ಯುವತಿಗೆ MBBS ಸೀಟ್ ಕೊಡಿಸುವುದಾಗಿ ನಂಬಿಸಿ 25 ಲಕ್ಷ ರೂ. ಮಕ್ಮಲ್​​ ಟೋಪಿ: ನಾಲ್ವರ ವಿರುದ್ಧ ದೂರು ದಾಖಲು

ಬೆಂಗಳೂರಿನಲ್ಲಿ MBBS ಸೀಟ್ ಕೊಡಿಸುವುದಾಗಿ ನಂಬಿಸಿ ಯುವತಿಗೆ 25 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಬನಶಂಕರಿ ಪೊಲೀಸರು ಡಾ. ಕೆ.ಪಿ. ಶರತ್ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಕಿಮ್ಸ್ ಕಾಲೇಜಿನಲ್ಲಿ ಸೀಟ್ ಕೊಡಿಸುವುದಾಗಿ ಹಣ ಪಡೆದು ಮೋಸ ಮಾಡಿರೋದಾಗಿ ದೂರಲಾಗಿದ್ದು, ಈ ಬಗ್ಗೆ ಯುವತಿಯ ತಂದೆ ಕಂಪ್ಲೇಂಟ್​ ನೀಡಿದ್ದರು.

ಯುವತಿಗೆ MBBS ಸೀಟ್ ಕೊಡಿಸುವುದಾಗಿ ನಂಬಿಸಿ 25 ಲಕ್ಷ ರೂ. ಮಕ್ಮಲ್​​ ಟೋಪಿ: ನಾಲ್ವರ ವಿರುದ್ಧ ದೂರು ದಾಖಲು
ಸಾಂದರ್ಭಿಕ ಚಿತ್ರ
Image Credit source: Google
Edited By:

Updated on: Mar 04, 2026 | 3:15 PM

ಬೆಂಗಳೂರು, ಮಾರ್ಚ್​​ 04: ಯುವತಿಗೆ MBBS ಸೀಟ್ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 25 ಲಕ್ಷ ರೂಪಾಯಿ ಹಣವನ್ನು ವಂಚಿಸಿರುವ ಆರೋಪ ಬೆಂಗಳೂರಲ್ಲಿ ಕೇಳಿಬಂದಿದೆ. ಆಯೇಷಾ ಖಥುಮ್​ ಎಂಬಾಕೆಗೆ ಸೀಟ್ ಕೊಡಿಸುವುದಾಗಿ ನಂಬಿಸಿದ್ದ ಡಾ.ಕೆ.ಪಿ. ಶರತ್ ಸೇರಿದಂತೆ ನಾಲ್ವರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಶಂಶೇರ್ ಬೇಗ್, ಸೈಯದ್ ತಬ್ರೇಜ್ ಮೂಲಕ ಸಂತ್ರಸ್ತ ಯುವತಿಗೆ ಡಾ.ಶರತ್ ಪರಿಚಯವಾಗಿದ್ದು, ಕಿಮ್ಸ್ ಕಾಲೇಜಿನಲ್ಲಿ ಸೀಟ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳ ವಿರುದ್ಧ BNS 318(4), 318(2) ಸೇರಿ ಒಟ್ಟು 8 ಸೆಕ್ಷನ್​​ಗಳ ಅಡಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಇರೋದೇನು?

