ಈ ನೆಲದ ಸಮಾಜ ಸುಧಾರಕರನ್ನು ಬಿಜೆಪಿ ಅಂತರಂಗದಲ್ಲಿ ದ್ವೇಷಿಸುತ್ತಿದೆ: ಸಿದ್ದರಾಮಯ್ಯ ಟ್ವೀಟ್

ತನ್ನ ಸೈದ್ಧಾಂತಿಕ ವಿರೋಧ ಬಚ್ಚಿಟ್ಟುಕೊಂಡು ತಾಂತ್ರಿಕ ಕಾರಣ ನೀಡಿ ತಿಪ್ಪೆ ಸಾರಿಸುವ ಕೆಲಸ ಮಾಡಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಈ ನೆಲದ ಸಮಾಜ ಸುಧಾರಕರನ್ನು ಬಿಜೆಪಿ ಅಂತರಂಗದಲ್ಲಿ ದ್ವೇಷಿಸುತ್ತಿದೆ: ಸಿದ್ದರಾಮಯ್ಯ ಟ್ವೀಟ್
ವಿಪಕ್ಷ ನಾಯಕ ಸಿದ್ದರಾಮಯ್ಯ
Edited By:

Updated on: Jan 19, 2022 | 2:57 PM

ಬೆಂಗಳೂರು: ಈ ನೆಲದ ಸಮಾಜ ಸುಧಾರಕರನ್ನು(Social reformers) ಕೋಮುವಾದಿ,ಜಾತಿವಾದಿ ಬಿಜೆಪಿ (BJP) ಅಂತರಂಗದಲ್ಲಿ ದ್ವೇಷಿಸುತ್ತಿದೆ. ನಾರಾಯಣ ಗುರು, ಸುಭಾಷ್ ಚಂದ್ರಬೋಸ್ ಮಾತ್ರವಲ್ಲ. ಬುದ್ಧ, ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಕನಕ, ಕಬೀರ ಸೇರಿದಂತೆ ಎಲ್ಲರನ್ನೂ ಅಂತರಂಗದಲ್ಲಿ ದ್ವೇಷಿಸುತ್ತಿದೆ. ಬಹಿರಂಗವಾಗಿ ಎಲ್ಲರನ್ನೂ ಕೊಂಡಾಡುತ್ತಾ ನಾಟಕವಾಡುತ್ತಿದೆ. ಈ ಆತ್ಮವಂಚನೆಯನ್ನು ನಿಲ್ಲಿಸಿ ಎಂದು ವಿರೋಧ ಪಕ್ಷದ ಸಿದ್ದರಾಮಯ್ಯ (Siddaramaiah) ಸರಣಿ ಟ್ವೀಟ್ ಮಾಡಿದ್ದಾರೆ.

