ಬೆಂಗಳೂರು ಮಹಾಲಕ್ಷ್ಮೀ ಕೊಲೆ: ಸ್ನೇಹಿತ ಅಶ್ರಫ್​ ಸೇರಿದಂತೆ ನಾಲ್ವರ ಮೇಲೆ ಕುಟುಂಬಸ್ಥರ ಅನುಮಾನ

Bengaluru Mahalaxmi Murder Case: ದೆಹಲಿ ಶ್ರದ್ಧಾ ಕೊಲೆ ಮಾದರಿಯಲ್ಲಿ ಬೆಂಗಳೂರಿನಲ್ಲೂ ನಡೆದಿದೆ. ಬೆಂಗಳೂರು ನಗರದ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ, 30ಕ್ಕೂ ಹೆಚ್ಚು ತುಂಡು ಮಾಡಿ ಪ್ರೀಜರ್​ನಲ್ಲಿ ತುಂಬಲಾಗಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಮಹಾಲಕ್ಷ್ಮೀ ಕೊಲೆ: ಸ್ನೇಹಿತ ಅಶ್ರಫ್​ ಸೇರಿದಂತೆ ನಾಲ್ವರ ಮೇಲೆ ಕುಟುಂಬಸ್ಥರ ಅನುಮಾನ
ಕೊಲೆಯಾದ ಮಹಾಲಕ್ಷ್ಮೀ
Edited By: ವಿವೇಕ ಬಿರಾದಾರ

Updated on: Sep 22, 2024 | 2:41 PM

ಬೆಂಗಳೂರು, ಸೆಪ್ಟೆಂಬರ್​ 22: ಬೆಂಗಳೂರು ನಗರದ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಾಲಕ್ಷ್ಮೀಯ ಬರ್ಬರ ಕೊಲೆ (Bengaluru Mahalaxmi Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮುಕ್ತ, ಶಶಿಧರ್, ಸುನೀಲ್ ಮತ್ತು ಅಶ್ರಫ್ ಎಂಬುವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ​​ಮುಕ್ತ, ಶಶಿಧರ್ ಮತ್ತು ಸುನೀಲ್ ಮೃತ ಮಹಾಲಕ್ಷ್ಮಿಯ ಸಹೋದ್ಯೋಗಿಗಳು. ಉತ್ತರಾಖಂಡ್ ಮೂಲದ ಅಶ್ರಫ್ ಮಹಾಲಕ್ಷ್ಮಿ ಜೊತೆ ಸಲುಗೆಯಿಂದ ಇದ್ದನು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಹಾಲಕ್ಷ್ಮಿ ತಾನು ಕೆಲಸ ಮಾಡುವ ಕಂಪನಿಯಲ್ಲಿ ಜಗಳ ಮಾಡಿಕೊಂಡಿದ್ದಳು ಎಂದು ಮಾಹಿತಿ ನೀಡಿದ್ದಾರೆ.

ಅಶ್ರಫ್‌ ಮೇಲೆ ನನಗೆ ಅನುಮಾನ ಇದೆ: ಮಹಾಲಕ್ಷ್ಮೀ ಪತಿ

ಮಹಾಲಕ್ಷ್ಮೀ ಸ್ನೇಹಿತ ಅಶ್ರಫ್‌ ಮೇಲೆ ನನಗೆ ಅನುಮಾನ ಇದೆ. ಈ ಹಿಂದೆ ನಾನು ನೆಲಮಂಗಲದಲ್ಲಿ ಅಶ್ರಫ್‌ ವಿರುದ್ಧ ದೂರು ಕೊಟ್ಟಿದ್ದೆ. ಅಶ್ರಫ್ ಉತ್ತರಾಖಂಡ್ ಮೂಲದವನು. ಒಂದು ದಿನ ಮಹಾಲಕ್ಷ್ಮೀ ಮೊಬೈಲ್​ ಚೆಕ್ ಮಾಡಿದಾಗ ಅಶ್ರಫ್‌ ಜೊತೆ ಸಂಪರ್ಕದಲ್ಲಿರುವುದು ತಿಳಿಯಿತು ಎಂದು ಕೊಲೆಯಾದ ಮಹಾಲಕ್ಷ್ಮೀ ಪತಿ ಹೇಮಂತ್ ದಾಸ್ ಹೇಳಿದ್ದಾರೆ.

ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಶನಿವಾರ ಮನೆ ಮಾಲೀಕರು ಫೋನ್ ಮಾಡಿದ್ದರು. ಮನೆ ಬಳಿ ಬಂದು ನೋಡಿದಾಗ ಮಹಾಲಕ್ಷ್ಮೀ ಕೊಲೆಯಾಗಿದ್ದಳು. ಮಹಾಲಕ್ಷ್ಮೀ ಕುಟುಂಬದವರು ಮೂಲತಃ ನೇಪಾಳದವರು. ಮಹಾಲಕ್ಷ್ಮೀ ಕುಟುಂಬ 35 ವರ್ಷಗಳಿಂದ ನೆಲಮಂಗಲದಲ್ಲಿ ವಾಸವಾಗಿದ್ದಳು. ನಮ್ಮದು ಅರೇಂಜ್ಡ್‌ ಮ್ಯಾರೇಜ್‌. ನನ್ನ ವಿರುದ್ಧ ಪೊಲೀಸ್​ ಠಾಣೆಗೆ ದೂರು ನೀಡಿದ್ದಳು. 9 ತಿಂಗಳ ಹಿಂದೆ ನನ್ನಿಂದ ಬೇರೆಯಾದಳು. ಮಗು ನನ್ನ ಬಳಿ ಇತ್ತು, ಮಗು ನೋಡಲು ತಿಂಗಳಿಗೊಮ್ಮೆ ಮಹಾಲಕ್ಷ್ಮೀ ಬರುತ್ತಿದ್ದಳು ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆ ಕೊಲೆ ಕೇಸ್​: ಮೃತಳೊಂದಿಗೆ ಸಂಪರ್ಕದಲ್ಲಿದ್ದ ಓರ್ವನ ಮೇಲೆ ಶಂಕೆ, ತಾಯಿ ದೂರಿನನ್ವಯ ಎಫ್​ಐಆರ್

ನೆಲಮಂಗಲದಲ್ಲಿ ನಾನು ಮೊಬೈಲ್‌ ಶಾಪ್‌ ಇಟ್ಟುಕೊಂಡಿದ್ದೇನೆ. ಮೊಬೈಲ್‌ ಶಾಪ್‌ನಲ್ಲೇ ಮಗುವನ್ನು ನೋಡಿಕೊಂಡು ವಾಪಸ್‌ ಹೋಗುತ್ತಿದ್ದಳು. 25 ದಿನಗಳ ಹಿಂದೆ ಮೊಬೈಲ್‌ ಶಾಪ್‌ಗೆ ಬಂದು ಮಗುವನ್ನು ನೋಡಿ ಹೋಗಿದ್ದಳು. ಮಗು ನೋಡಲು ಬಂದಾಗ ನನ್ನ ಜೊತೆ ಕೋಪದಲ್ಲೇ ಮಾತನಾಡುತ್ತಿದ್ದಳು ಎಂದು ಹೇಳಿದರು.

ಅಕ್ಕ-ನಾನು ಭೇಟಿಯಾಗಿ ಒಂದು ವರ್ಷ ಆಗಿತ್ತು: ಮಹಾಲಕ್ಷ್ಮೀ ತಂಗಿ

ಯಾರು ಕೊಲೆ ಮಾಡಿದ್ದಾರೆ ಅಂತ ಗೊತ್ತಿಲ್ಲ. ಅವರಿಗೆ ಶಿಕ್ಷೆ ಆಗಬೇಕು. ಪ್ರೀಜರ್​ನಲ್ಲಿ ದೇಹವನ್ನು ತುಂಡು ತುಂಡು ಮಾಡಿ ಇಟ್ಟಿದ್ದರು. ಅಕ್ಕ-ನಾನು ಭೇಟಿಯಾಗಿ ಒಂದು ವರ್ಷ ಆಗಿತ್ತು. ಅಕ್ಕ ಪತಿಯಿಂದ ಬೇರೆಯಾಗಿದ್ದಳು. ಕೊಲೆ ಯಾರು ಮಾಡಿದಾರೆ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಕೊಲೆಯಾದ ಮಹಾಲಕ್ಷ್ಮೀ ತಂಗಿ ಸಹೀದಾ ಒತ್ತಾಯಿಸಿದ್ದಾರೆ.

ಕೊನೆಯದಾಗಿ ಭೇಟಿ ಆಗಿದ್ದು ರಾಖಿ ಹಬ್ಬದ ದಿನ: ತಾಯಿ ಮೀನಾ

ನಾನು ನೆಲಮಂಗಲದಲ್ಲಿ ವಾಸವಿದ್ದೇನೆ. ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಇದೆ ಅಂತ ಮನೆ ಮಾಲೀಕರು ಕಾಲ್ ಮಾಡಿ ಹೇಳಿದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಂದು ಬೀಗ ತೆಗೆದು ನೋಡಿದಾಗ, ಮಗಳ ಹೆಣ ಫ್ರೀಜರ್​ನಲ್ಲಿ ಇತ್ತು. ಕೊನೆಯದಾಗಿ ರಾಖಿ ಹಬ್ಬದ ದಿನದಂದು ಮಗಳನ್ನು ಭೇಟಿ ಆಗಿದ್ದೆ ಎಂದು ಕೊಲೆಯಾದ ಮಹಾಲಕ್ಷ್ಮೀ ತಾಯಿ ಮೀನಾ ರಾಣಾ ಭಾವುಕರಾದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:34 pm, Sun, 22 September 24

Jagadisha B

ಜಗದೀಶ್​ ಬಸವರಾಜು ಟಿವಿ9 ಕನ್ನಡದ ವರದಿಗಾರರಲ್ಲಿ ಒಬ್ಬರು. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ.

Read More
Follow Us