ವಂಚನೆ ಬಗ್ಗೆ ಆಯೇಷಾ ಖಥುಮ್​ ಅವರ ತಂದೆ ಲಾಲ್ ಬಾಬು ಅವರ ದೂರಿನಂತೆ ಆರೋಪಿಗಳ ವಿರುದ್ಧ ಕೇಸ್​​ ದಾಖಲಾಗಿದೆ. ದ್ವಿತೀಯ ಪಿಯುಸಿ ಮತ್ತು NLT ಪರೀಕ್ಷೆಗಳನ್ನು ಬರೆದಿದ್ದ ಯುವತಿ MBBSಗೆ ಸೇರಿಕೊಳ್ಳುವ ಬಗ್ಗೆ ಯೋಚಿಸಿ, ಒಳ್ಳೆಯ ಕಾಲೇಜಿನಲ್ಲಿ ಸೀಟ್​​ಗಾಗಿ ಪ್ರಯತ್ನಿಸುತ್ತಿದ್ದರು. ಈ ನಡುವೆ ಪರಿಚಯದ ಸೈಯದ್‌ ತಬ್ರೇಜ್ ಮೂಲಕ ಶಂಶೇರ್ ಬೇಗ್ ಎಂಬಾತನ ಪರಿಚಯವಾಗಿತ್ತು. ಈತ ತನಗೆ ಕಿಮ್ಸ್‌ ಮೆಡಿಕಲ್ ಕಾಲೇಜಿನ ಪ್ರೆಸಿಡೆಂಟ್ ಪರಿಚಯವಿರುವುದಾಗಿ ಹೇಳಿ ಡಾ. ಶರತ್ ಕೆ.ಪಿ. ಎಂಬುವವರನ್ನು ಪರಿಚಯಿಸಿದ್ದ. ಅದರಂತೆ ಬನಶಂಕರಿ 2ನೇ ಹಂತದಲ್ಲಿನ ಕಿಮ್ಸ್‌ ಮೆಡಿಕಲ್ ಕಾಲೇಜಿನಲ್ಲಿ ಶರತ್​​ನ ಭೇಟಿಯಾಗಿದ್ದರು. ಈ ವೇಳೆ ಇದೇ ಕಾಲೇಜಿನಲ್ಲಿ ಆಯೇಷಾ ಖಥುಮ್​​ಗೆ ಸೀಟ್​​ ಕೊಡಿಸೋದಾಗಿ ನಂಬಿಸಿ ಶೈಕ್ಷಣಿಕ ದಾಖಲೆಗಳನ್ನು ಪಡೆಯಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ವಾಣಿಜ್ಯ, ಕೈಗಾರಿಕಾ ವಲಯಕ್ಕೆ ಶಾಕ್ ಕೊಟ್ಟ ಕೆಇಆರ್​ಸಿ; ವಿರೋಧದ ನಡುವೆ ವಿದ್ಯುತ್​​ ದರ ಏರಿಕೆ

ನಂತರ ಹೋಟೆಲ್​​ ಒಂದರಲ್ಲಿ ಭೇಟಿಯಾಗಿದ್ದ ಆರೋಪಿಗಳು ಡೊನೇಶನ್​​ ಆಗಿ 25 ಲಕ್ಷ ಹಣ ಕೊಟ್ಟರೆ ಸೀಟ್​​ ಪಕ್ಕಾ ಎಂದಿದ್ದರು. ಇವರ ಮಾತು ನಂಬಿ ಯುವತಿ ಕಡೆಯವರು ಹಂತ ಹಂತವಾಗಿ ಯುಪಿಐ, ಚೆಕ್​​ ರೂಪದಲ್ಲಿ 10 ಲಕ್ಷ ರೂ. ಹಣ ನೀಡಿದ್ದಾರೆ. ಬಳಿಕ ಆರೋಪಿಗಳ ಡಿಮ್ಯಾಂಡ್​​ ಹಿನ್ನೆಲೆ ಉಳಿದವ 15 ಲಕ್ಷವನ್ನ ನಗದು ರೂಪದಲ್ಲಿ ನೀಡಲಾಗಿದೆ. ಪೂರ್ತಿ ಹಣ ಕೈಸೇರಿದ ಮೇಲೆ ಆರೋಪಿಗಳು ತಮ್ಮ ಅಸಲಿ ರೂಪ ತೋರಿಸಿದ್ದು, ಮೆಡಿಕಲ್ ಸೀಟ್ ಕೊಡಿಸದೇ ವಂಚಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಡಾ. ಕೆ.ಪಿ ಶರತ್ ಎಂಬ ವ್ಯಕ್ತಿ ಕಿಮ್ಸ್​​ ಕಾಲೇಜಿನ ಪ್ರೆಸಿಡೆಂಟ್​​ ಅಲ್ಲ ಎಂಮಬ ವಿಚಾರ ಬಯಲಾಗಿದೆ. ಅಂತಿಮವಾಗಿ ತಾವು ಮೋಸ ಹೋಗಿದ್ದು ಅರಿತ ಯುವತಿ ಕಡೆಯವರು ಈ ಬಗ್ಗೆ ಪೊಲೀಸರ ಮೊರೆ ಹೋಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us