ಬೆಂಗಳೂರು: ಹುಟ್ಟಿಸಿದ ತಂದೆ-ತಾಯಿಯನ್ನೇ ಕೊಂದವನ ಕೈಯಲ್ಲೇ ಅಂತ್ಯಸಂಸ್ಕಾರ!

ಅದು ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಘಟನೆ. ಹೆತ್ತ ಮಗನೇ ಅಪ್ಪ-ಅಮ್ಮನ ಕೊಂದು ಮುಗಿಸಿ ಮನೆಯಲ್ಲಿದ್ದ. ವಶಕ್ಕೆ ಪಡೆದ ಪೊಲೀಸರು ಬಂಧಿಸಿದ ಬಳಿಕ ವಿಚಾರಣೆ ವೇಳೆ ಕೊಲೆಗೆ ಹತ್ತಾರು ಕಾರಣ ಹೇಳಿದ್ದ. ಆದ್ರೆ, ಇದೀಗ ಅದೇ ಮಗ ಕೊಂದ ಅಪ್ಪ-ಅಮ್ಮನ ಸಂಸ್ಕಾರ ನೇರವೇರಿಸಿದ್ದಾನೆ. ಸೋದರಿ ಮನವಿಗೆ ಕೋರ್ಟ್, ಸ್ಪಂದಿಸಿ ಅವಕಾಶ ನೀಡಿದ ಈ ಕುರಿತ ಡಿಟೇಲ್ಸ್ ಈಕೆಳಗಿನಂತಿದೆ ಓದಿ.

ಬೆಂಗಳೂರು: ಹುಟ್ಟಿಸಿದ ತಂದೆ-ತಾಯಿಯನ್ನೇ ಕೊಂದವನ ಕೈಯಲ್ಲೇ ಅಂತ್ಯಸಂಸ್ಕಾರ!
Edited By:

Updated on: Feb 15, 2026 | 10:45 PM

ಬೆಂಗಳೂರು, (ಫೆಬ್ರವರಿ 15): ಪುತ್ರನೇ ತನ್ನ ಹೆತ್ತ ತಂದೆ ಹಾಗೂ ತಾಯಿಯನ್ನು (Father And Mother) ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿತ್ತು. ನೌಕಾಪಡೆಯ ನಿವೃತ್ತ ಕ್ಯಾಪ್ಟನ್‌ ನವೀನ್ ಚಂದ್ರ ಭಟ್ ಹಾಗೂ ಪತ್ನಿ ದಂತ ವೈದ್ಯೆಯಾಗಿದ್ದ ಡಾ.ಶ್ಯಾಮಲಾ ಭಟ್​​​ ನನ್ನು ಪುತ್ರ ರೋಹನ್ ಭಟ್ ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಜೋಡಿ ಕೊಲೆಗೆ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿತ್ತು. ಆದ್ರೆ, ಇದೀಗ ಅದೇ ಪುತ್ರ ರೋಹನ್, ತಂದೆ ತಾಯಿ ಅಂತ್ಯಕ್ರಿಯೆ ನೆರವೇರಿಸಿದ್ದಾನೆ.

ಹೌದು.. ನೌಜಾಪಡೆ ನಿವೃತ್ತ ಅಧಿಕಾರಿ ನವೀನ್‌ಚಂದ್ರ ಭಟ್‌ ಮತ್ತು ಅವರ ಪತ್ನಿ ಡ. ಶ್ಯಾಮಲಾ ಭಟ್‌ ಅವರನ್ನು ಕೊಲೆಗೈದಿದ್ದ ಪುತ್ರ ರೋಹನ್‌ ಭಟ್‌, ಕೋರ್ಟ್ ಅವಕಾಶ ನೀಡಿದ ಹಿನ್ನೆಲೆಯಲ್ಲಿ ವಿಲ್ಸನ್‌ಗಾರ್ಡನ್‌ ಚಿತಾಗಾರದಲ್ಲಿ ಪೊಲೀಸರ ಸಮ್ಮುಖದಲ್ಲಿ ಇಂದು (ಫೆಬ್ರವರಿ 14) ಪೋಷಕರ ಅಂತ್ಯಕ್ರಿಯೆ ನೆರವೇರಿಸಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡಬಲ್ ಮರ್ಡರ್: ಹೆತ್ತ ತಂದೆ-ತಾಯಿಯನ್ನೇ ಕೊಂದ ಮಗ

