ಗಣೇಶ ಹಬ್ಬಕ್ಕೆ ಗ್ರಾಹಕರಿಗೆ ಮತ್ತೊಂದು ಸಂಕಷ್ಟ; ಬೇಳೆ ಕಾಳುಗಳ ದರ ಶೆ.20-30ರಷ್ಟು ಏರಿಕೆ

ಮಾರುಕಟ್ಟೆಗಳಿಗೆ ಮುಗಿಬಿದ್ದು ಜನ ಭರ್ಜರಿ ಶಾಪಿಂಗ್ ಮಾಡುತ್ತಿದ್ದಾರೆ. ಮನೆ ಅಲಂಕಾರ, ಗಣೇಶನನ್ನು ಕೂರಿಸಲು ಬೇಕಾದ ವಸ್ತುಗಳ ಖರೀದಿಯಲ್ಲಿ ಜನ ತೊಡಗಿದ್ದಾರೆ. ಆದರೆ ಬೇಳೆಕಾಳುಗಳ ದಿಢೀರ್ ದರ ಏರಿಕೆ ಗ್ರಾಹಕರಿಗೆ ಮತ್ತಷ್ಟು ಹೊಡೆತ ಕೊಟ್ಟಿದೆ. ಜೂನ್-ಜುಲೈನಲ್ಲಿ ಕಿಲೋಗೆ 130 ರಿಂದ 135 ರೂ.ಗೆ ಸಿಗುತ್ತಿದ್ದ 'ಒಬ್ಬಟ್ಟು' ತಯಾರಿಸುವ ಕಡಲೆ ಬೆಳೆ ಈಗ ಕೆಜಿಗೆ 165 ರಿಂದ 175 ರೂ.ಗೆ ಮಾರಾಟವಾಗುತ್ತಿದೆ.

ಗಣೇಶ ಹಬ್ಬಕ್ಕೆ ಗ್ರಾಹಕರಿಗೆ ಮತ್ತೊಂದು ಸಂಕಷ್ಟ; ಬೇಳೆ ಕಾಳುಗಳ ದರ ಶೆ.20-30ರಷ್ಟು ಏರಿಕೆ
ಬೇಳೆಕಾಳು
ಆಯೇಷಾ ಬಾನು

Updated on: Sep 15, 2023 | 7:07 AM

ಬೆಂಗಳೂರು, ಸೆ.15: ಗಣೇಶ ಹಬ್ಬಕ್ಕೆ(Ganesha Chaturthi) ಕೆಲವೇ ದಿನಗಳು ಬಾಕಿ ಇವೆ. ಆದರೆ ಬೆಂಗಳೂರಿಗರಿಗೆ ಈ ಗಣೇಶ ಹಬ್ಬ ಭಾರೀ ದುಬಾರಿ ಆಗಲಿದೆ. ಏಕೆಂದರೆ ಗಣೇಶ ಮೂರ್ತಿಗಳು ಮತ್ತು ಹಬ್ಬದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ನಡುವೆ ಮುಂಗಾರು(Monsson) ಮಳೆ ಕೈಕೊಟ್ಟ ಕಾರಣ ಬೇಳೆಕಾಳುಗಳ ಬೆಲೆಯಲ್ಲೂ ತೀವ್ರ ಏರಿಕೆ ಕಂಡು ಬಂದಿದೆ(Pulses). ರಾಜ್ಯದಲ್ಲಿ ಎದುರಾಗಿರುವ ಮಳೆಯ ಕೊರತೆಯು ಬೇಳೆಕಾಳುಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಬೇಳೆಕಾಳುಗಳ ಬೆಲೆಯಲ್ಲಿ 20-30% ಏರಿಕೆಯಾಗಿದೆ.

ಬೆಂಗಳೂರು ನಗರದ ಮಾರುಕಟ್ಟೆಗಳು ಗಣೇಶ ಹಬ್ಬದ ಸಂಭ್ರಮದಲ್ಲಿವೆ. ಮಾರುಕಟ್ಟೆಗಳಿಗೆ ಮುಗಿಬಿದ್ದು ಜನ ಭರ್ಜರಿ ಶಾಪಿಂಗ್ ಮಾಡುತ್ತಿದ್ದಾರೆ. ಮನೆ ಅಲಂಕಾರ, ಗಣೇಶನನ್ನು ಕೂರಿಸಲು ಬೇಕಾದ ವಸ್ತುಗಳ ಖರೀದಿಯಲ್ಲಿ ಜನ ತೊಡಗಿದ್ದಾರೆ. ಆದರೆ ಬೇಳೆಕಾಳುಗಳ ದಿಢೀರ್ ದರ ಏರಿಕೆ ಗ್ರಾಹಕರಿಗೆ ಮತ್ತಷ್ಟು ಹೊಡೆತ ಕೊಟ್ಟಿದೆ. ಜೂನ್-ಜುಲೈನಲ್ಲಿ ಕಿಲೋಗೆ 130 ರಿಂದ 135 ರೂ.ಗೆ ಸಿಗುತ್ತಿದ್ದ ‘ಒಬ್ಬಟ್ಟು’ ತಯಾರಿಸುವ ಕಡಲೆ ಬೆಳೆ ಈಗ ಕೆಜಿಗೆ 165 ರಿಂದ 175 ರೂ.ಗೆ ಮಾರಾಟವಾಗುತ್ತಿದೆ. 95 ರಿಂದ 100 ರೂ.ಗೆ ಸಿಗುತ್ತಿದ್ದ ಒಂದು ಕಿಲೋ ಹಸಿರುಬೇಳೆ ಈಗ ಕೆಜಿಗೆ 130 ರಿಂದ 135 ರೂ ಇದೆ. ಇತರ ಬೇಳೆಕಾಳುಗಳದ್ದೂ ಇದೇ ಕಥೆ ಆಗಿದೆ. ಪ್ರತಿ ಕಿಲೋಗೆ ಸರಾಸರಿ 30ರಿಂದ 40 ರೂ. ಏರಿಕೆಯಾಗಿದೆ.

