ಬೆಂಗಳೂರಲ್ಲಿ ವರುಣಾರ್ಭಟ: ನಗರದ ಹಲವೆಡೆ ಧಾರಾಕಾರ ಮಳೆ; ಸಂಚಾರ ಅಸ್ತವ್ಯಸ್ತ

ಬೆಂಗಳೂರು ನಗರದ ಹಲವೆಡೆ ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆಯಾಗಿದೆ. ಶಾಂತಿನಗರ, ಕೋರಮಂಗಲ, ಜಯನಗರ, ಮೆಜೆಸ್ಟಿಕ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿದೆ. ಮಳೆಯಿಂದಾಗಿ ವಾಹನ ಸಂಚಾರ ಮಂದಗತಿಯಲ್ಲಿದ್ದು, ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಇನ್ನು ದಿಢೀರ್‌ ಮಳೆಗೆ ನಗರದ ಜನಜೀವನ ಅಸ್ತವ್ಯಸ್ತವಾಗಿದೆ.

ಬೆಂಗಳೂರಲ್ಲಿ ವರುಣಾರ್ಭಟ: ನಗರದ ಹಲವೆಡೆ ಧಾರಾಕಾರ ಮಳೆ; ಸಂಚಾರ ಅಸ್ತವ್ಯಸ್ತ
ಮಳೆ

Updated on: Jun 13, 2026 | 6:18 PM

ಬೆಂಗಳೂರು, ಜೂನ್​​ 13: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೂ (Karnataka) ಮುಂಗಾರು ಚುರುಕುಗೊಂಡಿದೆ. ಅದರಲ್ಲೂ ಸಿಲಿಕಾನ್​ ಸಿಟಿಯ ವಾತಾವರಣ ಸಂಪೂರ್ಣ ಬದಲಾಗಿದೆ. ಸಂಜೆಯಾಗುತ್ತಿದ್ದಂತೆ ನಗರದ ಹಲವೆಡೆ ಧಾರಾಕಾರ ಮಳೆ (Rain) ಆರಂಭವಾಗಿದ್ದು, ಸಾರ್ವಜನಿಕರ ಜನಜೀವನ ಮತ್ತು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇನ್ನು ಮಳೆಯಿಂದಾಗಿ ಹಲವೆಡೆ ಟ್ರಾಫಿಕ್ ಜಾಮ್​​ ಕೂಡ ಉಂಟಾಗಿದೆ.

ಮುಖ್ಯಾಂಶಗಳು

  • ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆ
  • ಮಳೆಯಿಂದ ಮಂದಗತಿಯಲ್ಲಿ ವಾಹನಗಳ ಸಂಚಾರ
  • ಫ್ಲೈಓವರ್, ಸ್ಕೈವಾಕ್ ಕೆಳಗೆ ಆಶ್ರಯ ಪಡೆದ ಸವಾರರು

ಎಲ್ಲೆಲ್ಲಿ ಮಳೆ?

ಮೆಜೆಸ್ಟಿಕ್, ಕಾರ್ಪೊರೇಷನ್, ಶಾಂತಿನಗರ, ರಿಚ್‌ಮಂಡ್ ಸರ್ಕಲ್, ಕೋರಮಂಗಲ, ವಿಲ್ಸನ್ ಗಾರ್ಡನ್, ಕೆ.ಆರ್. ಮಾರ್ಕೆಟ್, ಜಯನಗರ, ಜೆ.ಪಿ. ನಗರ, ಶಿವಾನಂದ ಸರ್ಕಲ್, ಗಾಂಧಿನಗರ ಬಜಾರ್, ಲಾಲ್ ಬಾಗ್, ಚಿಕ್ಕಪೇಟೆ ಸುತ್ತಮುತ್ತ ಮತ್ತು ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಮಳೆರಾಯ ಆರ್ಭಟಿಸಿದೆ. ಮಳೆಯಿಂದಾಗಿ ಗಾಂಧಿ ಬಜಾರ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಇದನ್ನೂ ಓದಿ: Karnataka Weather Forecast: ನಾಳೆಯಿಂದ ರಾಜ್ಯದಲ್ಲಿ ಮುಂದಿನ ಮೂರು ದಿನ ವರುಣದ್ದೇ ಹಾವಳಿ!

ಮಳೆಯ ತೀವ್ರತೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನಗಳ ಸಂಚಾರ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ದಿಢೀರ್‌ ಆರಂಭವಾದ ಮಳೆಯಿಂದಾಗಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಆಶ್ರಯಕ್ಕಾಗಿ ಫ್ಲೈ ಓವರ್‌ಗಳು ಮತ್ತು ಬಸ್ ನಿಲ್ದಾಣಗಳ ಕೆಳಗೆ ಆಶ್ರಯ ಪಡೆದಿರುವುದು ಕಂಡುಬಂತು.

Bengaluru Heavy Rain: ಜೆಸ್ಟಿಕ್​, ಕಾರ್ಪೊರೇಷನ್ ವೃತ್ತ, ಶಿವಾನಂದ ವೃತ್ತ ಸೇರಿ ಹಲವೆಡೆ ಭಾರೀ ಮಳೆ | #TV9D

ಇನ್ನು ನಿನ್ನೆ ತಡರಾತ್ರಿ ಕೂಡ ನಗರದಲ್ಲಿ ಸುರಿದ ಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿತ್ತು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ರಾತ್ರಿ ಸುರಿದ ಮಳೆಗೆ ಬೆಂಗಳೂರು-ಹೊಸೂರು ರಸ್ತೆಯಲ್ಲಿ ಸಂಪೂರ್ಣವಾಗಿ ನೀರು ನಿಂತಿತ್ತು. ರಸ್ತೆ ಮೇಲೆ ನೀರು ನದಿಯಂತೆ ಹರಿದಿತ್ತು. ಹೆಣ್ಣೂರು-ಬಾಗಲೂರು ರಸ್ತೆಯೂ ಜಲಾವೃತವಾಗಿತ್ತು. ನ್ಯೂ ಏರ್ ರ್ಪೋರ್ಟ್ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ರೈತರ ಮೊಗದಲ್ಲಿ ಮಂದಹಾಸ

ಇತ್ತ ಬೆಂಗಳೂರು ದಕ್ಷಿಣ ಜಿಲ್ಲೆ ರೇಷ್ಮೆನಗರಿ ರಾಮನಗರದಲ್ಲೂ ಧಾರಾಕಾರ ಮಳೆ ಸುರಿದಿದೆ. ಅರ್ಧಗಂಟೆ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ವರದಿ: ನಟರಾಜ್​​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:16 pm, Sat, 13 June 26

Follow Us