ರೋಹನ್‌ ಭಟ್‌ ಮಾನಸಿಕ ಅಸ್ವಸ್ಥನಾಗಿದ್ದ ಕಾರಣ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆರೋಪಿಯ ಸಹೋದರಿ ಅಮೆರಿಕದಿಂದ ಅಂತ್ಯಕ್ರಿಯೆಗೆ ಬಂದಿದ್ದರು. ಆಗ ಆಕೆ, ತನ್ನ ತಂದೆ-ತಾಯಿಯ ಅಂತಿಮ ವಿಧಿವಿಧಾನಗಳನ್ನು ಸಹೋದರ ರೋಹನ್‌ ನೆರವೇರಿಸಬೇಕು. ಇದು ನಮ್ಮ ಪೋಷಕರ ಇಚ್ಛೆಯಾಗಿತ್ತು ಎಂದು ಪೊಲೀಸರಿಗೆ ತಿಳಿಸಿದ್ದರು. ಜೊತೆಗೆ, ನ್ಯಾಯಾಲಯಕ್ಕೂ ಮನವಿ ಮಾಡಿದ್ದರು. ಈ ಮನವಿಗೆ ಕೋರ್ಟ್ ಸಹ ಸ್ಪಂದಿಸಿದ್ದು, ಹಂತಕ ರೋಹನ್​​​ ಗೆ ಅಂತ್ಯಕ್ರಿಯೆ ನಡೆಸಲು ಅನುಮತಿ ನೀಡಿದೆ.

ನ್ಯಾಯಾಲಯದ ಅನುಮತಿ ಮೇರೆಗೆ ಎಚ್‌ಎಎಲ್‌ ಪೊಲೀಸರು ಅಂತ್ಯಕ್ರಿಯೆಗೆ ರೋಹನ್‌ ಭಟ್‌ನನ್ನು ಕರೆಸಿದ್ದರು. ಆರೋಪಿ ರೋಹನ್‌ ಭಟ್‌, ವಿಲ್ಸನ್‌ಗಾರ್ಡನ್‌ ಚಿತಾಗಾರದಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದ. ಬಳಿಕ ಪೊಲೀಸರು ಆರೋಪಿಯನ್ನು ಕರೆದೊಯ್ದರು.

ಸದ್ಯ ಆರೋಪಿ ರೋಹನ್ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಎನ್ನುವುದು ಗೊತ್ತಾಗಿದೆ. ಕಳೆದ ಕೆಲಸ ವರ್ಷಗಳಿಂದ ಸ್ಕಿಜೋಫ್ರೇನಿಯಾದ ಎಂಬ ಮನೋ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಸಹ ಪಡೆಯುತ್ತಿದ್ದಾನಂತೆ. ಇದೇ ಕಾರಣದ ಹಿನ್ನಲೆ ವಿದೇಶದಿಂದ ಕೆಲಸ ತ್ಯಜಿಸಿ ವಾಪಾಸ್ ಬಂದು ಬೆಂಗಳೂರಿನಲ್ಲಿ ಅಪ್ಪ-ಅಮ್ಮನ ಜೊತೆ ನೆಲೆಸಿದ್ದನಂತೆ.

ಅದೇನೆ ಇರಲಿ ತಂದೆ-ತಾಯಿ ಕಳೆದಕೊಂಡ ಸಹೋದರಿ, ಒಂದೆಡೆ ಅಪ್ಪ-ಅಮ್ಮನ ಕಳೆದುಕೊಂಡಿದ್ರೆ, ಇತ್ತ ಸೋದರ ಜೈಲು ಸೇರುವಂತಾಗಿರುವುದು ಕಂಗಲಾಗುವಂತೆ ಮಾಡಿದೆ.

ಘಟನೆ ಹಿನ್ನೆಲೆ

ಕಳೆದ ಬುಧವಾರ (ಫೆ.11)ರಂದು ಬೆಂಗಳೂರಿನ ಎಚ್‌ಎಎಲ್‌ ಬಳಿಯ ವಿಜ್ಞಾನ ನಗರದಲ್ಲಿ, ಮಗನಿಂದಲೇ ಆತನ ತಂದೆ-ತಾಯಿಯ ಹತ್ಯೆ ನಡೆದಿತ್ತು. ನಾಲ್ಕು ಲಕ್ಷ ರೂ. ಹಣಕಾಸಿನ ವಿಚಾರಕ್ಕೆ ರೋಹನ್‌ ಭಟ್‌ (33) ಎಂಬಾತ ತನ್ನ ಪೋಷಕರಾದ ನೌಕಾಪಡೆ ನಿವೃತ್ತ ಅಧಿಕಾರಿ ನವೀನ್‌ಚಂದ್ರ ಭಟ್‌ ಮತ್ತು ತಾಯಿ ಡಾ. ಶ್ಯಾಮಲಾ ಭಟ್‌ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದ ನವೀನ್‌ಚಂದ್ರ ಭಟ್‌ (60) ಭಾರತೀಯ ನೌಕಾಪಡೆಯಿಂದ ಕ್ಯಾಪ್ಟನ್‌ ಆಗಿ ಕೇವಲ ಆರು ವರ್ಷಗಳ ಹಿಂದಷ್ಟೇ ನಿವೃತ್ತಿ ಹೊಂದಿದ್ದರು. ಅವರ ಪತ್ನಿ ಡಾ. ಶ್ಯಾಮಲಾ ಭಟ್‌ ದಂತ ವೈದ್ಯೆಯಾಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