
ಬೆಂಗಳೂರು, ಫೆಬ್ರವರಿ 22: ಗುತ್ತಿಗೆದಾರನಿಂದ 5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಆದೇಶಿಸಿದೆ. ಯಲಹಂಕ ಜುಡಿಷಿಯಲ್ ಲೇಔಟ್ನಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಶಾಸಕರನ್ನು ಲೋಕಾಯುಕ್ತ ಪೊಲೀಸರು ಹಾಜರುಪಡಿಸಿದ್ದರು. ನ್ಯಾಯಾಧೀಶರ ಆದೇಶದ ಅನ್ವಯ ಬಿಜೆಪಿ ಶಾಸಕ ಚಂದ್ರು ಲಮಾಣಿಯೀಗ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಪಿಎ ಮಂಜುನಾಥ್, ಸಂಬಂಧಿ ಗುರು ಲಮಾಣಿಗೂ ನ್ಯಾಯಾಂಗ ಬಂಧನ ವಿಧಿಸಿ ಜಡ್ಜ್ ಆದೇಶಿಸಿದ್ದಾರೆ. ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ, ಸರ್ಕಾರಿ ಪಿಎ ಮಂಜುನಾಥ್ ಮತ್ತು ಖಾಸಗಿ ಪಿಎ ಗುರುವಿಗೆ ವೈದ್ಯಕೀಯ ತಪಾಸಣೆ ಬಳಿಕ ಲೋಕಾಯುಕ್ತ ಪೊಲೀಸರು ಅವರನ್ನು ಬೆಂಗಳೂರಿಗೆ ಕರೆ ತಂದಿದ್ದರು.
ಪ್ರಕರಣ ಸಂಬಂಧ ಶಾಸಕ ಚಂದ್ರು ಲಮಾಣಿ ಹಾಗೂ ಗುತ್ತಿಗೆದಾರನ ನಡುವೆ ನಡೆದ ಸಂಭಾಷಣೆ ಆಡಿಯೋವನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆಡಿಯೋ ಎಫ್ಎಸ್ಎಲ್ ವರದಿಗಾಗಿ ಅವರು ಕಾಯುತ್ತಿದ್ದಾರೆ ಎನ್ನಲಾಗಿದೆ. ಶಾಸಕರು ಗುತ್ತಿಗೆದಾರನ ಜೊತೆ ಕಮಿಷನ್ ಬಗ್ಗೆ ಮಾತನಾಡಿದ ಆಡಿಯೋ ಸೇರಿ ಹಲವು ಮಹತ್ವದ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿಯೂ ಇದೆ. ಜುಲೈನಲ್ಲಿ ಮಂಜೂರಾಗಿದ್ದ ಟೆಂಡರ್ನ ಕಾಮಗಾರಿಗೆ ಒಂದುವರೆ ತಿಂಗಳ ಹಿಂದೆ ಶಾಸಕರು ಚಾಲನೆ ನೀಡಿದ್ದರು. ಪೂಜೆ ಮಾಡಿದ ದಿನದ ಸಂಜೆಯೇ ಹಣ ಕೊಡುವುದಾಗಿ ಮಾತುಕತೆ ನಡೆದಿತ್ತು. ಆದರೆ ಪೂಜೆ ಬಳಿಕ ಗುತ್ತಿಗೆದಾರ ವಿಜಯರಾಜ್ ಫೋನ್ ಕರೆ ಸ್ವೀಕರಿಸಿಲ್ಲ. ಪಿಎಗಳು ಪೋನ್ ಮಾಡಿದರೂ ಸ್ಪಂದನೆ ಇರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ; ಬೆಂಬಲಿಗರಿಂದ ಹೈಡ್ರಾಮಾ
ಇದಾದ ಬಳಿಕ ಒಂದೂವರೆ ತಿಂಗಳ ನಂತರ ಗುತ್ತಿಗೆದಾರ ಶಾಸಕರ ಬಳಿ ಹೋಗಿದ್ದರು. ಆಗ ಶಾಸಕರು ಜೋರಾಗಿ ಮಾತಾಡಿದ್ದು, ನಿನ್ನ ನಡಾ ಮುರಿಸ್ತೀನಿ ಎಂದು ಅವಾಜ್ ಹಾಕಿರೋ ಆಡಿಯೋ ಕೂಡ ಲೋಕಾಯುಕ್ತಕ್ಕೆ ಸಿಕ್ಕಿದೆ ಎನ್ನಲಾಗಿದೆ. ಇನ್ನು ಲೋಕಾಯುಕ್ತ ವಿಚಾರಣೆ ವೇಳೆ ಶಾಸಕರು ತಾನು ಕಮಿಷನ್ ಪಡೆದಿಲ್ಲ, ಹಣ ಮುಟ್ಟಿಲ್ಲ ಎಂದಿದ್ದರು. ಆದರೆ ಹಣ ಪಡೆದಿದ್ದ ಪಿಎ ಗುರು ಅದನ್ನು ಶಾಸಕರಿಗೆ ನೀಡಿದ್ದ. ಆ ಹಣದಲ್ಲಿ ಸ್ವಲ್ಪ ಮೊತ್ತವನ್ನು ಖರ್ಚಿಗಾಗಿ ಸರ್ಕಾರಿ ಪಿಎ ಮಂಜುನಾಥ್ಗೆ ನೀಡಿದ್ದರು. ಇನ್ನೇನು ಆಸ್ಪತ್ರೆಯಿಂದ ಕಾರ್ಯಕ್ರಮವೊಂದಕ್ಕೆ ಹೊರಡಬೇಕು ಎನ್ನುವಷ್ಟರಲ್ಲಿ ಲೋಕಾ ಅಧಿಕಾರಿಗಳು ಖೆಡ್ಡಾ ತೋಡಿದ್ದು, ಶಾಸಕರು ಹಾಗೂ ಪಿಎಗಳ ಕೈ ತೊಳೆದಾಗ ಪಿಂಕ್ ಕಲರ್ ಬಂದ ಕಾರಣ ಶಾಸಕರು ಲಾಕ್ ಆಗಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:11 pm, Sun, 22 February 26