ಬೆಂಗಳೂರು ಬೈಕ್ ಸವಾರರಿಗೆ ದೊಡ್ಡ ರಿಲೀಫ್: ಏರ್ಪೋರ್ಟ್, ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ನಲ್ಲಿ ಬೈಕ್ ನಿಷೇಧ ನಿರ್ಧಾರ ಸದ್ಯಕ್ಕೆ ತಡೆ
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೇಲ್ಸೇತುವೆಗಳಲ್ಲಿ ದ್ವಿಚಕ್ರ ವಾಹನ, ಆಟೋರಿಕ್ಷಾ ನಿಷೇಧವನ್ನು ಸರ್ಕಾರ ಸದ್ಯಕ್ಕೆ ಮುಂದೂಡಿದೆ. ಸಂಚಾರ ದಟ್ಟಣೆ ಮತ್ತು ಪ್ರಯಾಣಿಕರ ಅನುಕೂಲತೆ ಗಮನಿಸಿ ಹಂತ-ಹಂತವಾಗಿ ನಿಯಮ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈ ಮಾಹಿತಿ ನೀಡಿದ್ದು, ಸದ್ಯಕ್ಕೆ ಸರಕು ವಾಹನಗಳಿಗೆ ಮಾತ್ರ ನಿರ್ಬಂಧ ಮುಂದುವರಿಯಲಿದೆ. ಸಂಸದ ಮಂಜುನಾಥ್ ಡೇಟಾ ಆಧಾರಿತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಬೆಂಗಳೂರು, ಸೆ.10: ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ರಸ್ತೆ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿ ಮೇಲ್ಸೇತುವೆಗಳಲ್ಲಿ ದ್ವಿಚಕ್ರ ವಾಹನ ಹಾಗೂ ಆಟೋರಿಕ್ಷಾಗಳ ಸಂಚಾರವನ್ನು ನಿಷೇಧಿಸುವ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಸದ್ಯಕ್ಕೆ ತಡೆಹಿಡಿದಿದೆ. ಪ್ರಯಾಣಿಕರ ಅನುಕೂಲ ಹಾಗೂ ರಸ್ತೆ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಹಂತ-ಹಂತವಾಗಿ ನಿಯಮಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯ ಬಳಿಕ ಮಾಹಿತಿ ನೀಡಿದ್ದು, “ಸಂಜೀವ್ ನಗರ ಕ್ರಾಸ್ನಿಂದ ವಿದ್ಯಾನಿಕೇತನ ಜಂಕ್ಷನ್ವರೆಗಿನ ಏರ್ಪೋರ್ಟ್ ಎಲಿವೇಟೆಡ್ ಕಾರಿಡಾರ್ನಲ್ಲಿ ಸರಕು ವಾಹನಗಳು, ಬೈಕ್ಗಳು ಹಾಗೂ ಆಟೋಗಳನ್ನು ಏಕಾಏಕಿ ಸರ್ವಿಸ್ ರಸ್ತೆಗೆ ಡೈವರ್ಟ್ ಮಾಡಿದ್ದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಹೀಗಾಗಿ ಮೊದಲ ಹಂತದಲ್ಲಿ ಸರಕು ವಾಹನಗಳಿಗೆ ಮಾತ್ರ ನಿಷೇಧ ಮುಂದುವರಿಯಲಿದ್ದು, ದ್ವಿಚಕ್ರ ವಾಹನಗಳು ಹಾಗೂ ಆಟೋಗಳ ಸಂಚಾರಕ್ಕೆ ಸದ್ಯಕ್ಕೆ ಅವಕಾಶ ನೀಡಲಾಗುತ್ತದೆ” ಎಂದಿದ್ದಾರೆ.
ಇದೇ ಹಂತ-ಹಂತದ ವಿಧಾನವನ್ನು ಸೆಪ್ಟೆಂಬರ್ 11 ರಿಂದ ಎಲೆಕ್ಟ್ರಾನಿಕ್ಸ್ ಸಿಟಿ ಮೇಲ್ಸೇತುವೆಯಲ್ಲೂ ಅನುಸರಿಸಲಾಗುವುದು. ನಗರದ ಬಿಜಿಎಸ್ ಫ್ಲೈಓವರ್, ಪೀಣ್ಯ ಫ್ಲೈಓವರ್ ಹಾಗೂ ಡಬಲ್ ಡೆಕ್ಕರ್ ಫ್ಲೈಓವರ್ಗಳಲ್ಲಿ ಸಂಚಾರ ನಿಯಂತ್ರಣ ಯಶಸ್ವಿಯಾಗಿದ್ದು, ವಾಹನ ಸಂಚಾರ ಸುಗಮವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಓಲಾ, ಊಬರ್ ಆ್ಯಪ್ನಲ್ಲೇ ಕಾಣಿಸಲಿದೆ ‘ನಮ್ಮ ಬಿಎಂಟಿಸಿ’ ಬಸ್ ಲೈವ್ ಟ್ರ್ಯಾಕಿಂಗ್
ಇನ್ನೊಂದೆಡೆ, ಸರ್ಕಾರದ ಈ ಪ್ರಸ್ತಾಪವನ್ನು ಮರುಪರಿಶೀಲಿಸುವಂತೆ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 80 ಲಕ್ಷ ದ್ವಿಚಕ್ರ ವಾಹನಗಳಿದ್ದು, ನಗರದ ಒಟ್ಟು ವಾಹನಗಳಲ್ಲಿ ಶೇ. 70 ರಷ್ಟು ಬೈಕ್ಗಳೇ ಇವೆ. ಇಷ್ಟೊಂದು ದೊಡ್ಡ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಎಲಿವೇಟೆಡ್ ರಸ್ತೆಗಳಿಂದ ತಡೆದು ಕೆಳಗಿನ ರಸ್ತೆ ಹಾಗೂ ಸರ್ವಿಸ್ ರಸ್ತೆಗಳಿಗೆ ಹರಿಸಿದರೆ ರಸ್ತೆ ಸಾರಿಗೆ ಸಂಪೂರ್ಣ ಕಂಗೆಡಲಿದೆ. ಕೇವಲ ಆದೇಶಗಳ ಮೂಲಕ ಸಂಚಾರ ತಡೆಯುವ ಬದಲು ಡೇಟಾ ಆಧಾರಿತ (Data-driven) ಪ್ರಾಯೋಗಿಕ ಪರಿಹಾರಗಳನ್ನು ಕಂಡುಹಿಡಿಯಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




