ಮಳೆ ಇಲ್ಲದೆ ಕಾವೇರಿ ನದಿ ಪಾತ್ರ ಬಣಬಣ: ಮೇಕೇದಾಟು ಕ್ಯಾತೆ ನಡುವೆಯೇ ಕರ್ನಾಟಕಕ್ಕೆ ಮತ್ತೊಂದು ತಲೆಬಿಸಿ

ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಕಾವೇರಿ ನದಿ ಪಾತ್ರ ಹಾಗೂ ಕೆಆರ್‌ಎಸ್, ಹಾರಂಗಿ, ಕಬಿನಿ ಜಲಾಶಯಗಳು ಬರಿದಾಗುತ್ತಿದ್ದು, ತಮಿಳುನಾಡಿನ ಮೇಕೆದಾಟು ವಿರೋಧಿ ನಿರ್ಣಯದ ನಡುವೆಯೇ ಕರ್ನಾಟಕಕ್ಕೆ ತೀವ್ರ ಜಲಸಂಕಷ್ಟದ ಭೀತಿ ಎದುರಾಗಿದೆ. ಕೊಡಗು-ಮೈಸೂರು ಗಡಿಯಲ್ಲಿರುವ ಕೊಪ್ಪ ಸೇತುವೆ ಬಳಿ ಕಾವೇರಿ ನದಿಯ ಸ್ಥಿತಿಗತಿ ಪರಿಶೀಲಿಸಿದಾಗ, ಸಾಮಾನ್ಯವಾಗಿ 10-15 ಅಡಿ ಹರಿಯಬೇಕಿದ್ದ ನದಿ ಈಗ ಕೇವಲ ಅರ್ಧದಿಂದ ಒಂದು ಅಡಿ ನೀರಿಗೆ ಸೀಮಿತವಾಗಿರೋದು ಕಂಡುಬಂದಿದೆ.

ಮಳೆ ಇಲ್ಲದೆ ಕಾವೇರಿ ನದಿ ಪಾತ್ರ ಬಣಬಣ: ಮೇಕೇದಾಟು ಕ್ಯಾತೆ ನಡುವೆಯೇ ಕರ್ನಾಟಕಕ್ಕೆ ಮತ್ತೊಂದು ತಲೆಬಿಸಿ
ಬರಿದಾಗಿರುವ ಕಾವೇರಿ ಒಡಲು
Image Credit source: Tv9 Kannada

Updated on: Jun 19, 2026 | 12:36 PM

ಬೆಂಗಳೂರು, ಜೂನ್​​ 19: ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ವಿವಾದಕ್ಕೆ ಬಹುದೊಡ್ಡ ಇತಿಹಾಸವೇ ಇದೆ. ನೀರು ಹಂಚಿಕೆ ಸೇರಿ ಮೇಕೆದಾಟು ಯೋಜನೆಗೆ ನೆರೆ ರಾಜ್ಯದಿಂದ ಕ್ಯಾತೆ ನಡೆದುಕೊಂಡೇ ಬಂದಿದ್ದು, ಈ ನಡುವೆ ಮಳೆಯ ತೀವ್ರ ಅಭಾವದ ಕಾರಣ ಕಾವೇರಿ ನದಿ ಒಡಲು ಸಂಪೂರ್ಣ ಬರಿದಾಗಿರೋದು ಕರ್ನಾಟಕಕ್ಕೆ ಟೆನ್ಷನ್​​ ಹೆಚ್ಚಿಸಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ತಮಿಳುನಾಡಿಗೆ ನೀರು ನೀಡೋದು ಹಾಗಿರಲಿ ಮೈಸೂರು, ಬೆಂಗಳೂರಿನಲ್ಲಿಯೇ ಕುಡಿಯುವ ನೀರಿಗೂ ಪರದಾಟ ನಡೆಸಬೇಕಾದ ಸ್ಥಿತಿ ಬರಬಹುದೆಂಬ ಆತಂಕ ಶುರುವಾಗಿದೆ.

ಕಾವೇರಿ ನದಿ ಸಂಪೂರ್ಣ ಖಾಲಿ ಖಾಲಿ

Cauvery River: ಜೂನ್‌ನಲ್ಲಿ ಎಷ್ಟಿರಬೇಕಿತ್ತು ಕಾವೇರಿ ನದಿ ಹರಿವು? ಈಗ ಎಷ್ಟಿದೆ? ಪ್ರತ್ಯಕ್ಷ ವರದಿ | #TV9D

ಜೂನ್ ತಿಂಗಳಲ್ಲಿ ಧಾರಾಕಾರ ಮಳೆ ನಿರೀಕ್ಷಿಸಲಾಗಿದ್ದ ಕೊಡಗು ಜಿಲ್ಲೆಯ ಕಾವೇರಿ ನದಿ ಪಾತ್ರದಲ್ಲಿ, ನದಿ ಹರಿವು ಗಣನೀಯವಾಗಿ ಕುಸಿದಿದೆ. ಕೊಡಗು-ಮೈಸೂರು ಗಡಿಯಲ್ಲಿರುವ ಕೊಪ್ಪ ಸೇತುವೆ ಬಳಿ ಕಾವೇರಿ ನದಿಯ ಸ್ಥಿತಿಗತಿ ಪರಿಶೀಲಿಸಿದಾಗ, ಸಾಮಾನ್ಯವಾಗಿ 10-15 ಅಡಿ ಹರಿಯಬೇಕಿದ್ದ ನದಿ ಈಗ ಕೇವಲ ಅರ್ಧದಿಂದ ಒಂದು ಅಡಿ ನೀರಿಗೆ ಸೀಮಿತವಾಗಿದೆ. ನದಿಯ ಒಡಲು ಕಲ್ಲುಗಳಿಂದ ಕೂಡಿದ್ದು, ಜಲಮಾಪಕದಲ್ಲಿ ನೀರು ಶೂನ್ಯ ಮಟ್ಟವನ್ನು ತಲುಪಿದೆ. ಕಾವೇರಿ ನದಿಯ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್ ಮತ್ತು ಹಾರಂಗಿ ಸಹ ತುಂಬದೆ ಇರುವುದರಿಂದ ಮುಂಬರುವ ದಿನಗಳಲ್ಲಿ ಜಲಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಮೇಕೆದಾಟು ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

