ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಸಹಾಯಕ ಇಂಜಿನಿಯರ್: FIR ದಾಖಲು

30 ಸಾವಿರ ರೂ. ಲಂಚ ಸ್ವೀಕರಿಸುವಾಗ ಬೆಸ್ಕಾಂ ಸಹಾಯಕ ಇಂಜಿನಿಯರ್​ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಸಹಾಯಕ ಇಂಜಿನಿಯರ್: FIR ದಾಖಲು
ಪ್ರಾತಿನಿಧಿಕ ಚಿತ್ರ

Updated on: Apr 19, 2023 | 9:57 PM

ಬೆಂಗಳೂರು: 30 ಸಾವಿರ ರೂ. ಲಂಚ (Bribery) ಸ್ವೀಕರಿಸುವಾಗ ಬೆಸ್ಕಾಂ ಸಹಾಯಕ ಇಂಜಿನಿಯರ್​ ಲೋಕಾಯುಕ್ತ (Lokayukta Raid) ಬಲೆಗೆ ಬಿದಿದ್ದಾರೆ. ರಾಜೇಶ್ ಲೋಕಾಯುಕ್ತ ಬಲೆಗೆ ಬಿದ್ದ ಬೆಂಗಳೂರಿನ ಕೊತ್ತನೂರು ಬೆಸ್ಕಾಂ ಸಹಾಯಕ ಇಂಜಿನಿಯರ್​. ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ರಾಜೇಶ್ ವಿರುದ್ಧ ಎಫ್​ಐಆರ್​ ಕೂಡ ದಾಖಲು ಮಾಡಲಾಗಿದೆ. ರಾಜೇಶ್​ ಕಚೇರಿಯಲ್ಲಿ 2 ಲಕ್ಷ ರೂ. ಹೆಚ್ಚುವರಿ ನಗದು ಕೂಡ ಪತ್ತೆ ಆಗಿದೆ. ಸದ್ಯ ರಾಜೇಶ್​ನನ್ನು ವಶಕ್ಕೆ ಪಡೆದು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗಳ ಬಿಲ್ ಮಂಜೂರಾತಿಗಾಗಿ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಯನ್ನು ರೆಡ್​ ಹ್ಯಾಂಡ್ ಆಗಿ ಬಂಧಿಸಿದ ಘಟನೆ ಧಾರವಾಡ ಜಿಲ್ಲೆ ನವಲೂರಿನ ವಿನಾಯಕನಗರದಲ್ಲಿ ನಡೆದಿತ್ತು.

ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ತಾಂತ್ರಿಕ ತಜ್ಞ ಹಾಗೂ ಪ್ರಭಾರ ಜಿಲ್ಲಾ ಕಾರ್ಯನಿರ್ವಾಣಾಧಿಕಾರಿ ಆಗಿರುವ ಶಿವಲಿಂಗಸ್ವಾಮಿ ಹಲಗಲಿಮಠ ಅವರು ಕೆರೆ ಅಭಿವೃದ್ಧಿ ಕಾಮಗಾರಿಗಳ ಬಿಲ್ ಮಂಜೂರಾತಿಗೆ ಹಾವೇರಿ ಜಿಲ್ಲೆ ಸವಣೂರು ಪಟ್ಟಣದ ಗುತ್ತಿಗೆದಾರ ಸುರೇಶ ಕಳಸೂರು ಎಂಬವರ ಬಳಿ 2 ಲಕ್ಷ 20 ಸಾವಿರ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಇದನ್ನೂ ಇದನ್ನೂ ಓದಿ: ಚೆಕ್​ಬೌನ್ಸ್ ಪ್ರಕರಣದಲ್ಲಿ ಬಂಧನ ಭೀತಿ: ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿಗೆ ಷರತ್ತುಬದ್ಧ ರಿಲೀಫ್

ಈ ಬಗ್ಗೆ ಸುರೇಶ ಕಳಸೂರು ಅವರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಅದರಂತೆ ಬೇಡಿಕೆ ಇಟ್ಟಿದ್ದ ಲಂಚದ ಹಣದ ಪೈಕಿ 1 ಲಕ್ಷ 20 ಸಾವಿರ ರೂಪಾಯಿಯನ್ನು ಮುಂಗಡವಾಗಿ ನೀಡಲು ವಿನಾಯಕನಗರದ 4ನೇ ಕ್ರಾಸ್​ನಲ್ಲಿ ಇರುವ ಭ್ರಷ್ಟ ಅಧಿಕಾರಿ ಶಿವಲಿಂಗಸ್ವಾಮಿ ಮನೆಗೆ ತೆರಳಿದ್ದರು. ಅಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಟ್ರ್ಯಾಪ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಶಿವಲಿಂಗಸ್ವಾಮಿಯನ್ನು ಬಂಧಿಸಿದ್ದರು.

1300 ಕೋಟಿ ರೂ. ಹಗರಣ ಆರೋಪ

ತುಮಕೂರು: ನಿವೃತ್ತ ಐಎಎಸ್ ಅಧಿಕಾರಿ, ಕೊರಟಗೆರೆ ಬಿಜೆಪಿ ಆಕಾಂಕ್ಷಿ ಅನಿಲ್ ಕುಮಾರ್​ ವಿರುದ್ದ 1300 ಕೋಟಿ ಹಗರಣ ಆರೋಪ ಕೇಳಿಬಂದಿದ್ದು, ಲೋಕಾಯುಕ್ತಕ್ಕೆ ಎಎಪಿ ದೂರು ನೀಡಲಾಗಿದೆ. ಈ ಕುರಿತಾಗಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಎಎಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ.ವಿಶ್ವನಾಥ್​, ಬಿಬಿಎಂಪಿಯಲ್ಲಿ 2019-20ರಲ್ಲಿ ಅನಿಲ್‌ ಕುಮಾರ್​ ಹಿರಿಯ ಐಎಎಸ್‌ ಅಧಿಕಾರಿಯಾಗಿದ್ದ ವೇಳೆ ಮೂರು ಪ್ರಮುಖ ಅಕ್ರಮಗಳ ಮಾಡಿದ್ದು, ಒಟ್ಟು 1300 ಕೋಟಿ ರೂ. ಹೊಡೆದಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ಳಬೇಕು: ಕಾಂಗ್ರೆಸ್​ಗೆ ತಿರುಗೇಟು ಕೊಟ್ಟ ಸಿಎಂ ಬೊಮ್ಮಾಯಿ

ಸ್ಮಾರ್ಟ್‌ ಪಾರ್ಕಿಂಗ್‌ಗೆ 31.6 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಅಷ್ಟು ಹಣ ಖರ್ಚಾಗದಿದ್ದರೂ ಹೆಚ್ಚುವರಿಯಾಗಿ 2 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಅನಿಲ್‌ ಕುಮಾರ್‌ ಗುತ್ತಿಗೆ ಸಂಸ್ಥೆಯಾದ ಬಿಲ್ಡಿಂಗ್ಸ್ ಕಂಟ್ರೋಲ್‌ ಸಲ್ಯೂಷನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಇದನ್ನು ಬಿಡುಗಡೆ ಮಾಡಿಸಿದ್ದರು. ಕಮಿಷನರ್‌ ಆಗಿದ್ದ ವೇಳೆ ಮಳೆ ನೀರಿನ ಹೂಳು ತೆಗೆಯುವ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:54 pm, Wed, 19 April 23

Loading...
Unable to load recommendations.
Follow Us