ಹೋಟೆಲ್ ಬಿಲ್‌ನಲ್ಲಿ ಗ್ಯಾಸ್ ಶುಲ್ಕ, ಎಲ್‌ಪಿಜಿ ಫೀಸ್ ಹಾಕುವಂತಿಲ್ಲ: ಬೆಂಗಳೂರಿನ ಹೋಟೆಲ್‌ಗಳಿಗೆ ಸಿಸಿಪಿಎ ಖಡಕ್​ ಸೂಚನೆ!

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಬೆಂಗಳೂರು ಹೋಟೆಲ್‌ಗಳಲ್ಲಿ ವಿಧಿಸಲಾಗುತ್ತಿದ್ದ ಎಲ್‌ಪಿಜಿ/ಫ್ಯೂಯಲ್ ಸರ್‌ಚಾರ್ಜ್‌ಗೆ ಬ್ರೇಕ್ ಹಾಕಿದೆ. ಇದು ಗ್ರಾಹಕ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ 'ಅನ್ಯಾಯದ ವ್ಯಾಪಾರ ಪದ್ಧತಿ' ಎಂದು ಘೋಷಿಸಲಾಗಿದೆ. ಹೋಟೆಲ್‌ಗಳ ಸಂಘ ಈ ಆದೇಶವನ್ನು ಬೆಂಬಲಿಸಿದ್ದು, ಸದಸ್ಯರಿಗೆ ಸುತ್ತೋಲೆ ಕಳುಹಿಸಿದೆ. ಕೆಲವು ಹೋಟೆಲ್ ಮಾಲೀಕರು ಅನಿಲ ಬೆಲೆ ಏರಿಕೆಯ ಸವಾಲುಗಳನ್ನು ಎದುರಿಸುತ್ತಿದ್ದು, ಮೆನು ಬೆಲೆ ಹೆಚ್ಚಳ ಅನಿವಾರ್ಯ ಎನ್ನುತ್ತಿದ್ದಾರೆ.

ಹೋಟೆಲ್ ಬಿಲ್‌ನಲ್ಲಿ ಗ್ಯಾಸ್ ಶುಲ್ಕ, ಎಲ್‌ಪಿಜಿ ಫೀಸ್ ಹಾಕುವಂತಿಲ್ಲ: ಬೆಂಗಳೂರಿನ ಹೋಟೆಲ್‌ಗಳಿಗೆ ಸಿಸಿಪಿಎ ಖಡಕ್​ ಸೂಚನೆ!
ಸಾಂದರ್ಭಿಕ ಚಿತ್ರ

