
ಬೆಂಗಳೂರು, ಜುಲೈ 6: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಬೆಳೆಯುತ್ತಿರುವ ವೇಗಕ್ಕೆ ನಗರದ ಪ್ರಕೃತಿ ಮತ್ತು ಪರಿಸರ ಭಾರಿ ಬೆಲೆ ತೆರುತ್ತಿದೆ. ನಮ್ಮ ಮೆಟ್ರೋ ಮಾರ್ಗಗಳ ವಿಸ್ತರಣೆ, ರಸ್ತೆ ಅಗಲೀಕರಣ, ಫ್ಲೈಓವರ್ಗಳ ನಿರ್ಮಾಣ ಸೇರಿದಂತೆ ವಿವಿಧ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮದ ಅಬ್ಬರಕ್ಕೆ ಕಳೆದ ಮೂರು ವರ್ಷಗಳಲ್ಲಿ (2023 ರಿಂದ 2026 ರ ಜೂನ್ವರೆಗೆ) ನಗರದಲ್ಲಿ ಬರೋಬ್ಬರಿ 19,268 ಮರಗಳನ್ನು ನೆಲಸಮಗೊಳಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ಈ ಆಘಾತಕಾರಿ ವಿಚಾರ ತಿಳಿದುಬಂದಿದೆ.
ಜಿಬಿಎ ನೀಡಿರುವ ದತ್ತಾಂಶಗಳ ಪ್ರಕಾರ, ಕತ್ತರಿಸಲಾದ ಒಟ್ಟು ಮರಗಳ ಪೈಕಿ 7,683 ಮರಗಳು ವಿವಿಧ ಸರ್ಕಾರಿ ಮತ್ತು ಸಾರ್ವಜನಿಕ ಅಭಿವೃದ್ಧಿ ಯೋಜನೆಗಳಿಗಾಗಿ ಬಲಿಯಾಗಿವೆ. ಇನ್ನುಳಿದಂತೆ, ಅಪಾಯಕಾರಿಯಾಗಿದ್ದ ಮತ್ತು ಖಾಸಗಿ ಕಟ್ಟಡಗಳ ನಿರ್ಮಾಣಕ್ಕೆ ಅಡ್ಡಿಯಾಗಿದ್ದ 2,468 ಮರಗಳನ್ನು ತೆರವುಗೊಳಿಸಲಾಗಿದೆ. ಇದಲ್ಲದೆ, ನಗರದಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು ಗಗನಕ್ಕೇರಿರುವುದರಿಂದ, ಅನೇಕ ಖಾಸಗಿ ಆಸ್ತಿ ಮಾಲೀಕರು ತಮ್ಮ ಆವರಣದಲ್ಲಿದ್ದ ಮರಗಳನ್ನು ಕತ್ತರಿಸಲು ಮುಂದಾಗಿದ್ದು, ಈ ವಿಭಾಗದಲ್ಲೇ 7,902 ಮರಗಳು ಧರೆಗುರುಳಿವೆ. ಇಷ್ಟೇ ಅಲ್ಲದೆ, 2025-26ರ ಸಾಲಿನಲ್ಲಿ ಮುಂಗಾರು ಮಳೆ ವೇಳೆ ಮರ ಬಿದ್ದು ಅನಾಹುತ ಸಂಭವಿಸುವುದನ್ನು ತಡೆಯಲು ನಾಗರಿಕ ಸಂಸ್ಥೆಗಳೇ ಸ್ವಯಂಪ್ರೇರಿತವಾಗಿ 1,215 ಮರಗಳನ್ನು ಕತ್ತರಿಸಿವೆ. ಪ್ರಸ್ತುತ ಮತ್ತೊಂದು ಕಡೆ 1,092 ಮರಗಳನ್ನು ಕತ್ತರಿಸಲು ಅನುಮತಿ ನೀಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಜಿಬಿಎ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಬಿಎ ಅರಣ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು, ‘ನಾವು ಬೇಕಾಬಿಟ್ಟಿ ಮತ್ತು ಬೇಜವಾಬ್ದಾರಿಯುತವಾಗಿ ಮರಗಳನ್ನು ಕಡಿಯಲು ಬಿಡುವುದಿಲ್ಲ. ಪ್ರತಿ ಪ್ರಕರಣವನ್ನು ಮರ ತಜ್ಞರ ಸಮಿತಿಗೆ (TEC) ಒಪ್ಪಿಸಿ, ಸಾಧ್ಯವಾದಷ್ಟು ಮರಗಳನ್ನು ಬೇರೆಡೆಗೆ ಮರುನಾಟಿ (Transplantation) ಮಾಡಲು ಪ್ರಯತ್ನಿಸುತ್ತೇವೆ. ನಗರದ ಹಸಿರನ್ನು ಕಾಪಾಡಲು ವರ್ಷಕ್ಕೆ ಸುಮಾರು ಒಂದು ಲಕ್ಷ ಸಸಿಗಳನ್ನು ನೆಡುತ್ತಿದ್ದೇವೆ’ ಎಂದು ಸಮರ್ಥಿಸಿಕೊಂಡಿದ್ದಾರೆ. ಕೆಂಪೇಗೌಡ ಜಯಂತಿಯಂದು ಒಂದೇ ದಿನದಲ್ಲಿ ನಗರದಾದ್ಯಂತ 15 ಲಕ್ಷ ಸಸಿಗಳನ್ನು ನೆಡುವ ಬೃಹತ್ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿತ್ತು.
