
ಬೆಂಗಳೂರು, ಜೂನ್ 22: ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ನಿನ್ನೆ (ಜೂನ್ 21) ಪದಗ್ರಹಣ ಮಾಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ಅದ್ಯಕ್ಷ ಡಿಕೆ ಶಿವಕುಮಾರ್ ಪಕ್ಷದ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದ್ದಾರೆ. ಆದರೆ ನೀಟ್ ಪರೀಕ್ಷೆಯ ದಿನವೇ ಈ ಕಾರ್ಯಕ್ರಮ ನಡೆದಿರೋದೀಗ ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಕಾರ್ಯಕ್ರಮದಿಂದ ನೀಟ್ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ಬಿಜೆಪಿ ದೂರಿದ್ದರೆ, ಬಿಜೆಪಿಯವರಿಂದ ನಾವು ಏನು ಪಾಠ ಕಲಿಯಬೇಕಾಗಿಲ್ಲ ಎಂದು ಕಾಂಗ್ರೆಸ್ ಕೌಂಟರ್ ಕೊಟ್ಟಿದೆ.
ನೀಟ್ ಪರೀಕ್ಷೆಯ ದಿನವೇ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿಸೂರ್ಯ ಕಿಡಿ ಕಾರಿದ್ದು, ಹರಿಪ್ರಸಾದ್ ನಿನ್ನೆ ಬದಲು ಇಂದು ಕಾರ್ಯಕ್ರಮ ಮಾಡಬೇಕಿತ್ತು. ಕಾಂಗ್ರೆಸ್ ನಾಯಕ ರಾಹುಲ್ ದೊಡ್ಡದಾಗಿ ಭಾಷಣ ಬಿಗಿಯುತ್ತಾರೆ. ನಾವು ಮಕ್ಕಳ ಪರವಾಗಿ ಇದ್ದೇವೆ ಎಂದು ಡ್ರಾಮಾ ಮಾಡುತ್ತಾರೆ. ಈಗಲಾದರೂ ಸಿಎಂ ಇಂತಹ ಕಾರ್ಯಕ್ರಮ ಬಗ್ಗೆ ಗಮನ ಹರಿಸಲಿ. ಪರೀಕ್ಷೆಗಳು ಇದ್ದಾಗ ಜನರಿಗೆ ಸಮಸ್ಯೆ ಆಗದಂತೆ ನಿಯಮ ತರಬೇಕು. ಇಂತಹ ಸಂದರ್ಭಗಳಲ್ಲಿ ಈ ರೀತಿ ಕಾರ್ಯಕ್ರಮಕ್ಕೆ ಅವಕಾಶ ಕೊಡಬಾರದು. ವಿಐಪಿ ಸಂಸ್ಕೃತಿಯಿಂದ ಟ್ರಾಫಿಕ್ ಸಮಸ್ಯೆ ನಿಯಮ ಬದಲಾಗಬೇಕು ಎಂದವರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕ್ರಮದಿಂದ ಎಲ್ಲೆಡೆ ಟ್ರಾಫಿಕ್ ಸಮಸ್ಯೆ ಆಗಿದ್ದು, ಕೆಲ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹೋಗಲು ತಡವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೂಡ ಹೇಳಿದ್ದಾರೆ.ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಬಾರದು ಎಂದು ಪ್ರಧಾನಿ ಮೋದಿ 45 ನಿಮಿಷ ಏರ್ಪೋರ್ಟ್ನಲ್ಲೇ ವೇಟ್ ಮಾಡಿದ್ರು. ಅವರನ್ನು ನೋಡಿ ಕಾಂಗ್ರೆಸ್ನವರು ಕಲಿಯಲಿ ಎಂದವರು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ನೀಟ್ ಪರೀಕ್ಷೆಯಿಂದ ಮತ್ತೆ ವಂಚಿತರಾದ ಹಲವು ವಿದ್ಯಾರ್ಥಿಗಳು; ಒಬ್ಬೊಬ್ಬರದು ಒಂದೊಂದು ಕಥೆ
ಇನ್ನು ಬಿಜೆಪಿಗರ ಈ ಆರೋಪ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರಿಂದ ನಾವು ಏನು ಪಾಠ ಕಲಿಯಬೇಕಾಗಿಲ್. ಅವರು ನಿಜವಾಗಲೂ ವಿದ್ಯಾರ್ಥಿಗಳ ಪರವಾಗಿದ್ರೆ ಮೊದಲು ಕ್ಷಮೆ ಕೇಳಲಿ. 22 ಲಕ್ಷ ವಿದ್ಯಾರ್ಥಿಗಳಿಗೆ ಮೋಸ ಮಾಡಿದ್ರಲ್ಲ, ಆಗ ಏಕೆ ಮಾತಾಡಲಿಲ್ಲ? 10 ವರ್ಷದಲ್ಲಿ 90 ಪೇಪರ್ ಲೀಕ್ ಆಗಿದೆ. ಆಮೇಲೆ ಮೂವರು ಎಕ್ಸಾಂಗೆ ಏನಕ್ಕೆ ಬರಲಿಕ್ಕೆ ಆಗಿಲ್ಲ ಅಂತಾ ನೋಡಲಿ. ನಿಜವಾದ ಕಾರಣಗಳು ನಾನು ಬಹಿರಂಗವಾಗಿ ಹೇಳಿದ್ದೇನೆ. ಓರ್ವ ಮಾಗಡಿಯಿಂದ ಬರ್ತಿದ್ದು, ಮಾಗಡಿನಲ್ಲಿ ನಮ್ದು ಱಲಿ ಇತ್ತಾ? ಇನ್ನೊಬ್ಬರು ಪರೀಕ್ಷೆಗೆ ಹಳೆಯ ಹಾಲ್ ಟಿಕೆಟ್ ತಂದಿದ್ದರು. ಮತ್ತೊಬ್ಬರು ಆರ್.ಟಿ ನಗರದಿಂದ ಬರುತ್ತಿದ್ದರು ಎನ್ನಲಾಗಿದೆ. ರಾಜಕೀಯ ಮಾಡಬೇಕು ಅಂದ್ರೆ ಲಾಜಿಕಲ್ ಆಗಿ ಮಾಡಿ. ಮುಂಬೈ, ಪರೇಲಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಆಗಿಲ್ಲ. ಹಾಗಿದ್ರೆ ಅದಕ್ಕೆ ಮಹಾರಾಷ್ಟ್ರ ಸರ್ಕಾರ ಕಾರಣ ಅಲ್ವಾ? ಪ್ರಶ್ನೆ ಪತ್ರಿಕೆ ಲೀಕ್ ಆದಾಗ ಪ್ರಧಾನ್ ರಾಜೀನಾಮೆ ಕೊಟ್ರಾ? ಈ ಖಾಲಿ ಟ್ರಂಕ್ಗಳ ಜೊತೆ ಏನು ಮಾತಾಡೋದು ಎಂದು ಹೇಳಿವ ಮೂಲಕ ತೇಜಸ್ವಿ ಸೂರ್ಯಗೆ ಪ್ರಿಯಾಂಕ್ ಕೌಂಟರ್ ಕೊಟ್ಟಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:08 pm, Mon, 22 June 26