Updated on: Mar 30, 2026 | 10:49 AM

ಬೆಂಗಳೂರು, ಮಾ.30: ಬೆಂಗಳೂರಿನಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಇತ್ತೀಚೆಗೆ ಗ್ರಾಹಕರಿಗೆ ವಿಧಿಸಲಾಗುತ್ತಿದ್ದ ‘ಎಲ್‌ಪಿಜಿ ಫೀಸ್’ ಅಥವಾ ‘ಫ್ಯೂಯಲ್ ಸರ್‌ಚಾರ್ಜ್’ (ಇಂಧನ ಚೇತರಿಕೆ ಶುಲ್ಕ) ಗಳಿಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಬ್ರೇಕ್ ಹಾಕಿದೆ. ಅಡುಗೆ ಅನಿಲದ ಬಿಕ್ಕಟ್ಟಿನ ನೆಪವೊಡ್ಡಿ ಗ್ರಾಹಕರಿಂದ ಅನಗತ್ಯವಾಗಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ಹೋಟೆಲ್‌ಗಳ ವಿರುದ್ಧ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಬೆಂಗಳೂರಿನ ಹಲವು ಹೋಟೆಲ್‌ಗಳು ಮೆನು ಬೆಲೆ ಮತ್ತು ತೆರಿಗೆಗಳ ಹೊರತಾಗಿ, ‘ಎಲ್‌ಪಿಜಿ ಚಾರ್ಜ್’ ಹೆಸರಿನಲ್ಲಿ ಪ್ರತ್ಯೇಕ ಶುಲ್ಕವನ್ನು ಬಿಲ್‌ನಲ್ಲಿ ಸೇರಿಸುತ್ತಿದ್ದವು. ಈ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಸಿಸಿಪಿಎ, “ಗ್ಯಾಸ್, ಇಂಧನ ಅಥವಾ ವಿದ್ಯುತ್ ವೆಚ್ಚಗಳು ವ್ಯವಹಾರದ ಕಾರ್ಯಾಚರಣೆಯ ಭಾಗವಾಗಿವೆ. ಇವುಗಳನ್ನು ಬಿಲ್‌ನಲ್ಲಿ ಪ್ರತ್ಯೇಕವಾಗಿ ತೋರಿಸಿ ಗ್ರಾಹಕರಿಂದ ವಸೂಲಿ ಮಾಡುವುದು ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಅಡಿಯಲ್ಲಿ ‘ಅನ್ಯಾಯದ ವ್ಯಾಪಾರ ಪದ್ಧತಿ’ ಎಂದು ಪರಿಗಣಿಸಲಾಗುತ್ತದೆ” ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು ಹೋಟೆಲ್‌ಗಳ ಸಂಘದ ಜಿ.ಕೆ. ಶೆಟ್ಟಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಬಿಲ್‌ನಲ್ಲಿ ಪ್ರತ್ಯೇಕವಾಗಿ ಎಲ್‌ಪಿಜಿ ಶುಲ್ಕ ವಿಧಿಸುವುದು ಕಾನೂನುಬಾಹಿರ. ಈ ಬಗ್ಗೆ ನಮ್ಮ ಸದಸ್ಯ ಹೋಟೆಲ್‌ಗಳಿಗೆ ಸುತ್ತೋಲೆ ಕಳುಹಿಸುತ್ತೇವೆ. ಅಡುಗೆ ಅನಿಲದ ದರ ಹೆಚ್ಚಳದಿಂದ ನಷ್ಟವಾಗುತ್ತಿದ್ದರೆ, ಹೋಟೆಲ್‌ಗಳು ಮೆನು ಬೆಲೆಯನ್ನು ಶೇ. 5 ರಿಂದ 10 ರಷ್ಟು ಹೆಚ್ಚಿಸಲು ಆಲೋಚಿಸಬಹುದು, ಆದರೆ ಪ್ರತ್ಯೇಕವಾಗಿ ಶುಲ್ಕ ವಿಧಿಸುವುದನ್ನು ನಾವು ಬೆಂಬಲಿಸುವುದಿಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಐಪಿಎಲ್ ಸಂಭ್ರಮದ ನಡುವೆ ಕಳ್ಳರ ಕೈಚಳಕ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 50ಕ್ಕೂ ಹೆಚ್ಚು ಮೊಬೈಲ್ ಫೋನ್ ಕಳವು

ಕಾಮತ್ ಹೋಟೆಲ್ಸ್‌ನ ವೀರೇಂದ್ರ ಕಾಮತ್ ಅವರು ಎಲ್‌ಪಿಜಿ ಬಿಕ್ಕಟ್ಟಿನ ತೀವ್ರತೆಯನ್ನು ವಿವರಿಸುತ್ತಾ, “ನಮಗೆ ದಿನಕ್ಕೆ ಐದು ಸಿಲಿಂಡರ್ ಬೇಕಿದ್ದರೆ ಈಗ ಕೇವಲ ಎರಡು ಮಾತ್ರ ಸಿಗುತ್ತಿದೆ. ಇದರಿಂದಾಗಿ ಗ್ಯಾಸ್ ಹೆಚ್ಚು ಬಳಸುವ ದೋಸೆಯಂತಹ ತಿಂಡಿಗಳನ್ನು ದಿನವಿಡೀ ನೀಡಲು ಸಾಧ್ಯವಾಗುತ್ತಿಲ್ಲ. ಅವುಗಳನ್ನು ಕೇವಲ ಬೆಳಿಗ್ಗೆ ಮತ್ತು ಸಂಜೆ ಅವಧಿಗೆ ಸೀಮಿತಗೊಳಿಸಿದ್ದೇವೆ. ನಷ್ಟ ಸರಿದೂಗಿಸಲು ಶೇ. 10 ರಷ್ಟು ಬೆಲೆ ಏರಿಕೆ ಅನಿವಾರ್ಯವಾಗಬಹುದು” ಎಂದಿದ್ದಾರೆ. ಸಣ್ಣ ಹೋಟೆಲ್ ಮಾಲೀಕರು ಈ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, “ವಿಮಾನಯಾನ ಸಂಸ್ಥೆಗಳು ಇಂಧನ ಶುಲ್ಕ ವಿಧಿಸಿದಾಗ ಪ್ರಶ್ನಿಸದವರು, ನಮ್ಮನ್ನೇ ಏಕೆ ಗುರಿ ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us