ಹೇಳಿದ್ದು ಗಿಳಿಶಾಸ್ತ್ರ, ಇಕ್ಕಿದ್ದು ದುಡ್ಡು, ಚಿನ್ನಾಭರಣಕ್ಕೆ ಗಾಳ! ಐಟಿ ಅಧಿಕಾರಿಗೆ ಲಕ್ಷಾಂತರ ರೂ. ಪಂಗನಾಮ

ಬೆಂಗಳೂರಿನಲ್ಲಿ ಐಟಿ ಅಧಿಕಾರಿಯೊಬ್ಬರಿಗೆ ಗಿಳಿಶಾಸ್ತ್ರದ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ ನಡೆದಿದೆ. ವರ್ಗಾವಣೆ ಮತ್ತು ಅಭಿವೃದ್ಧಿ ಆಮಿಷ ಒಡ್ಡಿ 35 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ಶೇಖರ್ ಎಂಬಾತ ಪರಾರಿಯಾಗಿದ್ದಾನೆ. ಒಂದು ವಾರ ಸತಾಯಿಸಿದ ನಂತರ ವಂಚನೆ ಅರಿತ ಅಧಿಕಾರಿ, ಭಾರತಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಹೇಳಿದ್ದು ಗಿಳಿಶಾಸ್ತ್ರ, ಇಕ್ಕಿದ್ದು ದುಡ್ಡು, ಚಿನ್ನಾಭರಣಕ್ಕೆ ಗಾಳ! ಐಟಿ ಅಧಿಕಾರಿಗೆ ಲಕ್ಷಾಂತರ ರೂ. ಪಂಗನಾಮ
ಸಾಂದರ್ಭಿಕ ಚಿತ್ರ
Image Credit source: TV9 Network
Edited By:

Updated on: Mar 10, 2026 | 9:09 AM

ಬೆಂಗಳೂರು, ಮಾರ್ಚ್ 10: ವರ್ಗಾವಣೆಯ ಆಸೆಯಿಂದ ಗಿಳಿಶಾಸ್ತ್ರ ಹೇಳುವವನನ್ನು ನಂಬಿದ ಆದಾಯ ತೆರಿಗೆ ಇಲಾಖೆಯ (IT) ಅಧಿಕಾರಿಯೊಬ್ಬರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bangalore) ಬೆಳಕಿಗೆ ಬಂದಿದೆ. ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಪಡೆದು ಪರಾರಿಯಾದ, ಗಿಳಿಶಾಸ್ತ್ರ ಹೇಳುತ್ತಿದ್ದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೆಲವು ವರ್ಷಗಳಿಂದ ಬೆಂಗಳೂರಿನ ಐಟಿ ಇಲಾಖೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯೊಬ್ಬರು ಕಳೆದ ಡಿಸೆಂಬರ್ ತಿಂಗಳಲ್ಲಿ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬಾತನ ಪರಿಚಯವಾಗಿತ್ತು. ಭಾರತಿನಗರದ ಶ್ರೀ ಸರ್ಕಲ್ ಬಳಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬಾತ, ಮುಖ ನೋಡಿ ಜಾತಕ ಹಾಗೂ ಭವಿಷ್ಯ ಹೇಳುತ್ತೇನೆ ಎಂದು ಅಧಿಕಾರಿಯನ್ನು ನಂಬಿಸಿದ್ದ.

ವಿಶೇಷ ಪೂಜೆ ನೆಪದಲ್ಲಿ 50 ಸಾವಿರ ರೂ. ಲೂಟಿ

ಜೀವನದಲ್ಲಿ ಅಭಿವೃದ್ಧಿ ಆಗಬೇಕಾದರೆ ವಿಶೇಷ ಪೂಜೆ ಮಾಡಿಸಬೇಕು ಎಂದು ಹೇಳಿದ ಗಿಳಿಶಾಸ್ತ್ರದ ಶೇಖರ್, ಅದಕ್ಕಾಗಿ ಆರಂಭದಲ್ಲಿ ಸುಮಾರು 50 ಸಾವಿರ ರೂಪಾಯಿ ಪಡೆದು ಪೂಜೆ ಮಾಡಿಸಿದ್ದ. ನಂತರವೂ ಆ ಅಧಿಕಾರಿಗೆ ಪದೇ ಪದೇ ಕರೆ ಮಾಡಿ ವಿವಿಧ ಪೂಜೆಗಳ ಬಗ್ಗೆ ಹೇಳುತ್ತಿದ್ದ.

ಇದೇ ವೇಳೆ ವರ್ಗಾವಣೆಯ ವಿಚಾರವಾಗಿ ಗಿಳಿಶಾಸ್ತ್ರ ಕೇಳಿದಾಗ, ದೊಡ್ಡ ಪೂಜೆ ಮಾಡಬೇಕು. ಅದಕ್ಕಾಗಿ ಮನೆಯಲ್ಲಿರುವ ಚಿನ್ನಾಭರಣಗಳನ್ನು ತರಬೇಕು ಎಂದು ಶೇಖರ್ ಸಲಹೆ ನೀಡಿದ್ದ. ಅವನ ಮಾತನ್ನು ನಂಬಿದ ಐಟಿ ಅಧಿಕಾರಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 194 ಗ್ರಾಂ ಚಿನ್ನಾಭರಣ ಮತ್ತು 1 ಕೆಜಿ 300 ಗ್ರಾಂ ಬೆಳ್ಳಿಯನ್ನು ತೆಗೆದುಕೊಂಡು ಹೋಗಿ ಆತನಿಗೆ ನೀಡಿದ್ದರು.

ಒಂದು ದಿನದಲ್ಲೇ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದ ಶೇಖರ್, ನಂತರ ‘ಪೂಜೆ ಇನ್ನೂ ಮುಗಿದಿಲ್ಲ’ ಎಂದು ಹೇಳಿ ಸುಮಾರು ಒಂದು ವಾರ ಕಾಲ ಅಧಿಕಾರಿಯನ್ನು ಸತಾಯಿಸಿದ್ದ. ಬಳಿಕ ಐಟಿ ಅಧಿಕಾರಿ ಭಾರತಿನಗರದ ಶ್ರೀ ಸರ್ಕಲ್ ಬಳಿ ಹೋದಾಗ ಅಲ್ಲಿಗೆ ಗಿಳಿಯೂ ಇಲ್ಲ, ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಕೂಡ ಇರಲಿಲ್ಲ. ಆತ ಅದಗಲೇ ಪರಾರಿಯಾಗಿದ್ದ.

ಇದನ್ನೂ ಓದಿ: ಕದ್ದ ವಾಹನಗಳನ್ನೇ ಬಳಸಿ ಮತ್ತೊಂದು ಕಳ್ಳತನ: ಅಂತಾರಾಜ್ಯ ಗ್ಯಾಂಗ್​ ಪೊಲೀಸ್​​ ಬಲೆಗೆ

ವಂಚನೆಗೆ ಒಳಗಾದ ವಿಚಾರ ತಿಳಿದು ಐಟಿ ಅಧಿಕಾರಿಯು ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶೇಖರ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us