ಮತ್ತಿಕೆರೆಯಲ್ಲಿ ನಿರ್ಮಾಣವಾಗಲಿದೆ 199 ಕೋಟಿ ರೂ. ವೆಚ್ಚದ ಬೃಹತ್ ‘ಡಬಲ್ ಡೆಕ್ಕರ್’ ಫ್ಲೈ ಓವರ್!

ಬೆಂಗಳೂರಿನ ಸಬ್ ಅರ್ಬನ್ ರೈಲ್ವೆ ಯೋಜನೆಯಡಿ ಮತ್ತಿಕೆರೆಯಲ್ಲಿ 199 ಕೋಟಿ ರೂ. ವೆಚ್ಚದಲ್ಲಿ 1.2 ಕಿ.ಮೀ ಉದ್ದದ ಬೃಹತ್ 'ಡಬಲ್ ಡೆಕ್ಕರ್' ಫ್ಲೈ ಓವರ್ ನಿರ್ಮಾಣಕ್ಕೆ ಕೆ-ರೈಡ್ ನಿರ್ಧರಿಸಿದೆ. ನಮ್ಮ ಮೆಟ್ರೋ ಮಾದರಿಯಲ್ಲೇ ಕೆಳಗೆ ರಸ್ತೆ, ಮಧ್ಯೆ ಮೇಲ್ಸೇತುವೆ ಹಾಗೂ ಮೇಲ್ಭಾಗದಲ್ಲಿ ರೈಲು ಸಂಚರಿಸಲಿದ್ದು, ಯಶವಂತಪುರ-ಮತ್ತಿಕೆರೆ ಭಾಗದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲಿದೆ.

ಮತ್ತಿಕೆರೆಯಲ್ಲಿ ನಿರ್ಮಾಣವಾಗಲಿದೆ 199 ಕೋಟಿ ರೂ. ವೆಚ್ಚದ ಬೃಹತ್ ಡಬಲ್ ಡೆಕ್ಕರ್ ಫ್ಲೈ ಓವರ್!
ಮತ್ತಿಕೆರೆಯ ಶ್ಯಾಮ್ ಪ್ರಸಾದ್ ಮುಖರ್ಜಿ ಮೇಲ್ಸೇತುವೆ ರಸ್ತೆ ಭಾಗದಲ್ಲಿ 'ಡಬಲ್ ಡೆಕ್ಕರ್' ಫ್ಲೈ ಓವರ್
Edited By:

Updated on: Jul 22, 2026 | 7:34 AM

ಮುಖ್ಯಾಂಶಗಳು

  • ಮತ್ತಿಕೆರೆಯಲ್ಲಿ ನೂತನವಾಗಿ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣವಾಗುತ್ತಿದೆ.
  • 199 ಕೋಟಿ ವೆಚ್ಚದಲ್ಲಿ ಕೆ-ರೈಡ್ ಈ ಯೋಜನೆಗೆ ಪ್ಲಾನ್ ಮಾಡಿದೆ.
  • ಈ ಹೊಸ ಯೋಜನೆಯಿಂದ ಯಶವಂತಪುರ ಮತ್ತಿಕೆರೆಯಲ್ಲಿ ಟ್ರಾಫಿಕ್ ಸಮಸ್ಯೆ ಕ್ಲಿಯರ್ ಆಗಲಿದೆ.

ಬೆಂಗಳೂರು, ಜುಲೈ 22: ಮೆಟ್ರೋ ಸಿಟಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಹೊಸ ರೂಪ ನೀಡಲು ಮತ್ತು ಟ್ರಾಫಿಕ್ ಸಮಸ್ಯೆಯಿಂದ ಜನರನ್ನು ಮುಕ್ತರನ್ನಾಗಿಸಲು ರೈಲ್ವೆ ಇಲಾಖೆ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗದಲ್ಲಿ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ವರೆಗೆ ಈಗಾಗಲೇ ನಿರ್ಮಿಸಲಾಗಿರುವ ಡಬಲ್ ಡೆಕ್ಕರ್ ಫ್ಲೈ ಓವರ್ ಮಾದರಿಯಲ್ಲೇ, ಇದೀಗ ಬೆಂಗಳೂರು ಉಪನಗರ ರೈಲು ಯೋಜನೆಯಿಂದಲೂ (BSRP) ಡಬಲ್ ಡೆಕ್ಕರ್ ಕಾಮಗಾರಿ ಆರಂಭಿಸಲು ಯೋಜನೆ ರೂಪಿಸಲಾಗಿದೆ.

