ಬೆಂಗಳೂರಿನಲ್ಲಿ ಲವ್ ಜಿಹಾದ್; ದೆಹಲಿ ಕೇಸ್​ನಂತೆ ನಿನ್ನನ್ನು ತುಂಡು-ತುಂಡು ಮಾಡ್ತೀನಿ ಎಂದ ಪ್ರೇಮಿ

ಬೆಂಗಳೂರಿನಲ್ಲಿ ಲವ್ ಜಿಹಾದ್ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಹಿಂದೂ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ, ಹಣ ದೋಚಿದ ಮುಸ್ಲಿಂ ಯುವಕ ಉಸ್ಮಾನ್ ವಿರುದ್ಧ ಆರೋಪ ಕೇಳಿಬಂದಿದೆ. ಖಾಸಗಿ ಫೋಟೋ ಬಳಸಿ ಬ್ಲಾಕ್ ಮೇಲ್ ಮಾಡಿ, ಮತಾಂತರಕ್ಕೆ ಒತ್ತಡ ಹಾಕಲಾಗಿದೆ ಎಂದು ಯುವತಿ ಆರೋಪಿಸಿದ್ದು, 9 ತಿಂಗಳ ಹಿಂದೆಯೇ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಲವ್ ಜಿಹಾದ್; ದೆಹಲಿ ಕೇಸ್​ನಂತೆ ನಿನ್ನನ್ನು ತುಂಡು-ತುಂಡು ಮಾಡ್ತೀನಿ ಎಂದ ಪ್ರೇಮಿ
ದೆಹಲಿ ಕೇಸ್​ನಂತೆ ನಿನ್ನನ್ನು ತುಂಡು-ತುಂಡು ಮಾಡ್ತೀನಿ ಎಂದ ಪ್ರೇಮಿ
Updated By: ಭಾವನಾ ಹೆಗಡೆ

Updated on: Dec 05, 2025 | 9:06 AM

ಬೆಂಗಳೂರು, ಡಿಸೆಂಬರ್ 05: ಬೆಂಗಳೂರಿನಲ್ಲಿ ಲವ್ ಜಿಹಾದ್ (Love jihad) ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಹಿಂದೂ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ ಮುಸ್ಲಿಂ ಯುವಕ, ಲೈಂಗಿಕ ದೌರ್ಜನ್ಯ ಮಾಡಿದ ಘಟನೆ ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ಕಳೆದ ಮಾರ್ಚ್​ನಲ್ಲಿಯೇ ಪೊಲೀಸರಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಖಾಸಗೀ ಫೋಟೋ ಪಾಲಕರಿಗೆ ತೋರಿಸುವುದಾಗಿ ಬೆದರಿಕೆ

ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಆರೋಪಿ ಉಸ್ಮಾನ್, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗುವುದಲ್ಲದೇ ಲಕ್ಷಾಂತರ ರೂಪಾಯಿ ಹಣ ಮತ್ತು ಚಿನ್ನಾಭರಣ ದೋಚಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ದೈಹಿಕ ಮತ್ತು ಮಾನಸಿಕ ನೋವಿಗೊಳಗಾದ ಯುವತಿಯು 9 ತಿಂಗಳ ಹಿಂದೆಯೇ ಪೊಲೀಸರ ಮೊರೆ ಹೋಗಿದ್ದು, ಆರೋಪಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ತಿಳಿದು ಬಂದಿದೆ.

ಸ್ನೇಹಿತರಿಂದ ಯುವತಿಗೆ ಪರಿಚಯಗೊಂಡ ಉಸ್ಮಾನ್, ಸಂತ್ರಸ್ತೆಯನ್ನು ಪ್ರೀತಿಯ ಜಾಲಕ್ಕೆ ಬೀಳಿಸಿದ್ದ. ನಂತರ ಇಬ್ಬರೂ ಒಂದೂವರೆ ವರ್ಷಗಳ ಕಾಲ ಲಿವಿನ್ ಸಂಬಂಧದಲ್ಲಿದ್ದರು. ಈ ವೇಳೆ ಯುವತಿಯ ಖಾಸಗಿ ಫೋಟೋಗಳನ್ನು ತೆಗೆದಿದ್ದ ಆರೋಪಿ, ಯುವತಿಯು ಆತನೊಂದಿಗೆ ಸಂಬಂಧ ಕಡಿತಗೊಳಿಸಲು ಮುಂದಾದಾಗ ಆ ಖಾಸಗಿ ಫೋಟೋಗಳನ್ನು ಪಾಲಕರಿಗೆ ತೋರಿಸುವುದಾಗಿ ಬ್ಲಾಕ್ ಮೇಲ್ ಮಾಡಿದ್ದ. ಇದೇ ವೇಳೆ ಆರೋಪಿಯು ಯುವತಿಗೆ ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ಮಾಡಿದ್ದ.

ಇದನ್ನೂ ಓದಿ ಮದ್ವೆಯಾಗಿದ್ರೂ ಅತ್ತೆ ಮಗಳ ಮೇಲಾಸೆ: ಆಕೆ ದೂರವಾದ ಸಿಟ್ಟಿಗೆ ಮಾವ ಮಾಡಿದ್ದೇನು ಗೊತ್ತಾ?

9 ತಿಂಗಳಾದರೂ ಕ್ರಮ ಕೈಗೊಳ್ಳದ ಪೊಲೀಸರು

ಇದಾದ ಕೆಲ ತಿಂಗಳ ನಂತರ ವ್ಯಾಪಾರ ಮಾಡುವುದಾಗಿ ಹೇಳಿದ ಆರೋಪಿಯು ಯುವತಿಯಿಂದ ಹಣ ಕೇಳಿದ್ದ. ಆಕೆಯೂ ತನ್ನ ತಾಯಿ ಮತ್ತು ಸ್ನೇಹಿತರಿಂದ 12.2 ಲಕ್ಷ ರೂ. ಹಣ ಪಡೆದು ಆತನಿಗೆ ನೀಡಿದ್ದರು. ಆರೋಪಿಯು ಮತ್ತೊಮ್ಮೆ 2024ರ ಡಿಸೆಂಬರ್​ನಲ್ಲಿ ಹಣ ಕೇಳಿದಾಗ ಸಂತ್ರಸ್ತೆ 2 ಲಕ್ಷ ರೂ. ಬೆಲೆ ಬಾಳುವ 14.5 ಗ್ರಾಂನ ಚಿನ್ನಾಭರಣವನ್ನೂ ನೀಡಿದ್ದರು. ಜನವರಿಯ ಒಳಗಾಗಿ ಹಣ ಮತ್ತು ಚಿನ್ನ ಹಿಂದಿರುಗಿಸುತ್ತೇನೆಂದು ಹೇಳಿದ ಉಸ್ಮಾನ್ ವಾಪಾಸ್ ಮಾಡದಾಗ ಯುವತಿ ಪೊಲೀಸರ ಮೊರೆ ಹೋಗಿದ್ದಾರೆ.

ಉಸ್ಮಾನ್ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹಾಕುವುದಲ್ಲದೆ, ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ. ದೆಹಲಿ ಪ್ರಕರಣದಂತೇ ನಿನ್ನನ್ನು ತುಂಡು-ತುಂಡು ಮಾಡಿಬಿಡುತ್ತೇನೆ ಎಂದೂ ಬೆದರಿಕೆ ಹಾಕಿದ್ದ ಉಸ್ಮಾನ್ ವಿರುದ್ಧ ಮಾರ್ಚ್ ತಿಂಗಳಲ್ಲಿ ಸದ್ಗುಂಟೆಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದರಾದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೂ ಯತ್ನಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.