
ಆನೇಕಲ್, ಏಪ್ರಿಲ್ 27: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಸಚಿವ ಡಿ. ಸುಧಾಕರ್ಗೆ (D Sudhakar) ಚಿಕಿತ್ಸೆ ಮುಂದುವರೆದಿದೆ. ಶ್ವಾಸಕೋಶದ ಇನ್ಫೆಕ್ಷನ್ ಹಿನ್ನೆಲೆ ವೆಂಟಿಲೇಟರ್, ಎಕ್ಮೋ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಶನಿವಾರ ಸಿಎಂ ಸಿದ್ದರಾಮಯ್ಯ ಮತ್ತು ಭಾನುವಾರ ಡಿಸಿಎಂ ಡಿಕೆ ಶಿವಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದಿದ್ದರು. ಇಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಡಿ.ಸುಧಾಕರ್ ಆರೋಗ್ಯ ವಿಚಾರಿಸಿದರು. ಅವರ ಆರೋಗ್ಯ ಸಹಜಸ್ಥಿತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
ಸಚಿವ ಡಿ.ಸುಧಾಕರ್ ಅವರ ಆರೋಗ್ಯ ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್, ಸಚಿವ ಡಿ.ಸುಧಾಕರ್ ಅವರ ಆರೋಗ್ಯ ಸಹಜಸ್ಥಿತಿಯಲ್ಲಿದೆ.
ಚಿಕಿತ್ಸೆ ನೀಡುತ್ತಿರುವ ವೈದ್ಯರು ಪಾಸಿಟಿವ್ ಆಗಿ ಹೇಳಿದ್ದಾರೆ. ಎಲ್ಲವೂ ದೇವರ ಇಚ್ಛೆ, ಅವರು ಗುಣಮುಖರಾಗಿ ಬರಬೇಕು. ಡಿ.ಸುಧಾಕರ್ ಬ್ರೈನ್ ನಾರ್ಮಲ್ ಆಗೋಕೆ ಸಮಯ ಹಿಡಿಯುತ್ತೆ. ಇನ್ನೂ ಪ್ರಜ್ಞೆ ಬಂದಿಲ್ಲ, ಪ್ರಜ್ಞೆ ಬರಲಿ ಎಂದು ವೈದ್ಯರು ಕಾಯುತ್ತಿದ್ದಾರೆ. ಸಚಿವ ಡಿ.ಸುಧಾಕರ್ ಗುಣಮುಖರಾಗಿ ಬರುತ್ತಾರೆ ಎಂದು ಹೇಳಿದ್ದಾರೆ.
ಡಿ ಸುಧಾಕರ್ ಆರೋಗ್ಯ ವಿಚಾರವನ್ನು ಸರ್ಕಾರ ಮುಚ್ಚಿಡುತ್ತಿದೆ ಎಂಬ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಡಿ.ಸುಧಾಕರ್ ಆರೋಗ್ಯದ ವಿಚಾರದಲ್ಲಿ ಮುಚ್ಚಿಡುವುದು ಏನೂ ಇಲ್ಲ. ಹೆಚ್ಡಿ ಕುಮಾರಸ್ವಾಮಿಗೆ ಗೊತ್ತಿರುವುದನ್ನು ಹೇಳುತ್ತಾರೆ. ಆ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದಿದ್ದಾರೆ.
ಇನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೂಡ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಸಚಿವ ಡಿ.ಸುಧಾಕರ್ ಆರೋಗ್ಯ ವಿಚಾರಿಸಿದರು. ಚಿಕಿತ್ಸೆ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಸುಧಾಕರ್ ಕುಟುಂಬಸ್ಥರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧೈರ್ಯ ಹೇಳಿದ್ದಾರೆ. ಅದೇ ರೀತಿಯಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಕೂಡ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:19 pm, Mon, 27 April 26