ಆರೆಂಜ್ ಲೈನ್ಗಾಗಿ 6500 ಮರ ಕಡಿಯಲು ಮುಂದಾದ ನಮ್ಮ ಮೆಟ್ರೋ: ಪರಿಸರ ಹೋರಾಟಗಾರರ ಜತೆ ಅಧಿಕಾರಿಗಳ ಸಭೆ
ಕೊನೆಗೂ ನಮ್ಮ ಮೆಟ್ರೋ ಯೆಲ್ಲೋ ಲೈನ್ ಲೋಕಾರ್ಪಣೆಯಾಗಿದೆ. ಇದೀಗ ಆರೆಂಜ್ ಲೈನ್ಗಾಗಿ ಸಿದ್ಧತೆ ನಡೆಯುತ್ತಿದೆ. ಇದೀಗ ಆರೆಂಜ್ ಲೈನ್ ಕಾಮಗಾರಿಗಾಗಿ ಬಿಎಂಆರ್ಸಿಎಲ್ 6500 ಮರಗಳನ್ನು ಕಡಿಯಲು ಮುಂದಾಗಿದ್ದು, ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಪರಿಸರ ಹೋರಾಟಗಾರರ ಜತೆಗೆ ಅಧಿಕಾರಿಗಳು ಸಭೆ ನಡೆಸಿ ಮಾತುಕತೆ ಮಾಡಿದ್ದಾರೆ.

ಬೆಂಗಳೂರು, ಆಗಸ್ಟ್ 19: ಈಗಾಗಲೇ ಬೆಂಗಳೂರಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಮರಗಳ ಮಾರಣಹೋಮ ಆಗಿದೆ. ಇದರಿಂದ ಬೆಂಗಳೂರಿಗರು ಬಿಸಿಲ ಬೇಗೆಯಲ್ಲಿ ತತ್ತರಿಸಿ ಹೋಗುವಂತಾಗಿದ್ದರೂ, ಇದೀಗ ಮತ್ತೆ ನಗರದಲ್ಲಿರುವ ಸಾವಿರಾರು ಮರಗಳನ್ನು ಕಡಿಯಲು ಬಿಎಂಆರ್ಸಿಎಲ್ (BMRCL) ಮುಂದಾಗಿದೆ. ಮೆಟ್ರೋ ಮೂರನೇ ಹಂತದ (Metro Phase 3) ಯೋಜನೆಗಾಗಿ ಬರೋಬ್ಬರಿ 6500 ಮರಗಳನ್ನು ಕಡಿಯಲು ಮತ್ತು ಸ್ಥಳಾಂತರಿಸಲು ತಿರ್ಮಾನ ಮಾಡಲಾಗಿದೆ. 1ನೇ ಕಾರಿಡಾರ್ ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ 32.15 ಕಿಲೋ ಮೀಟರ್ ಮಾರ್ಗದಲ್ಲಿ 21 ನಿಲ್ದಾಣಗಳು ಇರಲಿವೆ. 2ನೇ ಕಾರಿಡಾರ್ ಹೊಸಹಳ್ಳಿಯಿಂದ ಕಡಬಗೆರೆಯ ವರೆಗೂ ಇರಲಿದ್ದು, 12.50 ಕಿಲೋ ಮೀಟರ್ ಇರಲಿದೆ. ಇದರಲ್ಲಿ 9 ನಿಲ್ದಾಣಗಳು ಇರಲಿವೆ.
ಮೆಟ್ರೋ ಮೂರನೇ ಹಂತ: 44.65 ಕಿಮೀ ಉದ್ದದ ಮಾರ್ಗ
ಮೆಟ್ರೋ ಮೂರನೇ ಹಂತವು ಒಟ್ಟು 44.65 ಕಿ.ಮೀ ಉದ್ದವಿರುವ ಎರಡು ಮೆಟ್ರೋ ಮಾರ್ಗಗಳನ್ನು ಹೊಂದಿರಲಿದೆ. 15,611 ಕೋಟಿ ರೂ. ವೆಚ್ಚದಲ್ಲಿ ಎರಡು ಮಾರ್ಗಗಳ ಕಾಮಗಾರಿ ನಡೆಯಲಿದೆ. ಮರಗಳನ್ನು ಕಡಿಯುವ ಬಗ್ಗೆ ಪರಿಸರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಮ್ಮ ಮೆಟ್ರೋ ಅಧಿಕಾರಿಗಳು ಪರಿಸರ ಹೋರಾಟಗಾರರ ಸಭೆ ಕರೆದು ಮಾತುಕತೆ ನಡೆಸಿದ್ದಾರೆ. ಈ ಸಭೆಯಲ್ಲಿ ನೂರಾರು ಹೋರಾಟಗಾರರು ಭಾಗಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
11 ಸಾವಿರ ಮರಗಳನ್ನು ಕಡಿಯಲು ಸಿದ್ಧತೆ ಮಾಡಿದ್ದ ಬಿಎಂಆರ್ಸಿಎಲ್
ಈ ಹಿಂದೆ ಕಿತ್ತಳೆ ಮಾರ್ಗದ ಕಾಮಗಾರಿಗಾಗಿ 11 ಸಾವಿರ ಮರಗಳನ್ನು ಕಡಿಯಲು ಸಿದ್ಧತೆ ಮಾಡಿಕೊಂಡಿದ್ದ ಬಿಎಂಆರ್ಸಿಎಲ್, ಪರಿಸರ ಹೋರಾಟಗಾರರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಕಾರಣ ಸಂಖ್ಯೆ ಕಡಿತಗೊಳಿಸಿತ್ತು. ಇದೀಗ 6500 ಮರಗಳನ್ನು ಕಡಿಯಲು ತೀರ್ಮಾನ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಹಳದಿ ಮೆಟ್ರೋ ಮಾರ್ಗ ಆರಂಭ ಬೆನ್ನಲ್ಲೇ ಉಚಿತ ಫೀಡರ್ ಬಸ್ ಸೇವೆ
ಒಟ್ಟಿನಲ್ಲಿ, ನಗರದಲ್ಲಿ ಈಗಲೇ ಜನರಿಗೆ ಉಸಿರಾಡಲು ಶುದ್ಧವಾದ ಗಾಳಿ ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಮತ್ತೆ ಮತ್ತೆ ಮರಗಳನ್ನು ನಾಶ ಮಾಡುತ್ತಾ ಹೋದರೆ, ಬೆಂಗಳೂರು ಮತ್ತೊಂದು ದೆಹಲಿ ಆಗುವುದರಲ್ಲಿ ಅನುಮಾನವಿಲ್ಲ ಎಂದು ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.







