AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಡವರ ಹೊಟ್ಟೆಗೆ ಕನ್ನ ಹಾಕಿದ ಮಾಜಿ ಜಿ.ಪಂ ಸದಸ್ಯನ ಮಗ: ಯಾದಗಿರಿಯಲ್ಲಿ ಬಟಾ ಬಯಲಾಯ್ತು ಅಕ್ರಮ ಅಕ್ಕಿ ದಂಧೆ

ಯಾದಗಿರಿ ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ದಂಧೆ ಬಯಲಾಗಿದೆ. ಶಹಾಪುರ ತಾಲೂಕಿನ ಉಕ್ಕಿನಾಳ್ ತಾಂಡಾದಲ್ಲಿ 82 ಕ್ವಿಂಟಾಲ್ ಸರ್ಕಾರಿ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ದಂದೆಕೋರರು ಅಧಿಕಾರಿಗಳಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದಾರೆ. ಮಾಜಿ ಜಿ.ಪಂ ಸದಸ್ಯ ಕಿಶನ್ ರಾಠೋಡ್ ಪುತ್ರ ಲೋಹಿತ್ ರಾಠೋಡ್ ವಿರುದ್ಧ FIR ದಾಖಲಾಗಿದೆ. ಬಡವರಿಗಾಗಿ ಮೀಸಲಾದ ಅಕ್ಕಿ ಅಕ್ರಮವಾಗಿ ನೆರೆ ರಾಜ್ಯಗಳಿಗೆ ಸಾಗಿಸಲಾಗುತ್ತಿತ್ತು.

ಬಡವರ ಹೊಟ್ಟೆಗೆ ಕನ್ನ ಹಾಕಿದ ಮಾಜಿ ಜಿ.ಪಂ ಸದಸ್ಯನ ಮಗ: ಯಾದಗಿರಿಯಲ್ಲಿ ಬಟಾ ಬಯಲಾಯ್ತು ಅಕ್ರಮ ಅಕ್ಕಿ ದಂಧೆ
ಅನ್ನಭಾಗ್ಯ ಅಕ್ಕಿ ಹಗರಣ
ಅಮೀನ್​ ಸಾಬ್​
| Edited By: |

Updated on: Jul 21, 2026 | 8:37 PM

Share

ಯಾದಗಿರಿ, ಜು.21: ಬಡವರ ಹೊಟ್ಟೆ ತುಂಬಿಸಬೇಕಿದ್ದ ಸರ್ಕಾರದ ‘ಅನ್ನಭಾಗ್ಯ’ ಯೋಜನೆಯ ಅಕ್ಕಿ ದಂದೆಕೋರರ ಪಾಲಾಗುತ್ತಿರುವ ಗಂಭೀರ ಪ್ರಕರಣವೊಂದು ಯಾದಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶಹಾಪುರ ತಾಲೂಕಿನ ಉಕ್ಕಿನಾಳ್ ತಾಂಡಾದ ಬಳಿ ಅಕ್ರಮವಾಗಿ ನೂರಾರು ಕ್ವಿಂಟಾಲ್ ಅಕ್ಕಿ ಶೇಖರಿಸಿಟ್ಟಿದ್ದ ಗೋಡೌನ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ 82 ಕ್ವಿಂಟಾಲ್ ಅಕ್ಕಿಯನ್ನು ಸೀಜ್ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಖದೀಮರು ಅಧಿಕಾರಿಗಳಿಗೆ ಲಾರಿ ಸಮೇತ ಬೆಂಕಿ ಹಚ್ಚುವುದಾಗಿ ಬೆದರಿಕೆ ಒಡ್ಡಿದ ಹೈಡ್ರಾಮಾವೂ ನಡೆದಿದೆ.

ಉಕ್ಕಿನಾಳ್ ತಾಂಡಾದ ಜಮೀನೊಂದರ ಬಳಿ ಗೋಡೌನ್ ಮಾದರಿಯಲ್ಲಿ ಕಟ್ಟಡ ನಿರ್ಮಿಸಿ, ಬಡವರ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಹಾರ ಇಲಾಖೆಗೆ ಸಿಕ್ಕಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಬಿರಾದಾರ್ ಹಾಗೂ ತಂಡ ಪೊಲೀಸರ ನೆರವಿನೊಂದಿಗೆ ಸೋಮವಾರ ರಾತ್ರಿ ದಾಳಿ ನಡೆಸಿದೆ. ದಾಳಿಯ ವೇಳೆ ಗೋಡೌನ್‌ನಲ್ಲಿ 202 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಟ್ಟಿದ್ದ ಬರೋಬ್ಬರಿ 82 ಕ್ವಿಂಟಾಲ್ ಸರ್ಕಾರಿ ಅನ್ನಭಾಗ್ಯ ಅಕ್ಕಿ ಪತ್ತೆಯಾಗಿದ್ದು, ಅಧಿಕಾರಿಗಳು ಅದನ್ನು ಜಪ್ತಿ ಮಾಡಿದ್ದಾರೆ.