ನಾರಾಯಣ ಗುರು, ಸುಭಾಷ್ ಚಂದ್ರ ಬೋಸ್ ಇಲ್ಲವೇ ಚಿದಂಬರಂ ಬಗ್ಗೆ ಸೈದ್ಧಾಂತಿಕ ಇಲ್ಲವೇ ಬೇರೆ ವಿರೋಧವಿದ್ದರೆ ಕೇಂದ್ರ ಸರ್ಕಾರ ಧೈರ್ಯವಾಗಿ ಅದನ್ನು ಬಹಿರಂಗಪಡಿಸಲಿ. ಇದರ ಬದಲಿಗೆ ತನ್ನ ಸೈದ್ಧಾಂತಿಕ ವಿರೋಧ ಬಚ್ಚಿಟ್ಟುಕೊಂಡು ತಾಂತ್ರಿಕ ಕಾರಣ ನೀಡಿ ತಿಪ್ಪೆ ಸಾರಿಸುವ ಕೆಲಸ ಮಾಡಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕೇರಳದ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಮಾತ್ರವಲ್ಲ, ಪಶ್ಚಿಮ ಬಂಗಾಳದ ಸುಭಾಷ್ ಚಂದ್ರ ಬೋಸ್ ಸ್ತಬ್ಧ ಚಿತ್ರ ಮತ್ತು ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರ ಚಿದಂಬರನರ್ ಸ್ತಬ್ಧ ಚಿತ್ರಗಳನ್ನು ತಿರಸ್ಕರಿಸಲಾಗಿದೆ. ತಿರಸ್ಕೃತ ಮೂರು ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳ ಸರ್ಕಾರ ಇರುವುದು ಕೇವಲ ಕಾಕತಾಳಿಯ ಎನ್ನುವುದನ್ನು ನಂಬಬಹುದೇ? ಎಂದು ಸಿದ್ದರಾಮಯ್ಯ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಶಂಕರಾಚಾರ್ಯರ ಪ್ರತಿಕೃತಿಯ ಸ್ತಬ್ಧ ಚಿತ್ರಕ್ಕೆ ವೈಯಕ್ತಿಕವಾಗಿ ನನ್ನ ವಿರೋಧ ಇಲ್ಲ. ಆದರೆ ಜಾತಿ ಮತ್ತು ಕೋಮು ಸಾಮರಸ್ಯವನ್ನು ಕಾಪಾಡಿಕೊಂಡು ಹೋಗಬೇಕಾದ ಕೇಂದ್ರ ಬಿಜೆಪಿ ಸರ್ಕಾರ, ಅನಗತ್ಯವಾಗಿ ಶಂಕರಾಚಾರ್ಯರ ಎದುರಿಗೆ ನಾರಾಯಣ ಗುರುಗಳನ್ನು ನಿಲ್ಲಿಸಿ ಇಬ್ಬರು ಮಹಾಪುರುಷರ ಅನುಯಾಯಿಗಳ ನಡುವೆ ಜಗಳ ತಂದುಹಾಕುವ ಅಗತ್ಯ ಏನಿತ್ತು? ಎಂದು ಟ್ವೀಟ್​ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಕೇರಳ ಸರ್ಕಾರ ಪ್ರಸ್ತುತ ಪಡಿಸಿದ್ದ ಜಟಾಯು ಸ್ತಬ್ದಚಿತ್ರಕ್ಕೆ ಒಪ್ಪಿಗೆ ನೀಡದೆ, ಅದರ ಮುಂದೆ ಶಂಕರಾಚಾರ್ಯರ ಪ್ರತಿಕೃತಿಯನ್ನು ಕೂರಿಸುವಂತೆ ಕೇಂದ್ರ ಸರ್ಕಾರ ಒತ್ತಡ ಹೇರಲು ಕಾರಣ ಏನು? ಕೇರಳ ಸರ್ಕಾರ ಸೂಚಿಸಿದ ನಾರಾಯಣ ಗುರುಗಳ ಪ್ರತಿಕೃತಿಯನ್ನು ನಿರಾಕರಿಸಲು ಕಾರಣ ಏನು? ಕೇಂದ್ರ ಬಿಜೆಪಿ ಸರ್ಕಾರ ಇದನ್ನು ಸ್ಪಷ್ಟಪಡಿಸಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಗಣರಾಜ್ಯೋತ್ಸವ ಸ್ತಬ್ದಚಿತ್ರಕ್ಕೆ 3 ವರ್ಷಗಳಿಗೊಮ್ಮೆ ಮಾತ್ರ ರಾಜ್ಯಗಳಿಗೆ ಅವಕಾಶ ಎಂದಾದರೆ ನಮ್ಮ ಕರ್ನಾಟಕಕ್ಕೆ ಸತತ 13ನೇ ಬಾರಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಹೇಗೆ ನೀಡಲಾಯಿತು? ಎನ್ನುವುದನ್ನು ಸಚಿವರಾದ ಶ್ರೀನಿವಾಸ ಪೂಜಾರಿ ಮತ್ತು ಸುನೀಲ್ ಕುಮಾರ್ ತಿಳಿಸಬೇಕು. ಇಂತಹ ಹಸಿ ಸುಳ್ಳುಗಳು ಸಚಿವರಿಗೆ ಶೋಭೆ ತರುವುದಿಲ್ಲ ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್​ ಮಾಡಿದ್ದಾರೆ.