ಸಸಿ ನೆಡುವಿಕೆ ಮತ್ತು ಮರುನಾಟಿಗೆ ಸಂಬಂಧಿಸಿದ ಸರ್ಕಾರದ ಈ ವಾದವನ್ನು ಪರಿಸರ ತಜ್ಞರು ಒಪ್ಪುತ್ತಿಲ್ಲ. ಹೊಸದಾಗಿ ನೆಡುವ ಪುಟ್ಟ ಸಸಿಗಳು ಎಂದಿಗೂ ದಶಕಗಳಷ್ಟು ಹಳೆಯದಾದ ಬೃಹತ್ ಮರಗಳಿಗೆ ಪರ್ಯಾಯವಾಗಲು ಸಾಧ್ಯವಿಲ್ಲ. ಇನ್ಫೆಂಟ್ರಿ ರಸ್ತೆಯಂತಹ ಮುಕ್ತ ಹಸಿರು ಜಾಗಗಳಲ್ಲೇ ಸರ್ಕಾರಿ ಕಚೇರಿಗಳನ್ನು ನಿರ್ಮಿಸಲಾಗುತ್ತಿದೆ. ಮರಗಳನ್ನು ನಗರದ ಮಧ್ಯಭಾಗದಲ್ಲಿ ಕತ್ತರಿಸಿ, ನಗರದ ಹೊರವಲಯದಲ್ಲಿ ಸಸಿ ನೆಡುವುದರಿಂದ ನಗರದ ತಾಪಮಾನ ನಿಯಂತ್ರಣಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ನ ಟ್ರಸ್ಟಿ ದತ್ತಾತ್ರೇಯ ದೇವರೇ ಆತಂಕ ವ್ಯಕ್ತಪಡಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಸಿಎಂ ಆದ ಬಳಿಕ ನಡೆದ ಬೃಹತ್ ಕಾರ್ಯಕ್ರಮ ಹೇಗಾಯ್ತು? ಏನೆಲ್ಲಾ ವಿಶೇಷ?
‘ಅನುಮತಿಯಿಲ್ಲದೆ ರಸ್ತೆ ಬದಿಯ ನೂರಾರು ಮರಗಳನ್ನು ಕತ್ತರಿಸಲಾಗುತ್ತಿದೆ, ಇದಕ್ಕೆ ಯಾವುದೇ ನಿಗಾ ಇಲ್ಲ. ನೆಟ್ಟ ಸಸಿಗಳ ಬದುಕುಳಿಯುವಿಕೆಯ ಬಗ್ಗೆ ಉತ್ತರದಾಯಿತ್ವ ಬೇಕು. ಇದಕ್ಕಾಗಿ ನಗರದ ಎಲ್ಲಾ ಮರಗಳು ಮತ್ತು ಸಸಿಗಳನ್ನು ಮ್ಯಾಪ್ ಮಾಡಲು ಡಿಜಿಟಲ್ ಡೇಟಾಬೇಸ್ ಸಿದ್ಧಪಡಿಸಬೇಕು’ ಎಂದು ಮತ್ತೊಬ್ಬ ಪರಿಸರವಾದಿ ವಿಜಯ್ ನಿಶಾಂತ್ ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