
ಬೆಂಗಳೂರು, ಜೂನ್ 3: ಮಧ್ಯಪ್ರಾಚ್ಯ ಸಂಘರ್ಷ, ಯುದ್ಧದ ಭೀತಿಯ ಪರಿಣಾಮ ನೇರವಾಗಿ ಸಾಮಾನ್ಯ ಜನರ ಅಡುಗೆ ಮನೆ ಹಾಗೂ ಹೋಟೆಲ್ ಉದ್ಯಮದ ಮೇಲೆ ತಟ್ಟಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ (Commercial LPG) ಸಿಲಿಂಡರ್ ದರ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಬೆಂಗಳೂರಿನ (Bengaluru) ಬಹುತೇಕ ಹೋಟೆಲ್ಗಳಲ್ಲಿ ಊಟ, ತಿಂಡಿ, ಕಾಫಿ ಮತ್ತು ಟೀ ದರಗಳನ್ನು ಹೆಚ್ಚಿಸಲು ಮಾಲೀಕರು ಸಜ್ಜಾಗಿದ್ದಾರೆ. ಈಗಾಗಲೇ ಕೆಲವು ಹೋಟೆಲ್ಗಳು ದರ ಏರಿಕೆ ಮಾಡಿದ್ದರೆ, ಇನ್ನುಳಿದ ಹೋಟೆಲ್ಗಳು ಈ ವಾರದಿಂದಲೇ ಹೊಸ ದರ ಪಟ್ಟಿಯನ್ನು ಜಾರಿಗೆ ತರಲು ಮುಂದಾಗಿವೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಬರೋಬ್ಬರಿ 1,240 ರೂ. ಏರಿಕೆಯಾಗಿದೆ. ಕಳೆದ ತಿಂಗಳು 991 ರೂ. ಹೆಚ್ಚಳವಾಗಿದ್ದರೆ, ಜೂನ್ 1 ರಂದು ಮತ್ತೆ 46 ರೂ. ಏರಿಕೆ ಮಾಡಲಾಗಿದೆ. ಇಷ್ಟಕ್ಕೇ ನಿಲ್ಲದ ಬೆಲೆ ಏರಿಕೆ ಮುಂಬರುವ ದಿನಗಳಲ್ಲಿ ಮತ್ತೆ 800 ರೂ. ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ 3,198 ರೂ.ಗೆ ಮಾರಾಟವಾಗುತ್ತಿರುವ ಸಿಲಿಂಡರ್ ಬೆಲೆ 4,000 ರೂ. ತಲುಪುವ ಮುನ್ಸೂಚನೆ ಸಿಕ್ಕಿರುವುದರಿಂದ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಗ್ರಾಹಕರ ಮೇಲೆ ಆರ್ಥಿಕ ಹೊರೆ ಹೊರಿಸಲು ಮುಂದಾಗಿದ್ದಾರೆ.
ಈ ಕುರಿತು ಮಾತನಾಡಿರುವ ವಿಲ್ಸನ್ ಗಾರ್ಡನ್ ಟಿಫಿನ್ ಸೆಂಟರ್ ಮಾಲೀಕ ಶ್ರೀನಿವಾಸ್ ಹಾಗೂ ದೋಸೆ ಕ್ಯಾಂಪ್ ಮಾಲೀಕ ಧನುಷ್, ‘ಗ್ಯಾಸ್ ಬಳಸದೇ ಅಡುಗೆ ಮಾಡಲು ಸಾಧ್ಯವಿಲ್ಲ. ಈಗಾಗಲೇ ರೈಸ್ ಬಾತ್ ದರವನ್ನು 30 ರೂ.ನಿಂದ 40 ರೂ.ಗೆ ಏರಿಸಲಾಗಿದೆ. ಕಮರ್ಷಿಯಲ್ ಗ್ಯಾಸ್ ಬೆಲೆ ಹೀಗೇ ಏರುತ್ತಿದ್ದರೆ ಹೋಟೆಲ್ ಉದ್ಯಮ ನಡೆಸುವುದು ಕಷ್ಟವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಅನಿವಾರ್ಯವಾಗಿ ಪ್ರತಿ ತಿಂಡಿಯ ಮೇಲೆ 5 ರಿಂದ 10 ರೂ.ವರೆಗೆ ದರ ಏರಿಕೆ ಮಾಡಲೇಬೇಕಾದ ಕಠಿಣ ಪರಿಸ್ಥಿತಿಯಲ್ಲಿದ್ದೇವೆ’ ಎಂದು ಅಳಲು ತೋಡಿಕೊಂಡಿದ್ದಾರೆ. ಸಾನಿಧ್ಯ ಹೋಟೆಲ್ ಮ್ಯಾನೇಜರ್ ಯೋಗೇಶ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಗ್ಯಾಸ್ ದರ ನೋಡಿಕೊಂಡು ಮತ್ತಷ್ಟು ಬೆಲೆ ಹೆಚ್ಚಳ ಮಾಡುವ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ
ಹೋಟೆಲ್ ತಿಂಡಿಗಳ ದರ ಏರಿಕೆಯಿಂದಾಗಿ ಕಚೇರಿ ನೌಕರರು, ಮಧ್ಯಮ ವರ್ಗದ ಕುಟುಂಬಗಳು ಹಾಗೂ ಬ್ಯಾಚುಲರ್ಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದ ಬಹುತೇಕ ಹೋಟೆಲ್ಗಳಲ್ಲಿ ಇಡ್ಲಿ-ವಡೆ, ದೋಸೆ ಮೇಲೆ 5 ರಿಂದ 10 ರೂ. ಹಾಗೂ ಊಟದ ಮೇಲೆ 10 ರಿಂದ 20 ರೂ. ವರೆಗೆ ದರ ಹೆಚ್ಚಿಸಲಾಗಿದೆ. ಕಾಫಿ-ಟೀ ಬೆಲೆಯೂ 2 ರಿಂದ 3 ರೂ. ದುಬಾರಿಯಾಗಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಗ್ರಾಹಕ ಶಿವಕುಮಾರ್, ‘ಹಿಂದೆ 40 ರೂ. ಇದ್ದ ಇಡ್ಲಿ ಈಗ 50 ರೂ. ಆಗಿದೆ. ನಮ್ಮ ಸಂಬಳ ಮಾತ್ರ ಹೆಚ್ಚುತ್ತಿಲ್ಲ, ನಿತ್ಯ ಊಟ-ತಿಂಡಿಗೆ 60 ರೂ. ಹೆಚ್ಚುವರಿ ಖರ್ಚಾಗುತ್ತಿರುವುದರಿಂದ ಒಂದು ಹೊತ್ತಿನ ಊಟ ಬಿಡುವ ಸ್ಥಿತಿ ಬಂದಿದೆ’ ಎಂದಿದ್ದಾರೆ. ಒಟ್ಟಾರೆಯಾಗಿ ಜಾಗತಿಕ ಯುದ್ಧದ ಎಫೆಕ್ಟ್ ಸಿಟಿ ಜನರ ಹಸಿವಿನ ಮೇಲೆ ಬರೆ ಎಳೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