ಡ್ಯಾಂಗಳ ಸದ್ಯದ ಸ್ಥಿತಿಗತಿ

ಜಲಾಶಯ ಗರಿಷ್ಠ ಸಾಮರ್ಥ್ಯ ಈಗಿರುವ ನೀರು
ಕೆಆರ್​​ಎಸ್​​ 49 ಟಿಎಂಸಿ 11 ಟಿಎಂಸಿ
ಹಾರಂಗಿ 5.7 ಟಿಎಂಸಿ 2.3 ಟಿಎಂಸಿ
ಕಬಿನಿ 19.52 ಟಿಎಂಸಿ 5.05 ಟಿಎಂಸಿ

ಬರಿದಾಗುತ್ತಿರುವ ಡ್ಯಾಂಗಳು

49 ಟಿಎಂಸಿ ಸಾಮರ್ಥ್ಯ ಹೊಂದಿರುವ ಕೆಆರ್​​ಎಸ್​​ ಡ್ಯಾಂನಲ್ಲಿ ಈಗ ಲಭ್ಯವಿರೋದು ಕೇವಲ 11 ಟಿಎಂಸಿ ಮಾತ್ರ. ಹಾಗೆಯೇ 5.7 ಟಿಎಂಸಿ ಗರಿಷ್ಠ ಸಾಮರ್ಥ್ಯವಿರುವ ಹಾರಂಗಿ ಜಲಾಶಯದಲ್ಲಿ ಈಗ 2.3 ಟಿಎಂಸಿ ಮಾತ್ರ ಲಭ್ಯವಿದ್ದು, ಆ ಪೈಕಿ ಬಳಕೆಗೆ ಸಿಗೋದು 1.3 ಟಿಎಂಸಿ ಮಾತ್ರ. ಜಲಾಶಯದ ಒಳಹರಿವು 255 ಕ್ಯೂಸೆಕ್​​ ಇದ್ದರೆ ಹೊರ ಹರಿವು 180 ಕ್ಯೂಸೆಕ್​​ನಷ್ಟಿದೆ. ಕಳೆದ ವರ್ಷ ಇದರ ಪ್ರಮಾಣ 2853 ಮತ್ತು 3416 ಕ್ಯೂಸೆಕ್​​ಗಳಷ್ಟಿತ್ತು ಎನ್ನುವುದಿಲ್ಲಿ ಗಮನಾರ್ಹ ವಿಷಯವಾಗಿದೆ.

ಮತ್ತೊಂದೆಡೆ ಕಬಿನಿ ಜಲಾಶಯದಲ್ಲಿಯೂ ನೀರಿನ ಸಂಗ್ರಹ ಆತಂಕಕಾರಿ ಮಟ್ಟಕ್ಕೆ ತಲುಪಿದೆ. ಶುಕ್ರವಾರ (ಜೂನ್ 19) ಬೆಳಗ್ಗೆ 8 ಗಂಟೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 53.38 ಅಡಿ ಇದ್ದು, ಒಟ್ಟು 5.05 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 84 ಅಡಿ ಹಾಗೂ ಗರಿಷ್ಠ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ ಆಗಿದೆ. ಜಲಾಶಯಕ್ಕೆ ಪ್ರಸ್ತುತ 796 ಕ್ಯೂಸೆಕ್ ನೀರು ಮಾತ್ರ ಒಳಹರಿದು ಬರುತ್ತಿದ್ದು, ನದಿಗೆ ಹಾಗೂ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ಯಾವುದೇ ನೀರು ಬಿಡುಗಡೆ ಮಾಡಲಾಗುತ್ತಿಲ್ಲ. ಹೀಗಾಗಿ ಒಟ್ಟು ಹೊರಹರಿವು ಶೂನ್ಯ ಕ್ಯೂಸೆಕ್ ಆಗಿದೆ. ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಮತ್ತು ಸಂಗ್ರಹ ಎರಡೂ ಗಣನೀಯವಾಗಿ ಕಡಿಮೆಯಾಗಿದೆ.

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ನಿರ್ಣಯ

ಕರ್ನಾಟಕ ಸರ್ಕಾರವು ಉದ್ದೇಶಿಸಿರುವ ಮೇಕೆದಾಟು ಯೋಜನೆಗೆ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮಂಡಿಸಿದ ಮೇಕೆದಾಟು ವಿರೋಧಿ ನಿರ್ಣಯವನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿದೆ. ಈ ಯೋಜನೆಗೆ ಯಾವುದೇ ರೀತಿಯ ತಾಂತ್ರಿಕ ಅಥವಾ ಪರಿಸರ ಇಲಾಖೆಯ ಅನುಮತಿಯನ್ನು ನೀಡಬಾರದು ಎಂದು ತಮಿಳುನಾಡು ಸರ್ಕಾರವು ಈ ನಿರ್ಣಯದ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:35 pm, Fri, 19 June 26

Follow Us