ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಎಂಜಿನ್ ಸ್ವಿಚ್ ಆಫ್ ಮಾಡಬೇಡಿ: ಬಸ್ ಚಾಲಕರಿಗೆ ಬಿಎಂಟಿಸಿ ಸೂಚನೆ

ವಿದ್ಯುತ್ ಶಾಕ್ ಸರ್ಕ್ಯೂಟ್ ತಪ್ಪಿಸಲು ಪ್ರತಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಎಂಜಿನ್ ಅನ್ನು ಸ್ವಿಚ್ ಆಫ್ ಮಾಡದಂತೆ ಮತ್ತು ರೀಸ್ಟಾರ್ಟ್ ಮಾಡದಂತೆ ಚಾಲಕರಿಗೆ ಸಲಹೆ ನೀಡಿದ್ದೇವೆ. ಈ ಹಿಂದೆ ಡೀಸೆಲ್ ಉಳಿಸಲು ಎಂಜಿನ್ ಸ್ವಿಚ್ ಆಫ್ ಮಾಡಲಾಗುತ್ತಿತ್ತು.

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಎಂಜಿನ್ ಸ್ವಿಚ್ ಆಫ್ ಮಾಡಬೇಡಿ: ಬಸ್ ಚಾಲಕರಿಗೆ ಬಿಎಂಟಿಸಿ ಸೂಚನೆ
ಬಿಎಂಟಿಸಿ ಬಸ್​ಗಳು (ಸಾಂದರ್ಭಿಕ ಚಿತ್ರ)
Edited By: ರಶ್ಮಿ ಕಲ್ಲಕಟ್ಟ

Updated on: Apr 27, 2022 | 3:32 PM

ಬೆಂಗಳೂರು: ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಎಂಜಿನ್ ಸ್ವಿಚ್ ಆಫ್ ಮಾಡದಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ತನ್ನ ಎಲ್ಲಾ ಮಿಡಿ ಬಸ್ ಚಾಲಕರಿಗೆ ಸೂಚನೆ ನೀಡಿದೆ. ಕಳೆದ ಮೂರು ತಿಂಗಳಲ್ಲಿ ಬೆಂಗಳೂರಿನಲ್ಲಿ ಅಶೋಕ್ ಲೇಲ್ಯಾಂಡ್ (Ashok Leyland) ಮಿಡಿ ಬಸ್‌ಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆಗಳ ಪ್ರಾಥಮಿಕ ತನಿಖೆಯ ನಂತರ ಎಂಜಿನ್ ಭಾಗದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಬಹಿರಂಗಪಡಿಸಿದ ನಂತರ ಈ ನಿರ್ದೇಶನ ಬಂದಿದೆ. “ವಿದ್ಯುತ್ ಶಾಕ್ ಸರ್ಕ್ಯೂಟ್ (shock circuit) ತಪ್ಪಿಸಲು ಪ್ರತಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಎಂಜಿನ್ ಅನ್ನು ಸ್ವಿಚ್ ಆಫ್ ಮಾಡದಂತೆ ಮತ್ತು ರೀಸ್ಟಾರ್ಟ್ ಮಾಡದಂತೆ ಚಾಲಕರಿಗೆ ಸಲಹೆ ನೀಡಿದ್ದೇವೆ. ಈ ಹಿಂದೆ ಡೀಸೆಲ್ ಉಳಿಸಲು ಎಂಜಿನ್ ಸ್ವಿಚ್ ಆಫ್ ಮಾಡಲಾಗುತ್ತಿತ್ತು. ಈಗ, ಬಸ್ ಡಿಪೋಗಳಲ್ಲಿ ಟ್ರಿಪ್ ಪ್ರಾರಂಭವಾಗುವ ಸಮಯದಲ್ಲಿ ಬಸ್ ಅನ್ನು ಸ್ಟಾರ್ಟ್ ಮಾಡಲು ಮತ್ತು ಟ್ರಿಪ್ ಕೊನೆಯಲ್ಲಿ ಮಾತ್ರ ಅದನ್ನು ಆಫ್ ಮಾಡಲು ನಾವು ಚಾಲಕರಿಗೆ ಸೂಚಿಸಿದ್ದೇವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಹೇಳಿದರು. ಈ ಮೂರೂ ಘಟನೆಗಳಲ್ಲಿ ಎಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಬಿಎಂಟಿಸಿ ಆಂತರಿಕ ತನಿಖೆಯಿಂದ ತಿಳಿದುಬಂದಿದೆ. “ಈ ಬಸ್‌ಗಳ ಎಲೆಕ್ಟ್ರಿಕಲ್ ಲೈನ್ ಮತ್ತು ಡೀಸೆಲ್ ಲೈನ್ ಒಂದಕ್ಕೊಂದು ಪಕ್ಕದಲ್ಲಿದೆ. ಡೀಸೆಲ್ ಸೋರಿಕೆಯ ಪ್ರಕರಣವಿದ್ದರೆ ಅದು ಬೆಂಕಿಗೆ ಕಾರಣವಾಗುತ್ತದೆ ಎಂದು ಕುಮಾರ್ ಹೇಳಿದರು. ಅಶೋಕ್ ಲೇಲ್ಯಾಂಡ್ ಮತ್ತು ಬಿಎಂಟಿಸಿ ಅಧಿಕಾರಿಗಳು ಸಮಸ್ಯೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದು ಅಲ್ಲಿಯವರೆಗೆ ಬಿಎಂಟಿಸಿ ಈ ತಾತ್ಕಾಲಿಕ ಪರಿಹಾರಕ್ಕೆ ಮುಂದಾಗಿದೆ.

