ಪ್ರೀತಿಸಿದ ಹುಡುಗನ ವಶೀಕರಣ ಮಾಡುವುದಾಗಿ ನಂಬಿಸಿ ಯುವತಿಗೆ ಲಕ್ಷ ಲಕ್ಷ ವಂಚನೆ!
ಬೆಂಗಳೂರಿನಲ್ಲಿ ಇನ್ಸ್ಟಾಗ್ರಾಂ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಪ್ರೀತಿಸಿದ ಹುಡುಗನಿಗಾಗಿ ವಶೀಕರಣ ಜಾಹೀರಾತು ನಂಬಿ ಯುವತಿ ಲಕ್ಷಾಂತರ ರೂ. ಕಳೆದುಕೊಂಡರೆ, ಕಡಿಮೆ ಬಡ್ಡಿ ಸಾಲದ ಆಮಿಷಕ್ಕೆ ಮಹಿಳೆಯೊಬ್ಬರು ಹಣ ಕಳೆದುಕೊಂಡಿದ್ದಾರೆ. ಎರಡೂ ಪ್ರತ್ಯೇಕ ಪ್ರಕರಣಗಳಲ್ಲಿ ವಂಚಕರ ಮೇಲೆ ದೂರು ದಾಖಲಿಸಲಾಗಿದೆ.

ಬೆಂಗಳೂರು, ಜನವರಿ 04: ಆನ್ಲೈನ್ ನಲ್ಲಿ ವಶೀಕರಣ ಆ್ಯಡ್ ನಂಬಿ ಯುವತಿಯೊಬ್ಬಳು ಲಕ್ಷ ಲಕ್ಷ ಹಣ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿಸಿದ ಹುಡುನನ್ನು ವಶೀಕರಣ ಮಾಡಿಸುವಂಯತೆ ಕೇಳಿದಾಕೆಯಿಂದ 2 ಲಕ್ಷಕ್ಕೂ ಹೆಚ್ಚು ಹಣ ಪಡೆದ ಆಸಾಮಿ ಮೋಸಮಾಡಿದ್ದಾನೆ. ಈ ಕುರಿತು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನು ಮಾಡ್ತಿಯೋ ಮಾಡಿಕೋ ಎಂದಿದ್ದ ಗುರೂಜಿ
ಕಷ್ಟಕ್ಕೆ ಪರಿಹಾರ ನೀಡುತ್ತೇವೆ ಎಂದು ಕೃಷ್ಣಮೂರ್ತಿ ಗುರೂಜಿ ಎಂಬ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಜಾಹೀರಾತು ನೀಡಲಾಗಿತ್ತು. ಜಾಹೀರಾತಿನಲ್ಲಿ ನೀಡಿದ್ದ ಸಂಖ್ಯೆಗೆ ಕರೆ ಮಾಡಿದ ಯುವತಿಯೊಂದಿಗೆ ಚಂದ್ರಶೇಖರ್ ಸುಗತ್ ಗುರೂಜಿ ಎಂದು ತನ್ನನ್ನು ಪರಿಚಯಿಸಿಕೊಂಡ ವ್ಯಕ್ತಿ ಮಾತನಾಡಿದ್ದ.
ಪ್ರೀತಿಸಿದ ಯುವಕ ಸಿಗುತ್ತಾನೆಯೇ ಎಂದು ಕೇಳಿದ ಹುಡುಗಿಯ ಬಳಿ ಆತನ ಬಗ್ಗೆ ಮಾಹಿತಿ ಪಡೆದು ಮದುವೆ ಆಗುತ್ತದೆ, ಆದರೆ ಖರ್ಚಾಗುತ್ತದೆ ಎಂದು ನಂಬಿಸಿ ಹಂತಹಂತವಾಗಿ ಆನ್ಲೈನ್ ಮೂಲಕ 2.05 ಲಕ್ಷ ರೂಪಾಯಿ ಪಡೆದಿದ್ದಾನೆ. ನಂತರ ಮತ್ತೆ 4 ಲಕ್ಷ ಕೇಳಿದಾಗ ಅನುಮಾನಗೊಂಡ ಯುವತಿ ಹಣ ವಾಪಸ್ ಕೇಳಿದರೆ, ಏನು ಮಾಡ್ತಿಯೋ ಮಾಡಿಕೋ ಎಂದು ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಈ ಬಗ್ಗೆ ಯುವತಿ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ ನಿಧಿ ಆಸೆಗೆ ಪೋಷಕರಿಂದಲೇ ಮಗು ಬಲಿಗೆ ಯತ್ನ? 8 ತಿಂಗಳ ಕಂದಮ್ಮನ ರಕ್ಷಣೆ
ಫೈನಾನ್ಸ್ ಹೆಸರಲ್ಲಿ ಮೋಸ
ರಿಲಯಾನ್ಸ್ ಫೈನಾನ್ಸ್ ಹೆಸರಿನಲ್ಲಿ ಕಡಿಮೆ ಬಡ್ಡಿದರದಲ್ಲಿ 75 ಲಕ್ಷದವರೆಗೆ ಸಾಲ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿ ಮಹಿಳೆಯನ್ನು ವಂಚಿಸಿದ ಪ್ರಕರಣ ಬಯಲಾಗಿದೆ. ಪ್ರೊಸೆಸಿಂಗ್ ಫೀಸ್ ಎಂದು ಸುಮಾರು 30 ಸಾವಿರ ರೂಪಾಯಿ ಪಡೆದ ಬಳಿಕವೂ ಲೋನ್ ನೀಡದ ವಂಚಕರು, ಹಣ ಕೇಳಿದಾಗ ಕಚೇರಿಗೆ ಬನ್ನಿ ಎಂದು ಕರೆಸಿಕೊಂಡಿದ್ದಾರೆ. ನಂತರ ಅವಾಚ್ಯ ಪದಗಳಿಂದ ನಿಂದಿಸಿ ವಿಕೃತವಾಗಿ ವರ್ತಿಸಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಮಹಿಳೆ ಆರ್.ಆರ್.ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.