ಇದನ್ನೂ ಓದಿ: ಬೇಳೆ ಕಾಳು ಮಾರಿ ಸ್ವಾವಲಂಬನೆ ಜೀವನ ನಡೆಸುತ್ತಿರುವ 98ರ ಶ್ರಮ ಜೀವಿ; ಮಾದರಿ ಬದುಕಿಗೆ ನೆಟ್ಟಿಗರ ಶ್ಲಾಘನೆ

ಕಡಿಮೆ ಪೂರೈಕೆ ಮತ್ತು ಹೆಚ್ಚಿನ ಬೇಡಿಕೆಯಿಂದಾಗಿ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಬೆಲೆಗಳು ಏರಿಕೆಯಾಗಿವೆ. ಈ ಬಾರಿಯ ಮುಂಗಾರು ಮಳೆ ಬೇಳೆಕಾಳುಗಳು ಮತ್ತು ಧಾನ್ಯಗಳ ಬೆಲೆಗಳ ಮೇಲೆ ಪರಿಣಾಮ ಬೀರಿದೆ ಎಂದು ಜಯನಗರದ ಧಾನ್ಯಗಳ ಸಗಟು ವ್ಯಾಪಾರಿಯೊಬ್ಬರು ಹೇಳಿದರು. ವರ್ಷದಲ್ಲಿ ಎರಡು ಸುತ್ತು ಬಿತ್ತನೆ ಮಾಡಿದರೂ, ಕಟಾವು ಅಪೇಕ್ಷಿತ ಮಟ್ಟಕ್ಕೆ ಬಂದಿಲ್ಲ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಕೆಸಿಸಿಐ) ಚುನಾಯಿತ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಕೂಡ ಬೇಳೆಕಾಳುಗಳ ಬೆಲೆ ಏರಿಕೆಗೆ ಮಳೆಯ ಕೊರತೆ ಕಾರಣ ಎಂದು ಹೇಳಿದ್ದಾರೆ.

“ಸರಿಯಾದ ಪ್ರಮಾಣದಲ್ಲಿ ಮಳೆಯಾಗದೇ ಇರುವುದೇ ಬೆಲೆ ಗಗನಕ್ಕೇರಲು ಪ್ರಮುಖ ಕಾರಣ. ಪ್ರಮುಖ ಬೇಳೆಕಾಳುಗಳಲ್ಲಿ ಒಂದಾದ ತೊಗರಿ ಬೇಳೆ ಬೆಳೆ ಮೊದಲ ಕೊಯ್ಲಿನಲ್ಲಿ ವಿಫಲವಾಗಿದೆ. ಹಾಗೆಯೇ ಕಡಲೆ ಬೆಳೆ ಮತ್ತು ಹುರಿಕಡಲೆ, ಎರಡೂ ಶೇಕಡಾ 30 ರಷ್ಟು ಬೆಳೆ ನಷ್ಟವಾಗಿದೆ. ಕಲಬುರಗಿ, ವಿಜಯಪುರ, ಬೀದರ್, ಯಾದಗಿರಿ ಮತ್ತು ರಾಯಚೂರು ದ್ವಿದಳ ಧಾನ್ಯಗಳ ಉತ್ಪಾದನೆಗೆ ಪ್ರಮುಖ ಜಿಲ್ಲೆಗಳಾಗಿದ್ದು, ಈ ಎಲ್ಲ ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. “ಮುಂದಿನ ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಮಳೆಯಾದರೆ, ಡಿಸೆಂಬರ್ ವೇಳೆಗೆ ಬೆಲೆಯಲ್ಲಿ ಸ್ವಲ್ಪ ಸ್ಥಿರತೆಯನ್ನು ನಾವು ನಿರೀಕ್ಷಿಸಬಹುದು. ಮಳೆಯಾದರೆ, ಶೇಕಡಾ 70 ರಷ್ಟು ಬೆಳೆ ಪುನಶ್ಚೇತನಗೊಳ್ಳಬಹುದು” ಎಂದು ಎಫ್‌ಕೆಸಿಸಿಐ ಚುನಾಯಿತ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಹೇಳಿದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Loading...
Unable to load recommendations.
Follow Us