ಮೂರು ಘಟನೆಗಳಲ್ಲಿ ಯಾರಿಗೂ ತೊಂದರೆಯಾಗದಿದ್ದರೂ, ಪಾಲಿಕೆಯು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಮಿತಿಯನ್ನು ರಚಿಸಿದೆ. ಅಶೋಕ್ ಲೇಲ್ಯಾಂಡ್ ಕಂಪನಿಯಿಂದ ಖರೀದಿಸಿದ ಎಲ್ಲಾ 186 ಬಸ್‌ಗಳನ್ನು ಪರಿಶೀಲಿಸುವಂತೆಯೂ ಹೇಳಿದೆ.

2014 ರಲ್ಲಿ ಬಿಎಂಟಿಸಿ 186 ಅಶೋಕ್ ಲೇಲ್ಯಾಂಡ್ BS-4 ಮಿಡಿ ಬಸ್‌ಗಳನ್ನು ಖರೀದಿಸಿತ್ತು, ಮಿಡಿ ಬಸ್- ಮಿನಿ ಬಸ್‌ಗಳಿಗಿಂತ ದೊಡ್ಡದಾಗಿದೆ. ಈ ಬಸ್ಸುಗಳು ಮುಖ್ಯವಾಗಿ ನಗರದ ಕಿರಿದಾದ ಮತ್ತು ದಟ್ಟಣೆಯ ಪ್ರದೇಶಗಳಲ್ಲಿ ಸೇವೆಗೆ ಬಳಸಲ್ಪಡುತ್ತಿದ್ದು ಇವುಗಳು 9ಮೀ-ಉದ್ದ ಮತ್ತು 33 ಆಸನಗಳನ್ನು ಹೊಂದಿವೆ.

ಏಪ್ರಿಲ್ 9 ರಂದು (ಶೇಷಾದ್ರಿ ರಸ್ತೆಯ ಎಸ್‌ಜೆಪಿ ಕಾಲೇಜು ಬಳಿ), ಫೆಬ್ರವರಿ 1 (ದಕ್ಷಿಣ ಬೆಂಗಳೂರು ನಂದಾ ಟಾಕೀಸ್ ರಸ್ತೆ ಬಳಿ) ಮತ್ತು ಜನವರಿ 21 ರಂದು (ಚಾಮರಾಜಪೇಟೆ ಬಳಿಯ ಮಕ್ಕಳ ಕೂಟ ಪಾರ್ಕ್ ಬಳಿ) ಮೂರು ಬಸ್‌ಗಳಿಗೆ ಬೆಂಕಿ ತಗುಲಿದ ಘಟನೆಗಳು ಸಂಭವಿಸಿವೆ.

ಇದನ್ನೂ ಓದಿ: ಬಿಎಂಟಿಸಿ ಬಸ್​ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು? ಪ್ರಯಾಣಿಕರ ಆತಂಕಕ್ಕೆ ಮುಕ್ತಿ ಯಾವಾಗ?

Web contact

TV9 Kannada

Read More
Follow Us