ಸಿಬಿಡಿ ಪ್ರದೇಶದ ಪಬ್ಗಳ ಮೇಲೆ ಬೆಂಗಳೂರು ಪೊಲೀಸ್ ದಾಳಿ: ಓರ್ವ ವಿದೇಶಿ ಮಹಿಳೆ ರಕ್ಷಣೆ
ಬೆಂಗಳೂರು ಕೇಂದ್ರ ವಿಭಾಗ ಪೊಲೀಸರು ಶುಕ್ರವಾರ ಸಂಜೆ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ ಪ್ರದೇಶದ ಪಬ್ಗಳ ಮೇಲೆ ದಾಳಿ ಮಾಡಿದ್ದು, ವಿವಿಧ ನಿಯಮಗಳು ಉಲ್ಲಂಘನೆಗಳಿಗಾಗಿ 20 ಪ್ರಕರಣಗಳನ್ನು ದಾಖಲಿಸಿದ್ದಾರೆ. ಕಾರ್ಯಚರಣೆ ವೇಳೆ ಓರ್ವ ವಿದೇಶಿ ಮಹಿಳೆ ರಕ್ಷಣೆ ಮಾಡಲಾಗಿದೆ.

ಬೆಂಗಳೂರು, ಆಗಸ್ಟ್ 26: ಬೆಂಗಳೂರು ಕೇಂದ್ರ ವಿಭಾಗ ಪೊಲೀಸರು (Bengaluru police) ಶುಕ್ರವಾರ ಸಂಜೆ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (CBD) ಪ್ರದೇಶದ ಪಬ್ಗಳ ಮೇಲೆ ದಾಳಿ ಮಾಡಿದ್ದು, ವಿವಿಧ ನಿಯಮಗಳು ಉಲ್ಲಂಘನೆಗಳಿಗಾಗಿ 20 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಕುರಿತಾಗಿ ಬೆಂಗಳೂರು ಕೇಂದ್ರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಆರ್.ಶ್ರೀನಿವಾಸ್ ಗೌಡ ಪ್ರತಿಕ್ರಿಯೆ ನೀಡಿದ್ದು, ವಿವಿಧ ಉಲ್ಲಂಘನೆಗಳಿಗಾಗಿ ನಾವು 20 ಪ್ರಕರಣಗಳನ್ನು ದಾಖಲಿಸಿದ್ದೇವೆ. ಮಧ್ಯರಾತ್ರಿ 1 ಗಂಟೆಯ ನಂತರ ವಾಣಿಜ್ಯ ಸಂಸ್ಥೆಗಳನ್ನು ತೆರೆದಿರುವವರ ವಿರುದ್ಧ ನಾವು ಕೆಪಿ ಕಾಯ್ದೆಯಡಿ 13 ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.
2 ಅಕ್ರಮ ಕಳ್ಳಸಾಗಾಣಿಕೆ ಕಾಯ್ದೆಯಲ್ಲಿ ಹೋಟೆಲ್ ಮ್ಯಾನೇಜರ್ ವಿರುದ್ಧ ಕೇಸ್ ದಾಖಲು ಮಾಡಲಾಗಿದ್ದು, ಕಾರ್ಯಚರಣೆಯಲ್ಲಿ ಓರ್ವ ವಿದೇಶಿ ಮಹಿಳೆಯ ರಕ್ಷಣೆ ಮಾಡಲಾಗಿದೆ. ಅದೇ ರೀತಿಯಾಗಿ ಪಾದಚಾರಿಗಳ ವಿರುದ್ಧ 291 ಐಪಿಸಿ ಅಡಿಯಲ್ಲಿ, ಸಾರ್ವಜನಿಕ ಉಪದ್ರವದ ವಿರುದ್ಧ 5 ಪ್ರಕರಣಗಳು ಸೇರಿದಂತೆ ಸಾರ್ವಜನಿಕ ತೊಂದರೆಗಾಗಿ ತೃತೀಯ ಲಿಂಗಿಗಳ ವಿರುದ್ಧ ಒಂದು ಕೇಸ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸರಣಿ ಗ್ಯಾಸ್ ಸಿಲಿಂಡರ್ ಕಳ್ಳತನ: ಇಬ್ಬರ ಬಂಧನ
ಇನ್ನು ಇತ್ತೀಚೆಗೆ ಅನೈತಿಕ ಚಟುವಟಿಕೆ ನಡೆಸಿದ ಆರೋಪ ಕೇಳಿ ಬಂದ ಹಿನ್ನೆಲೆ, ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ನಲ್ಲಿ ಏಕಕಾಲದಲ್ಲಿ ದಾಳಿ ಮಾಡಿದ್ದು, 25 ವಿದೇಶಿಗರನ್ನ ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಕೈ ಕೊಟ್ಟ ಮುಂಗಾರು ಮಳೆ, ಕೆಆರ್ಎಸ್ನಲ್ಲೂ ನೀರಿಲ್ಲ; ಬೆಂಗಳೂರಿಗೆ ಕಾದಿದೆ ನೀರಿನ ಸಮಸ್ಯೆ
ವಶಕ್ಕೆ ಪಡೆದ ಆಫ್ರಿಕನ್ ಪ್ರಜೆಗಳಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ನಾರ್ಕೋಟಿಕ್ ಟೆಸ್ಟ್ ಮಾಡಿಸಲಾಗಿತ್ತು. ಈ ವೇಳೆ 6 ಮಂದಿ ಡ್ರಗ್ ಸೇವನೆ ಮಾಡಿರೋದು ದೃಢಪಟ್ಟಿತ್ತು. ಇನ್ನು ಇಬ್ಬರು ಆರೋಪಿಗಳ ವೀಸಾ ಅವಧಿ ಮುಗಿದಿರೋದು ಕಂಡು ಬಂದಿತ್ತು. ಇಷ್ಟೇ ಅಲ್ಲ ಪೊಲೀಸರ ದಾಳಿ ವೇಳೆ ಓರ್ವ ಆರೋಪಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ರಿಂದ ಆತನ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆ ಮೂಲಕ ಬೆಂಗಳೂರಿನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದವರಿಗೆ ಶಾಕ್ ನೀಡಿದ್ದರು. ಪಬ್, ಬಾರ್, ರೆಸ್ಟೋರೆಂಟ್ ಮಾಲೀಕರಿಗೂ ಈ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ಕೊಟ್ಟಿದ್ದರು.
ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:49 pm, Sat, 26 August 23