ವಿವಾದದ ಬೆನ್ನಲ್ಲೇ ಸರಣಿ ಎಕ್ಸ್​​ ಪೋಸ್ಟ್​​ ಬಗ್ಗೆ ಸಿಎಂ ಸ್ಪಷ್ಟನೆ: ಹೆಚ್​​ಡಿಕೆಗೂ ತಿವಿದ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಮಾಜಿಕ ನ್ಯಾಯದ ಕುರಿತ ಲೇಖನದ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಸಮಾಜದ ಚಲನಶೀಲತೆಗೆ ಒತ್ತು ನೀಡುವ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಅವರ ಟೀಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ ಸಿದ್ದರಾಮಯ್ಯ, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಜಾತಿ ರಾಜಕಾರಣದಲ್ಲಿ ತೊಡಗಿವೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಮಾತ್ರ ಎಲ್ಲ ಸಮುದಾಯದ ನಾಯಕರಿಗೆ ಸಮಾನ ಅವಕಾಶ ನೀಡುತ್ತದೆ ಎಂದೂ ಪ್ರತಿಪಾದಿಸಿದ್ದಾರೆ.

ವಿವಾದದ ಬೆನ್ನಲ್ಲೇ ಸರಣಿ ಎಕ್ಸ್​​ ಪೋಸ್ಟ್​​ ಬಗ್ಗೆ ಸಿಎಂ ಸ್ಪಷ್ಟನೆ: ಹೆಚ್​​ಡಿಕೆಗೂ ತಿವಿದ ಸಿದ್ದರಾಮಯ್ಯ
ಸಿದ್ದರಾಮಯ್ಯ
Image Credit source: Google

Updated on: Feb 22, 2026 | 2:57 PM

ಬೆಂಗಳೂರು, ಫೆಬ್ರವರಿ 22: ಸಾಮಾಜಿಕ ನ್ಯಾಯದ ಬಗ್ಗೆ ಬರೆದಿದ್ದ ಲೇಖನ ವಿವಾದದ ಕೇಂದ್ರ ಬಿಂದು ಆಗುತ್ತಿದ್ದಂತೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸಮರ್ಥನೆ ನೀಡಿದ್ದಾರೆ. ಸಾಮಾಜಿಕ ದಿನದ ಆಚರಣೆ ಅಂಗವಾಗಿ ತಾನು ಪತ್ರಿಕೆಗೆ ಬರೆದ ಲೇಖನ ರಾಜಕೀಯ ವಲಯದಲ್ಲಿ ಚರ್ಚೆಗೆ ಒಳಗಾಗಿದೆ. ನೀರು ನಿಂತಲ್ಲಿಯೇ ನಿಂತು ಮಡುಗಟ್ಟಿ ಹೋದರೆ ಕೆಸರಾಗುತ್ತದೆ. ಹರಿಯುತ್ತಿದ್ದರೆ ಅದು ತಿಳಿಯಾಗುತ್ತಾ ಹೋಗುತ್ತದೆ. ಸಾಮಾಜಿಕ ವ್ಯವಸ್ಥೆ ಕೂಡ ಹಾಗೆಯೇ, ಪಟ್ಟಭದ್ರವಾಗಿ ಉಳಿಯದೆ ಚಲನಶೀಲತೆ ಪಡೆದುಕೊಂಡರೆ ಅದು ಜನಪರವಾಗಿ ಪರಿವರ್ತನೆಯಾಗುತ್ತೆ. ಈ ದೃಷ್ಟಿಯಿಂದ ನನ್ನ ಲೇಖನದ ಬಗ್ಗೆ ಚರ್ಚೆಯನ್ನು ಸ್ವಾಗತಿಸುತ್ತೇನೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸಿಎಂ ತಿಳಿಸಿದ್ದಾರೆ.

‘ನನ್ನ ನಿಲುವು ಸಾಮಾಜಿಕ ನ್ಯಾಯದ ಪರ’

ಸಾಮಾಜಿಕ ನ್ಯಾಯದ ಬಗ್ಗೆ ನಾನು ಇದೇ ಮೊದಲ ಬಾರಿ ಮಾತನಾಡಿದ್ದಲ್ಲ. ನನ್ನ ರಾಜಕೀಯ ಜೀವನ ನೋಡುತ್ತಾ ಬಂದವರಿಗೆ ಇದು ಗೊತ್ತಿರುತ್ತದೆ. ಅಧಿಕಾರ ಇರಲಿ, ಇಲ್ಲದೆ ಇರಲಿ ಸಾಮಾಜಿಕ ನ್ಯಾಯದ ಪರ ನನ್ನ ನಿಲುವು ಇರಲಿದೆ. ಜಾತಿ ವ್ಯವಸ್ಥೆ ಬಗ್ಗೆ ಟೀಕಿಸ್ತಿರುವ ರಾಜಕಾರಣಿಗಳಿಗಿಂತ ಹೆಚ್ಚಿನ ಸ್ಪಷ್ಟತೆ ನನಗಿದ್ದು, ಈ ಬಗ್ಗೆ ನಾನು ಸಾರ್ವಜನಿಕ ಸಂವಾದಕ್ಕೆ ಸಿದ್ಧವಾಗಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ರಣರಂಗದಿಂದ ಓಡಿ ಹೋಗುವ ಹೇಡಿ ನಾನಲ್ಲ ಎಂದ ಸಿದ್ದರಾಮಯ್ಯ; ಏನಿದು ಸಿಎಂ ಸರಣಿ ಪೋಸ್ಟ್​ಗಳ ಮರ್ಮ?