ಸೀಜ್ ಮಾಡಿದ ಅಕ್ಕಿಯನ್ನು ಶಹಾಪುರಕ್ಕೆ ಸಾಗಿಸಲು ಲಾರಿಗೆ ಲೋಡ್ ಮಾಡಿದ ತಕ್ಷಣ ಸ್ಥಳಕ್ಕೆ ಧಾವಿಸಿದ ದಂದೆಕೋರರ ತಂಡ, “ಅಕ್ಕಿ ತುಂಬಿದ ಲಾರಿಯನ್ನು ಹೇಗೆ ತೆಗೆದುಕೊಂಡು ಹೋಗುತ್ತೀರೋ ನೋಡುತ್ತೇವೆ, ಲಾರಿ ಸಮೇತ ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇವೆ” ಎಂದು ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳಿಗೆ ಬಹಿರಂಗವಾಗಿಯೇ ದಮ್ಕಿ ಹಾಕಿದೆ.

ದಂದೆಕೋರರ ಭೀತಿಯಿಂದಾಗಿ ಅಧಿಕಾರಿಗಳು ಲಾರಿಯನ್ನು ನೇರವಾಗಿ ಶಹಾಪುರದ ಗೋಡೌನ್‌ಗೆ ಕೊಂಡೊಯ್ಯಲು ಹೆದರಿ, ರಾತ್ರೋರಾತ್ರಿ ಗೋಗಿ ಪೊಲೀಸ್ ಠಾಣೆಯ ಅಂಗಳದಲ್ಲಿ ನಿಲ್ಲಿಸಿದ್ದಾರೆ. ಬಳಿಕ ಮಂಗಳವಾರ ಬೆಳಿಗ್ಗೆ ಲಾರಿಯನ್ನು ಆಹಾರ ಇಲಾಖೆಯ ಮುಖ್ಯ ಗೋಡೌನ್‌ಗೆ ತಂದು ಅನ್‌ಲೋಡ್ ಮಾಡಲಾಗಿದೆ.

ಇದನ್ನೂ ಓದಿ: ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ, ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

ಮಾಜಿ ಜಿ.ಪಂ ಸದಸ್ಯನ ಪುತ್ರನ ವಿರುದ್ಧ ಎಫ್‌ಐಆರ್

ಈ ಗಂಭೀರ ಅಕ್ರಮಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಅಧಿಕಾರಿಗಳು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕಿಶನ್ ರಾಠೋಡ್ ಅವರ ಪುತ್ರ, ಅಕ್ರಮ ಅಕ್ಕಿ ದಂದೆಯ ರೂವಾರಿ ಎನ್ನಲಾದ ಲೋಹಿತ್ ರಾಠೋಡ್ ವಿರುದ್ಧ ಗೋಗಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ಯಾದಗಿರಿ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಪಡಿತರ ಚೀಟಿದಾರರಿಂದ ಅಗ್ಗದ ದರಕ್ಕೆ ಅಕ್ಕಿ ಖರೀದಿಸುವ ಡೀಲರ್‌ಗಳು, ಅದನ್ನು ಈ ರೀತಿ ಸೀಕ್ರೆಟ್ ಗೋಡೌನ್‌ಗಳಲ್ಲಿ ಶೇಖರಿಸಿಡುತ್ತಾರೆ. ಬಳಿಕ ಈ ಅಕ್ಕಿಯನ್ನು ಮಹಾರಾಷ್ಟ್ರ ಸೇರಿದಂತೆ ನೆರೆ ರಾಜ್ಯಗಳಿಗೆ ಅಕ್ರಮವಾಗಿ ಸಾಗಿಸಿ, ಅಲ್ಲಿ ರೈಸ್ ಮಿಲ್‌ಗಳಲ್ಲಿ ಪಾಲಿಶ್ ಮಾಡಿ ಮೂರು ಪಟ್ಟು ಹೆಚ್ಚು ದರಕ್ಕೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಬಡವರ ಹೊಟ್ಟೆ ತಣಿಸಬೇಕಾದ ಪಡಿತರ ಅಕ್ಕಿ ಈ ರೀತಿ ದಂದೆಕೋರರ ಪಾಲಾಗುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಲಾಖೆಯು ಅಕ್ರಮ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಬೇಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us