
ಬೆಂಗಳೂರು, ಏಪ್ರಿಲ್ 07: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಗೆ ಪರಿಚಯವಾಗಿದ್ದ ವ್ಯಕ್ತಿ ಸೇರಿ ಇಬ್ಬರು ಮಹಿಳೆಯ ಖಾಸಗಿ ಫೋಟೋಗಳನ್ನು ವೈರಲ್ ಮಾಡೋದಾಗಿ ಬೆದರಿಸಿ ಆಕೆಯಿಂದ 2 ಕೆಜಿ ಚಿನ್ನ ಹಾಗೂ 40 ಲಕ್ಷ ಹಣ ಪೀಕಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಈ ಬಗ್ಗೆ ಸಂತ್ರಸ್ತ ಮಹಿಳೆ ನೀಡಿದ್ದ ದೂರಿನ ಅನ್ವಯ ಆಂಧ್ರ ಮೂಲದ ಚೆನ್ನೂರು ಮಹೇಶ್ ಮತ್ತು ವನ್ನೂರು ಸ್ವಾಮಿ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 571 ಗ್ರಾಂ ಚಿನ್ನಾಭರಣ, 25 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.
ಒಂದೂವರೆ ವರ್ಷದ ಹಿಂದೆ ಸ್ನ್ಯಾಪ್ ಚಾಟ್ನಲ್ಲಿ ಮಹಿಳೆಯೊಬ್ಬರಿಗೆ ಪರಿಚಯವಾಗಿದ್ದ ಆರೋಪಿಗಳು, ಮೆಲ್ಲಗೆ ಆಕೆಯ ನಂಬರ್ ಎಕ್ಸ್ಚೇಂಜ್ ಮಾಡಿಕೊಂಡಿದ್ದರು. ನಂತರ ವಾಟ್ಸ್ ಆ್ಯಪ್ ವಿಡಿಯೋ ಕಾಲ್ ಮಾಡುವಾಗ ಮಹಿಳೆಗೆ ತಿಳಿಯದಂತೆ ಸ್ಕ್ರೀನ್ ಶಾಟ್ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಇದನ್ನೇ ಅಸ್ತ್ರವಾಗಿಸಿಕೊಂಡು ಅಸಲಿ ಆಟ ಶುರು ಮಾಡಿದ್ದರು. ನಿನ್ನ ಖಾಸಗಿ ಫೋಟೋಗಳನ್ನು ಗಂಡನಿಗೆ ಕಳಿಸುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ಹಾಕ್ತೇವೆ ಎಂದು ಬೆದರಿಸಿದ್ದ ಕಿರಾತಕರು, ಹಂತಹಂತವಾಗಿ ಮಹಿಳೆಯಿಂದ 40 ಲಕ್ಷ ಹಣ ಮತ್ತು 2 ಕೆಜಿ ಚಿನ್ನಾಭರಣವನ್ನು ಪೀಕಿದ್ದರು. ಆರೋಪಿಗಳ ಕಾಟ ತಾಳಲಾರದೆ ಮಹಿಳೆ ಕೊನೆಗೆ ತನ್ನ ಪತಿಗೆ ಈ ಬಗ್ಗೆ ವಿಷಯ ತಿಳಿಸಿದ್ದು, ಘಟನೆ ಸಂಬಂಧ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಇದನ್ನೂ ಓದಿ: ‘ಬೆತ್ತಲೆ ವೀಡಿಯೋ ಕಾಲ್ ಮಾಡು ಎಂದು ಪೀಡಿಸುತ್ತಾರೆ’: ಬಸವಜಯ ಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ!
ಇನ್ನು ಆರೋಪಿ ವನ್ನೂರು ಸ್ವಾಮಿಗೆ ಚೆನ್ನೂರು ಮಹೇಶ್ ಮೂಲಕ ಮಹಿಳೆಯ ಪರಿಚಯವಾಗಿತ್ತು. ಯಾವಾಗ ಮಹೇಶನ ಬಳಿ ಆಕೆಯ ಫೋಟೋ, ವಿಡಿಯೋಗಳು ಇರುವ ಬಗ್ಗೆ ಗೊತ್ತಾಯ್ತೋ ಈತನೂ ಮಹೇಶನ ಜೊತೆ ಸೇರಿಕೊಂಡು ಮಹಿಳೆಗೆ ಬೆದರಿಸಿ ಹಣ, ಚಿನ್ನಾಭರಣ ಪೀಕಿದ್ದ. ಮಹಿಳೆಯಿಂದ ಪಡೆದಿದ್ದ ಹಣದಲ್ಲಿ ಬೆಟ್ಟಿಂಗ್ ಆಡ್ತಿದ್ದ ಆರೋಪಿಗಳು ಸಾಕಷ್ಟು ಹಣ ಕಳೆದುಕೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಮತ್ತೊಂದು ಕಡೆ ಇಬ್ಬರ ಮೊಬೈಲ್ ಪರಿಶೀಲಿಸಿದ ಪೊಲೀಸರೇ ಶಾಕ್ ಆಗಿದ್ದಾರೆ. ಯಾಕಂದ್ರೆ ಕೇವಲ ಈ ಮಹಿಳೆ ಮಾತ್ರವಲ್ಲ, ಇನ್ನು ಅನೇಕ ಯುವತಿಯರ ಮತ್ತು ಮಹಿಳೆಯರ ಖಾಸಗಿ ಫೋಟೋಗಳು ಫೋನ್ನಲ್ಲಿ ಪತ್ತೆಯಾಗಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.