5 ರೂಪಾಯಿ ಶುಲ್ಕ ನಿಗದಿ ಮಾಡಿರುವುದರಿಂದ, ಒಂದು ಅಂಗಡಿ ದಿನಕ್ಕೆ ಸುಮಾರು 150 ರೂಪಾಯಿ ಹಾಗೂ ತಿಂಗಳಿಗೆ ಸುಮಾರು 4,500 ರೂಪಾಯಿ ಪಾವತಿಸಬೇಕಾಗುತ್ತದೆ.

ತ್ಯಾಜ್ಯ ಶುಲ್ಕದ ವಿರುದ್ಧ ಅಂಗಡಿ ಮಾಲೀಕರ ಆಕ್ರೋಶ

ಚಿಕನ್ ಅಂಗಡಿಗಳ ತ್ಯಾಜ್ಯ ವಿಲೇವಾರಿಗೆ ಶುಲ್ಕ ವಿಧಿಸುವ ಬಿಎಸ್​ಡಬ್ಲ್ಯುಎಂಎಲ್ ಕ್ರಮವನ್ನು ವಿರೋಧಿಸಿ ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಲ್ಕದ ಹೊರೆ ಸಣ್ಣ ವ್ಯಾಪಾರಿಗಳ ಮೇಲೆ ಬೀಳಲಿದೆ ಎಂದು ಸಂಘಟನೆ ಆಕ್ಷೇಪಿಸಿದ್ದು, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದೆ.

ಹೀಗಾಗಿ ಇಂದು ಬೆಂಗಳೂರಿನಲ್ಲಿ ಚಿಕನ್ ಅಂಗಡಿಗಳ ಬಂದ್ ಜೊತೆಗೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದ್ದು, ನಾಳೆಯೂ ನಗರದಾದ್ಯಂತ ಬಂದ್ ಮುಂದುವರಿಯಲಿದೆ. ಇದರಿಂದ ಮುಂದಿನ ಎರಡು ದಿನ ಬೆಂಗಳೂರಿನಲ್ಲಿ ಚಿಕನ್ ಮಾರಾಟ ಹಾಗೂ ಗ್ರಾಹಕರಿಗೆ ಲಭ್ಯತೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us