3 ವರ್ಷಗಳಿಗೊಮ್ಮೆ ಮಾತ್ರ ಸ್ತಬ್ಧಚಿತ್ರಕ್ಕೆ ರಾಜ್ಯಗಳಿಗೆ ಅವಕಾಶ ಎನ್ನುತ್ತಾರೆ ರಾಜ್ಯದ ಇಬ್ಬರು ಸಚಿವರು, ಅಲಿಖಿತ ಪೂರ್ವನಿದರ್ಶನ ಇದೆ ಎನ್ನುತ್ತಾರೆ ಕೇಂದ್ರ ಸಚಿವರು, ಕೇರಳ ಸರ್ಕಾರವೇ ನಾರಾಯಣಗುರು ವಿರೋಧಿ ಎನ್ನುತ್ತಾರೆ ಬಿಜೆಪಿ ವಕ್ತಾರರು. ಇದರಲ್ಲಿ ಯಾವುದು ನಿಜ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಪಷ್ಟಪಡಿಸಬೇಕು ಎಂದು ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

ಕೇರಳದ ನಾರಾಯಣ ಗುರು ಸ್ತಬ್ಧಚಿತ್ರ ನಿರಾಕರಣೆಗೆ ಅಲಿಖಿತ ಪೂರ್ವನಿದರ್ಶನ ಕಾರಣ ಎಂದು ಹೇಳಿರುವ ಸಚಿವ ಪ್ರಹ್ಲಾದ ಜೋಷಿಯವರು ಹೇಳಿಕೆ ನೀಡುವ ಮೊದಲು ದೃಡಪಡಿಸಿಕೊಳ್ಳಬೇಕಿತ್ತು ಎಂದು ನನಗೆ ಪುಕ್ಕಟೆ ಸಲಹೆ ನೀಡಿದ್ದಾರೆ. ದಯವಿಟ್ಟು ಅವರು ಈ ಅಲಿಖಿತ ಪೂರ್ವನಿದರ್ಶನ ಏನು ಎನ್ನುವುದನ್ನು ಸ್ಪಷ್ಟಪಡಿಬೇಕು ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್​ ಮಾಡಿದ್ದಾರೆ.

ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯದ ಸಚಿವರಾದ ಸುನಿಲ್​ ಕುಮಾರ್​ ಮತ್ತು ಕೋಟ ಶ್ರೀನಿವಾಸ ಪೂಜಾರಿ ಮತ್ತು ಕರ್ನಾಟಕ ಬಿಜೆಪಿ ನಾಯಕರು ತರಹೇವಾರಿ ಹೇಳಿಕೆಗಳ ಮೂಲಕ ಬಿಜೆಪಿ ಎನ್ನುವುದು ಸುಳ್ಳುಗಳ ಕಾರ್ಖಾನೆ ಎಂದು ಸಾಬೀತುಪಡಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ:

ಸಮಾಜವಾದಿ ಪಕ್ಷದ ನಾಯಕ ಮುಲಾಯಾಂ ಸಿಂಗ್​ ಯಾದವ್ ಸೊಸೆ ಇಂದು ಬಿಜೆಪಿಗೆ ಸೇರ್ಪಡೆ; ಟ್ವೀಟ್​ ಮಾಡಿದ ಬಿಜೆಪಿ ನಾಯಕ

ರಾಜ್ಯದಲ್ಲಿ ಕ್ಯಾಂಟೀನ್ ಮಾಡುವಾಗ ಸಿದ್ದರಾಮಯ್ಯಗೆ ನೆನಪಾಗಿದ್ದು ಇಂದಿರಾ ಗಾಂಧಿ ಮಾತ್ರವಾ!? ಸಂಸದ ಪ್ರತಾಪ್​ ಲೇವಡಿ

 

Published On - 2:47 pm, Wed, 19 January 22