ಹೆಚ್​​ಡಿಕೆಗೆ ತಿರುಗೇಟು

ತಮ್ಮ ಲೇಖನದ ಬಗ್ಗೆ ಟೀಕೆ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೂ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಚಲನಶೀಲ ಸಮಾಜದ ಅಗತ್ಯವಿದೆ. ಹೆಚ್​ಡಿಡಿ, ಹೆಚ್​ಡಿಕೆ ಸ್ವಜಾತಿ ವಿರೋಧಿಗಳು ಮತ್ತು ಕುಟುಂಬವಾದಿಗಳು. ಸ್ವಾರ್ಥಕ್ಕಾಗಿ ತಮ್ಮ ಜಾತಿಯ ನಾಯಕರು ಬೆಳೆಯದಂತೆ ಅವರು ತುಳಿದಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಜೆಡಿಎಸ್‌ ಬಿಟ್ಟ ಒಕ್ಕಲಿಗ ನಾಯಕರ ಪಟ್ಟಿಯನ್ನೂ ಸಿಎಂ ಬಿಡುಗಡೆ ಮಾಡಿದ್ದಾರೆ. ಒಕ್ಕಲಿಗ ನಾಯಕರನ್ನು ಗುರುತಿಸಿ ಬೆಳೆಸಿದ್ದು ಕೇವಲ ಕಾಂಗ್ರೆಸ್ ಮಾತ್ರ. ಡಿಕೆಶಿ ಸೇರಿ ಸಮರ್ಥ ಒಕ್ಕಲಿಗ ನಾಯಕರ ದಂಡೇ ಕಾಂಗ್ರೆಸ್‌ ಪಕ್ಷದಲ್ಲಿದೆ. ಒಕ್ಕಲಿಗರು ಅಥವಾ ದಲಿತರು ಸಿಎಂ ಆಗೋದು ಕಾಂಗ್ರೆಸ್‌ನಿಂದ ಮಾತ್ರ. ಜೆಡಿಎಸ್ ಅಥವಾ ಬಿಜೆಪಿಯಲ್ಲಿ ದಲಿತ ಸಿಎಂ ಮಾಡುವ ತಾಕತ್ತಿದೆಯೇ? ಎಂದವರು ಪ್ರಶ್ನಿಸಿದ್ದಾರೆ. ಅಧಿಕಾರಕ್ಕಾಗಿ ಜಾತಿ ಎಳೆದು ತಂದಿಲ್ಲ, 4 ದಶಕದಿಂದ ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಬೆನ್ನಿಗೆ ನಿಂತ ರಾಜಣ್ಣ

ಜಾತಿ ಅಸ್ತ್ರ ಬಳಸಿ ಸರಣಿ ಪೋಸ್ಟ್​​ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಮಾಜಿ ಸಚಿವ ಕೆ.ಎನ್​. ರಾಜಣ್ಣ ನಿಂತಿದ್ದಾರೆ. ಪ್ರಧಾನಿ ಮೋದಿರನ್ನು ಟೀ ಮಾರುವವ ಅಂತಾ ಮಾತನಾಡಲ್ವಾ? ಹಾಗೆ ಸಿಎಂ ಸಿದ್ದರಾಮಯ್ಯ ಕುರಿ ಕಾಯುವವನು ಅಂತಾ ಹೇಳ್ತಾರೆ. ಪತ್ರಿಕೆಯಲ್ಲಿ ಬರೆದ ಲೇಖನದ ಮಾಹಿತಿಯನ್ನು ಟ್ವೀಟ್​ ಮಾಡಿದ್ದಾರೆ. ಅದರಲ್ಲಿ ತಪ್ಪೇನು ಇದೆ ಎಂದು ರಾಜಣ್ಣ ಪ್ರಶ್ನಿಸಿದ್ದಾರೆ. 2 ವರ್ಷ ಕುರಿ, ಎಮ್ಮೆ ಕಾಯುತ್ತಿದ್ದೆ ಎಂದು ಖುದ್ದು ಸಿಎಂ ಹೇಳಿದ್ದಾರೆ. ಚರ್ಚೆ ಆಗಲಿ ಬಿಡಿ, ಎಲ್ಲವೂ ಗೊತ್ತಾಗುತ್ತೆ. ರಾಜಕೀಯ ಅಂದರೆ ಸಂಘರ್ಷ, ಕುರ್ಚಿಗಾಗಿ ಪೈಪೋಟಿ ನಡೆಯುತ್ತೆ ಎಂದವರು ತಿಳಿಸಿದ್ದಾರೆ.

ವರದಿ: ಈರಣ್ಣಾ ಬಸವ, ಟಿವಿ9 ಕನ್ನಡ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:46 pm, Sun, 22 February 26