199 ಕೋಟಿ ರೂ. ವೆಚ್ಚದಲ್ಲಿ 1.2 ಕಿ.ಮೀ ಉದ್ದದ ಕಾರಿಡಾರ್

ಸಬ್ ಅರ್ಬನ್ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ‘ಕೆ-ರೈಡ್’ (K-RIDE) ಸಂಸ್ಥೆಯು ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ಸಂಪರ್ಕಿಸುವ ‘ಮಲ್ಲಿಗೆ’ (ಕಾರಿಡಾರ್-2) ಮಾರ್ಗದಲ್ಲಿ ಈ ವಿಶಿಷ್ಟ ಯೋಜನೆಯನ್ನು ಜಾರಿಗೆ ತರುತ್ತಿದೆ. ನಗರದ ಮತ್ತಿಕೆರೆಯ ಶ್ಯಾಮ್ ಪ್ರಸಾದ್ ಮುಖರ್ಜಿ ಮೇಲ್ಸೇತುವೆ ರಸ್ತೆ ಭಾಗದಲ್ಲಿ ಸುಮಾರು 1.2 ಕಿಲೋಮೀಟರ್ ವಿಸ್ತೀರ್ಣದಲ್ಲಿ ₹199 ಕೋಟಿ ವೆಚ್ಚದಲ್ಲಿ ಈ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣವಾಗಲಿದೆ.

ಕೆಳಭಾಗದಲ್ಲಿ ಸಾಮಾನ್ಯ ರಸ್ತೆ ಸಂಚಾರ, ಮೊದಲ ಹಂತದಲ್ಲಿ ವಾಹನಗಳ ಸಂಚಾರಕ್ಕೆ ಮೇಲ್ಸೇತುವೆ ಮತ್ತು ಎರಡನೇ ಹಂದಲ್ಲಿ ಸಬ್ ಅರ್ಬನ್ ರೈಲುಗಳ ಸಂಚಾರಕ್ಕಾಗಿ ಎಲಿವೇಟೆಡ್ ಕಾರಿಡಾರ್ ಸೇರಿ ತಂತ್ರಜ್ಞಾನ ಆಧಾರಿತ ಫ್ಲೈ ಓವರ್‌ನಲ್ಲಿ 3 ಹಂತದ ಸಂಚಾರ ವ್ಯವಸ್ಥೆ ಇರಲಿದೆ.

ಪ್ರಮುಖ ನಿಲ್ದಾಣಗಳು

ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರದವರೆಗಿನ ಈ ‘ಮಲ್ಲಿಗೆ’ ಮಾರ್ಗವು ಒಟ್ಟು 24.86 ಕಿಲೋಮೀಟರ್ ಉದ್ದವಿದ್ದು, ಮಾರ್ಗದುದ್ದಕ್ಕೂ ಚಿಕ್ಕಬಾಣಾವರ, ಮ್ಯಾದರಹಳ್ಳಿ, ಶೆಟ್ಟಿಹಳ್ಳಿ, ಜಾಲಹಳ್ಳಿ, ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಹೆಬ್ಬಾಳ, ಕನಕ ನಗರ, ನಾಗವಾರ, ಕಾವೇರಿ ನಗರ, ಬಾಣಸವಾಡಿ, ಸೇವಾ ನಗರ, ಕಸ್ತೂರಿ ನಗರ ಹಾಗೂ ಬೈಯಪ್ಪನಹಳ್ಳಿ ಸೇರಿದಂತೆ 14 ಪ್ರಮುಖ ನಿಲ್ದಾಣಗಳನ್ನು ಹೊಂದಿರಲಿದೆ.

ಸಾರ್ವಜನಿಕರು ಹೇಳುವುದೇನು?

ಪ್ರತಿದಿನ ಬೆಂಗಳೂರು ನಗರಕ್ಕೆ ಸುಮಾರು 3,000ಕ್ಕೂ ಹೆಚ್ಚು ಹೊಸ ವಾಹನಗಳು ಸೇರ್ಪಡೆಯಾಗುತ್ತಿವೆ. ಇದರಿಂದಾಗಿ ನಗರದಲ್ಲಿ ಎಷ್ಟೇ ಮೇಲ್ಸೇತುವೆಗಳನ್ನು ನಿರ್ಮಿಸಿದರೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಮತ್ತು ವಾಹನ ಸವಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಯಶವಂತಪುರ ಹಾಗೂ ಮತ್ತಿಕೆರೆ ಭಾಗದಲ್ಲಿ ಪ್ರತಿದಿನ ಉಂಟಾಗುವ ತೀವ್ರ ಟ್ರಾಫಿಕ್ ಸಮಸ್ಯೆಗೆ ಈ ಡಬಲ್ ಡೆಕ್ಕರ್ ಫ್ಲೈ ಓವರ್ ಮುಕ್ತಿ ನೀಡಲಿದೆಯೇ ಹಾಗೂ ಸಾರ್ವಜನಿಕ ಸಾರಿಗೆಗೆ ಹೊಸ ವೇಗ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us