ಬೆಂಗಳೂರಿನಲ್ಲಿ ಮತ್ತೊಂದು ಚೀಟಿ ಪಂಗನಾಮ: ಬರೋಬ್ಬರಿ 40 ಕೋಟಿ ರೂ.ನೊಂದಿಗೆ ದಂಪತಿ ಎಸ್ಕೇಪ್‌

ಬೆಂಗಳೂರಿನ ಜರಗನಹಳ್ಳಿಯಲ್ಲಿ ವಾಸವಾಗಿದ್ದ ದಂಪತಿ ಕೋಟ್ಯಾಂತರ ರೂಪಾಯಿ ಚೀಟಿ ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ಸುಧಾ ಮತ್ತು ಸಿದ್ದಿಚಾರಿ ದಂಪತಿ 600ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಪರಾರಿಯಾಗಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ವಂಚನೆಗೊಳಗಾದವರು ಆರೋಪಿಗಳನ್ನು ಬಂಧಿಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಮತ್ತೊಂದು ಚೀಟಿ ಪಂಗನಾಮ: ಬರೋಬ್ಬರಿ 40 ಕೋಟಿ ರೂ.ನೊಂದಿಗೆ ದಂಪತಿ ಎಸ್ಕೇಪ್‌
ಆರೋಪಿಗಳಾದ ಸುಧಾ, ಸಿದ್ದಿಚಾರಿ

Updated on: Jul 06, 2025 | 6:08 PM

ಬೆಂಗಳೂರು, ಜುಲೈ 06: ಚೀಟಿ ಹಣಕ್ಕಾಗಿ (Bengaluru Chit Fund Fraud) ಆಸೆ ಪಟ್ಟು ಅದೆಷ್ಟೋ ಜನರು ಮೋಸ ಹೋಗಿದ್ದಾರೆ. ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಚೀಟಿ ಹಣ ಕಟ್ಟಿಸಿಕೊಂಡು ದಂಪತಿ ಪರಾರಿಯಾಗಿರುವ ಘಟನೆ ಬೆಂಗಳೂರಿನ (Bengaluru) ಜರಗನಹಳ್ಳಿಯಲ್ಲಿ ನಡೆದಿದೆ. ಆರೋಪಿಗಳಾದ ಸುಧಾ ಮತ್ತು ಸಿದ್ದಿಚಾರಿ ಸುಮಾರು 40 ಕೋಟಿ ರೂ.‌ ಚೀಟಿ ಹಣ ಕಟ್ಟಿಸಿಕೊಂಡು ಪರಾರಿಯಾಗಿ ಒಂದು ತಿಂಗಳು ಕಳೆದಿದೆ. ಆದರೆ, ಇನ್ನೂವರೆಗೂ ಪೊಲೀಸರ ಬಲೆಗೆ ಬಿದ್ದಿಲ್ಲ.

ಪುಟ್ಟೇನಹಳ್ಳಿ ಠಾಣೆ ಪೊಲೀಸರು ಮೂರು ತಂಡಗಳಾಗಿ ಆರೋಪಿಗಳಾದ ಸುಧಾ ಮತ್ತು ಸಿದ್ದಾಚಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ ವಂಚನೆಗೆ ಒಳಗಾದವರು ಗೃಹ ಸಚಿವ ಜಿ‌.ಪರಮೇಶ್ವರ್ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೊರೆ ಹೋಗಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಹಿಡಿದು ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಏನಿದು ಪ್ರಕರಣ?

