
ಬೆಂಗಳೂರು, ಸೆಪ್ಟೆಂಬರ್ 09: ಬೆಂಗಳೂರಿನಲ್ಲಿ ಟ್ರಾಫಿಕ್ ಸಿಗ್ನಲ್ ದಾಟುವುದೇ ಬೃಹತ್ ಸವಾಲಾಗಿದ್ದ ವಾಹನ ಸವಾರರಿಗೆ ಇದೀಗ ಬಿಗ್ ರಿಲೀಫ್ ಸಿಗಲಿದೆ. ಪ್ರಮುಖ ಜಂಕ್ಷನ್ಗಳ ಬಳಿ ಉಂಟಾಗುತ್ತಿದ್ದ ನಿತ್ಯದ ಸರಣಿ ಟ್ರಾಫಿಕ್ ಜ್ಯಾಮ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಬಿಎಂಟಿಸಿ ಜಂಟಿಯಾಗಿ ಬೃಹತ್ ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿವೆ. ನಗರದಲ್ಲಿ ಅಜ್ಞಾನದಿಂದ ನಿರ್ಮಿಸಲಾಗಿದ್ದ 107 ಪ್ರಮುಖ ಬಸ್ ನಿಲ್ದಾಣಗಳನ್ನು ವೈಜ್ಞಾನಿಕವಾಗಿ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ಟ್ರಾಫಿಕ್ ಸಿಗ್ನಲ್ ಹಾಗೂ ಜಂಕ್ಷನ್ಗಳ ತೀರಾ ಹತ್ತಿರದಲ್ಲೇ ಬಸ್ಗಳು ನಿಲ್ಲುವುದರಿಂದ ಹಿಂಬದಿಯ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತಿತ್ತು. ಇದನ್ನರಿತ ಸಂಚಾರ ಪೊಲೀಸರ ತಾಂತ್ರಿಕ ವರದಿ ಆಧಾರದ ಮೇಲೆ, ಸಿಗ್ನಲ್ ಕ್ಲಿಯರ್ ಆದ ತಕ್ಷಣ ವಾಹನಗಳು ಸುಗಮವಾಗಿ ಸಾಗಲು ಬಸ್ ನಿಲ್ದಾಣಗಳನ್ನು ಸಿಗ್ನಲ್ನಿಂದ ಕನಿಷ್ಠ 50 ಮೀಟರ್ ದೂರಕ್ಕೆ ಸರಿಸಲಾಗುತ್ತಿದೆ. ಇದರಿಂದ ಜಂಕ್ಷನ್ಗಳಲ್ಲಿ ಉಂಟಾಗುವ ವಾಹನ ದಟ್ಟಣೆ ನಿಯಂತ್ರಣಕ್ಕೆ ಬರಲಿದೆ.
ರಸ್ತೆ ತಿರುವುಗಳಲ್ಲಿ ಬಸ್ಗಳು ನಿಲ್ಲುವುದರಿಂದ ಸಂಭವಿಸುತ್ತಿದ್ದ ಸರಣಿ ಅಪಘಾತಗಳನ್ನು ತಪ್ಪಿಸಲು ಜನರು ಹಾಗೂ ಚಾಲಕರು ನಿರಂತರ ಮನವಿ ಮಾಡುತ್ತಿದ್ದರು. ನೂತನ ಯೋಜನೆಯಡಿ ಕೇವಲ ಬಸ್ ನಿಲ್ದಾಣಗಳನ್ನು ಶಿಫ್ಟ್ ಮಾಡುವುದು ಮಾತ್ರವಲ್ಲದೆ, ಪ್ರಯಾಣಿಕರಿಗೆ ಸುಸಜ್ಜಿತ ನೆರಳು, ನೈರ್ಮಲ್ಯ ಹಾಗೂ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, “ಸಂಚಾರ ದಟ್ಟಣೆ ತಗ್ಗಿಸಲು ಹಾಗೂ ಸಾರ್ವಜನಿಕ ಸಾರಿಗೆ ಸೌಲಭ್ಯವನ್ನು ಜಾಗತಿಕ ಮಟ್ಟದಲ್ಲಿ ಮೇಲ್ದರ್ಜೆಗೇರಿಸಲು ಈ ಮಾಸ್ಟರ್ ಪ್ಲಾನ್ ಜಾರಿಗೆ ತರಲಾಗುತ್ತಿದೆ” ಎಂದಿದ್ದಾರೆ. ವಿಜ್ಞಾನಾಧಾರಿತವಾಗಿ ಕೈಗೊಂಡಿರುವ ಈ ಯೋಜನೆಯಿಂದ ರಾಜಧಾನಿಯ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಮೂಡಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