
ಬೆಂಗಳೂರು, (ಡಿಸೆಂಬರ್ 07): ಏಳನೇ ತರಗತಿ ವಿದ್ಯಾರ್ಥಿ (School Student) ಮೇಲೆ ಹಲ್ಲೆ ಮಾಡಿದ ಆರೋಪದಡಿ ಬೆಂಗಳೂರಿನ (Bengaluru) ನಾರಾಯಣ ಇ-ಸ್ಕೂಲ್ನ ಪಿಟಿ ಶಿಕ್ಷಕ (Teacher) ರಾಜೇಶ್ ಎನ್ನುವರ ವಿರುದ್ಧ FIR ದಾಖಲಾಗಿದ್ದು, ಇದೀಗ ಬೆಂಗಳೂರಿನ ಹುಳಿಮಾವು ಪೊಲೀಸರು, ಶಿಕ್ಷಕ ರಾಜೇಶ್ ಅವರನ್ನು ಬಂಧಿಸಿದ್ದಾರೆ. ಶಿಕ್ಷಕ ರಾಜೇಶ್ ಸ್ಟಾಫ್ ರೂಮ್ನಲ್ಲಿ ಶಿಕ್ಷಕರ ಮುಂದೆ ವಿದ್ಯಾರ್ಥಿ ಕೆನ್ನೆಗೆ ಬಾರಿಸಿದ್ದು, ಹೊಡೆದ ಏಟಿಗೆ ವಿದ್ಯಾರ್ಥಿಯ ಕೆನ್ನೆ ಊದಿಕೊಂಡಿದೆ. ಇದರಿಂದ ಬಾಲಕ ಮನೆಗೆ ಹೋಗಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಶಾಲೆಗೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಹುಳಿಮಾವು ಬಳಿಯ ನಾರಾಯಣ ಇ-ಟೆಕ್ನೋ ಶಾಲೆಯಲ್ಲಿ ರಾಜೇಶ್ ದೈಹಿಕ ಶಿಕ್ಷಕರಾಗುರುವ ಶಿಕ್ಷಕ ರಾಜೇಶ್, ಏಳನೇ ಕ್ಲಾಸ್ ವಿದ್ಯಾರ್ಥಿ ಸುಮಂತ್ ಕುಮಾರ್ (ಹೆಸರು ಬದಲಾಯಿಸಲಾಗಿದೆ) ಎಂಬಾತನ ಕಪಾಳಕ್ಕೆ ನಾಲ್ಕೈದು ಶಿಕ್ಷಕರ ಮುಂದೆ ಹೊಡೆದಿದ್ದರು. ವಿದ್ಯಾರ್ಥಿಯನ್ನು ಮನೆಗೆ ಕಳುಹಿಸದೇ ಸಂಜೆಯವರೆಗೂ ಶಾಲೆಯಲ್ಲಿಯೇ ಇರಿಸಿಕೊಂಡಿದ್ರು ಎಂಬ ಆರೋಪ ಕೇಳಿ ಬಂದಿದೆ.
ಸಂಜೆಯಾದ್ರು ಮಗ ಮನೆಗೆ ಬರದಿದ್ದಾಗ ಸುಮಂತ್ ಕುಮಾರ್ ಪೋಷಕರು ಶಾಲೆಯತ್ತ ಬಂದಿದ್ದಾರೆ. ಶಾಲೆಗೆ ಬಂದಾಗ ಸುಮಂತ್ ಕುಮಾರ್ ಕೆನ್ನೆ ಊದಿಕೊಂಡಿರುವ ವಿಷಯ ಗೊತ್ತಾಗಿದೆ. ಕೂಡಲೇ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹುಳಿಮಾವು ಠಾಣೆಯಲ್ಲಿ ಶಿಕ್ಷಕ ರಾಜೇಶ್ ವಿರುದ್ಧ ದೂರು ದಾಖಲಿಸಿದ್ದಾರೆ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಸುಮಂತ್ ಕುಮಾರ್ ಊಟದ ವೇಳೆ ಸಹಪಾಠಿಯ ಕುರ್ಚಿಯನ್ನು ಎಳೆದಿದ್ದ. ಕ್ಲಾಸ್ ರೂಮ್ನಲ್ಲಯೂ ಇದೇ ರೀತಿ ಕುರ್ಚಿ ಎಳೆದಿದ್ದರಿಂದ ವಿದ್ಯಾರ್ಥಿಯೋರ್ವ ಕೆಳಗೆ ಬಿದ್ದಿದ್ದ. ಕೆಳಗೆ ಬಿದ್ದ ವಿದ್ಯಾರ್ಥಿ ನೇರವಾಗಿ ಶಿಕ್ಷಕ ರಾಜೇಶ್ ಬಳಿ ತೆರಳಿ ಸುಮಂತ್ ಕುಮಾರ್ ವಿರುದ್ಧ ದೂರು ನೀಡಿದ್ದ. ಶಿಕ್ಷಕ ರಾಜೇಶ್, ಸುಮಂತ್ ನನ್ನು ಸ್ಟಾಪ್ ರೂಮ್ಗೆ ಕರೆದು ಕಪಾಳಕ್ಕೆ ಹೊಡೆದಿದ್ದರು .