ಜರಗನಹಳ್ಳಿಯಲ್ಲಿ ವಾಸವಾಗಿದ್ದ ಸುಧಾ ಎಂಬುವರ ಕುಟುಂಬ ಕಳೆದ 20 ವರ್ಷದಿಂದ ಚೀಟಿ ಹಣ ನಡೆಸುತ್ತಿದೆ. ಈ ಕುಟುಂಬ ಸುಮಾರು 600ಕ್ಕೂ ಹೆಚ್ಚು ಜನರಿಂದ ಚೀಟಿ ಹಣ ಕಟ್ಟಿಸಿಕೊಂಡಿದೆ. ಸಾರ್ವಜನಿಕರು 5 ರಿಂದ 10 ಲಕ್ಷ ರೂ.ವರೆಗೂ ಚೀಟಿ ಹಣ ಕಟ್ಟಿದ್ದಾರೆ. ಆದರೆ, ಸುಧಾ ಮತ್ತು ಆಕೆಯ ಪತಿ ಸಿದ್ದಾಚಾರಿ ಕಳೆದ ಒಂದು ವರ್ಷದಿಂದ ಚೀಟಿ ಹಣ ನೀಡದೆ ಸತಾಯಿಸುತ್ತಿದ್ದರು. ಈ ನಡುವೆ ಸುಧಾ ಮತ್ತು ಸಿದ್ದಾಚಾರಿ ದಂಪತಿ ತಮ್ಮ ಇಬ್ಬರು ಮಕ್ಕಳ ಸಮೇತ ಜೂನ್​ 3ರ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಾರೆ.

ಇದನ್ನೂ ಓದಿ
ಇಡಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಪತ್ತೆ: ರನ್ಯಾ​ಗೆ ಸೇರಿದ ಆಸ್ತಿ ಜಪ್ತಿ
ಗುಡ್ ನ್ಯೂಸ್: ಶೀಘ್ರವೇ ಹೆಬ್ಬಾಳ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ
ದೇಶದ ಮೊದಲ ಸಂಪೂರ್ಣ ಯುಪಿಐ ಆಧಾರಿತ ಬ್ಯಾಂಕ್ ಶಾಖೆ ಬೆಂಗಳೂರಿನಲ್ಲಿ ಶುರು
ಬೆಂಗಳೂರು: ಅಪಾರ್ಟ್‌ಮೆಂಟ್​ನಲ್ಲಿ ಸಿಕ್ಕ ಅಸ್ಥಿಪಂಜರ ಪ್ರಕರಣಕ್ಕೆ ಟ್ವಿಸ್ಟ್

ಮನೆ ಬಿಟ್ಟು ಹೋಗುವ ಮುನ್ನ, ದಂಪತಿ ಬ್ಯಾಂಕ್‌ನಲ್ಲಿದ್ದ ತಮ್ಮ ಚಿನ್ನವನ್ನೆಲ್ಲ ಬಿಡಿಸಿಕೊಂಡಿದ್ದಾರೆ. ಬಳಿಕ, ಮನೆಯಲ್ಲೇ ಮೊಬೈಲ್ ಬಿಟ್ಟು, ಬೇರೆಲ್ಲ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ದಂಪತಿ ಕಾಣೆಯಾದ ಮರುದಿನ ಸುಧಾ ತವರು ಮನೆಯವರು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಬೆಸ್ಕಾಂ ಟೆಂಪರರಿ ಕನೆಕ್ಷನ್ ಪಡೆದವರ ಬವಣೆ: ಸರ್ಕಾರ ತೋರಬೇಕಿದೆ ಕರುಣೆ..!

ಚೀಟಿ ಹಣ ಕಟ್ಟಿದವರು ಕೂಡ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ, ಸುಧಾ ಕುಟುಂಬ ಕಳೆದ ಒಂದು ತಿಂಗಳಿಂದ ಪತ್ತೆಯಾಗಿಲ್ಲ. ಮೊಬೈಲ್ ಬಳಸುತ್ತಿಲ್ಲ, ಸಂಬಂಧಿಕರ ಸಂಪರ್ಕಕ್ಕೂ ಸಿಗದೆ ಸುಧಾ ಕುಟುಂಬ ಭೂಗತವಾಗಿದೆ. ಪುಟ್ಟೇನಹಳ್ಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವರದಿ: ಪ್ರದೀಪ್​ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:02 pm, Sun, 6 July 25