
ಬೆಂಗಳೂರು, ಫೆಬ್ರವರಿ 12: ಬೆಂಗಳೂರಿನ (Bangalore) ಹೆಚ್ಎಎಲ್ (HAL) ರಸ್ತೆಯಲ್ಲಿ ನಡೆದ ಭಯಾನಕ ಘಟನೆಯೊಂದು ಸಾರ್ವಜನಿಕರನ್ನು ಬೆಚ್ಚಿಬೀಳುವಂತೆ ಮಾಡಿದೆ. ಕಾರು ಮತ್ತು ಗೂಡ್ಸ್ ವಾಹನ ಚಾಲಕರ ನಡುವೆ ಸಣ್ಣ ಗಲಾಟೆ ನಡೆದು, ಬಳಿಕ ಕಾರು ಚಾಲಕ ಗೂಡ್ಸ್ ವಾಹನದ ಚಾಲಕನನ್ನು ತನ್ನ ಕಾರಿನ ಬಾನೆಟ್ ಮೇಲೆ ಹೊತ್ತೊಯ್ದ ಘಟನೆ ಬುಧವಾರ ಮಧ್ಯಾಹ್ನ ಸುಮಾರು 12.45ರ ಸುಮಾರಿಗೆ ನಡೆದಿದೆ. ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, ಗೂಡ್ಸ್ ವಾಹನ ಮತ್ತು ಕಾರು ಟಚ್ ಆಗಿದ್ದ ಹಿನ್ನೆಲೆಯಲ್ಲಿ ಇಬ್ಬರು ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ವಾಹನಕ್ಕೆ ಉಂಟಾದ ನಷ್ಟದ ಪರಿಹಾರ ನೀಡುವಂತೆ ಗೂಡ್ಸ್ ವಾಹನದ ಚಾಲಕ ನಂಜುಂಡ ಕೇಳಿದ್ದಾನೆ. ಇದರಿಂದ ಇಬ್ಬರ ಮಧ್ಯೆ ವಾಗ್ವಾದ ಹೆಚ್ಚಾಗಿ, ನಂಜುಂಡ ಕಾರಿನ ಮುಂದೆ ನಿಂತಿದ್ದ ವೇಳೆ ಕಾರು ಚಾಲಕ ಸುರೇಶ್ ಏಕಾಏಕಿ ಕಾರು ಚಾಲನೆ ಮಾಡಿದ್ದಾನೆ. ಪರಿಣಾಮ, ನಂಜುಂಡ ಕಾರಿನ ಬಾನೆಟ್ ಮೇಲೆ ಬಿದ್ದು ಸುಮಾರು ಒಂದು ಕಿಲೋಮೀಟರ್ಗೂ ಹೆಚ್ಚು ದೂರ ಒಯ್ಯಲ್ಪಟ್ಟಿದ್ದಾನೆ.
ನಂಜುಂಡ ಜೋರಾಗಿ ಕಿರುಚುತ್ತಿದ್ದರೂ ಚಾಲಕ ಕಾರನ್ನು ನಿಲ್ಲಿಸದೆ ಸಾಗಿದ ದೃಶ್ಯ ರಸ್ತೆಬದಿ ಸಾಗುತ್ತಿದ್ದ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ಕೆಂಪು ಬಣ್ಣದ ಕಾರಿನ ಚಲನವಲನ ಗಮನಿಸಿದ ಕೆಲವರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ.
ಟ್ರಿನಿಟಿ ಜಂಕ್ಷನ್ ಬಳಿ ಆರಂಭವಾದ ಗಲಾಟೆ ಬಳಿಕ ಸಿಬಿ ಜಂಕ್ಷನ್ ಹಾಗೂ ASC ಸೆಂಟರ್ ಕಾಲೇಜು ವರೆಗೆ ಮುಂದುವರಿದಿದ್ದು, ಇತರೆ ಕ್ಯಾಬ್ ಚಾಲಕರು ಅಡ್ಡಹಾಕಿದ ಬಳಿಕ ಚಾಲಕ ಕಾರು ನಿಲ್ಲಿಸಿದ್ದಾನೆ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಡಬಲ್ ಮರ್ಡರ್: ಹೆತ್ತ ತಂದೆ-ತಾಯಿಯನ್ನೇ ಕೊಂದ ಮಗ
ಘಟನೆಗೆ ಸಂಬಂಧಿಸಿ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇವಲ ಒಂದು ಗಂಟೆಯಲ್ಲೇ ಆರೋಪಿಯಾಗಿದ್ದ ಕಾರು ಚಾಲಕ ಸುರೇಶ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಕಾರನ್ನು ಸೀಜ್ ಮಾಡಲಾಗಿದ್ದು, ಆರೋಪಿಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ವರದಿ: ನಟರಾಜ್, ಟಿವಿ9 ಬೆಂಗಳೂರು