ಕೆಎಂಎಫ್​​ ನಂದಿನಿ ತುಪ್ಪಕ್ಕೆ ಭಾರಿ ಡಿಮ್ಯಾಂಡ್; ಮತ್ತಷ್ಟು ತುಪ್ಪ ಪೂರೈಸುವಂತೆ ಟಿಟಿಡಿ ಮನವಿ

| Updated By: ಆಯೇಷಾ ಬಾನು

Updated on: Sep 22, 2024 | 7:34 AM

ತಿರುಪತಿ ಲಡ್ಡು ವಿವಾದ: ಕರ್ನಾಟಕದ ಕೆಎಂಎಫ್​​ ನಂದಿನಿ ತುಪ್ಪಕ್ಕೆ ಭಾರಿ ಡಿಮ್ಯಾಂಡ್​​ ಬಂದಿದೆ. ತಿರುಪತಿ ಲಡ್ಡು ವಿವಾದ ಬೆನ್ನಲ್ಲೇ ಮತ್ತಷ್ಟು ನಂದಿನಿ ತುಪ್ಪ ಪೂರೈಸುವಂತೆ KMFಗೆ ಟಿಟಿಡಿ ಮನವಿ ಮಾಡಿದೆ. ಇ-ಮೇಲ್​​​ ಮೂಲಕ KMFಗೆ ಮನವಿ ಸಲ್ಲಿಸಿದೆ. ಈ ಬಗ್ಗೆ ಕೆಎಂಎಫ್​​ ಎಂಡಿ ಜಗದೀಶ್ ಟಿವಿ9ಗೆ ತಿಳಿಸಿದ್ದಾರೆ.

ಕೆಎಂಎಫ್​​ ನಂದಿನಿ ತುಪ್ಪಕ್ಕೆ ಭಾರಿ ಡಿಮ್ಯಾಂಡ್; ಮತ್ತಷ್ಟು ತುಪ್ಪ ಪೂರೈಸುವಂತೆ ಟಿಟಿಡಿ ಮನವಿ
ನಂದಿನಿ ತುಪ್ಪ
Follow us on

ಬೆಂಗಳೂರು, ಸೆ.22: ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ತಿರುಪತಿ ಲಡ್ಡು (Tirupati Laddu) ಪ್ರಕರಣ ಇದೀಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ದನದ ಕೊಬ್ಬು, ಮೀನೆಣ್ಣೆ ಬೆರೆಕೆ ಮಾಡಿದ್ದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ. ಇನ್ನು ಮತ್ತೊಂದೆಡೆ ಇದೀಗ ಕರ್ನಾಟಕದ ಕೆಎಂಎಫ್​​ ನಂದಿನಿ ತುಪ್ಪಕ್ಕೆ (Nandini Ghee) ಭಾರಿ ಡಿಮ್ಯಾಂಡ್​​ ಬಂದಿದೆ. ತಿರುಪತಿ ಲಡ್ಡು ವಿವಾದ ಬೆನ್ನಲ್ಲೇ ಮತ್ತಷ್ಟು ನಂದಿನಿ ತುಪ್ಪ ಪೂರೈಸುವಂತೆ KMFಗೆ ಟಿಟಿಡಿ ಮನವಿ ಮಾಡಿದೆ. ಇ-ಮೇಲ್​​​ ಮೂಲಕ KMFಗೆ ಮನವಿ ಸಲ್ಲಿಸಿದೆ.

ಬೆಂಗಳೂರಿನಲ್ಲಿ ಟಿವಿ9 ಜೊತೆ ಕೆಎಂಎಫ್​​ ಎಂಡಿ ಜಗದೀಶ್​ ಮಾತನಾಡಿದ್ದು, ರಾಜ್ಯದ ಮುಜರಾಯಿ ದೇಗುಲಗಳಿಗೆ ನಂದಿನಿ ತುಪ್ಪ ಪೂರೈಕೆಗೆ ಸಿದ್ಧತೆ ನಡೆಯುತ್ತಿದೆ. ಜೊತೆಗೆ ಬೇರೆ ರಾಜ್ಯಗಳಿಂದಲೂ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಿದೆ. ಪ್ರತಿದಿನ 15 ಲಕ್ಷ ಲೀಟರ್ ಹಾಲಿನಿಂದ ತುಪ್ಪ ತಯಾರಿಸಲು ಸಿದ್ಧತೆ ನಡೆಯುತ್ತಿದೆ. ಟಿಟಿಡಿಗೆ ತೆರಳುವ ನಂದಿನಿ ತುಪ್ಪದ ವಾಹನಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತೆ. ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ವಾಹನಗಳಿಗೆ GPS ಟ್ರ್ಯಾಕ್, ಎಲೆಕ್ಟ್ರಿಕ್​ ಡೋರ್ ವ್ಯವಸ್ಥೆ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.

ಲ್ಯಾಬ್​ ಟೆಸ್ಟ್​ ಮಾಡಿದ ಬಳಿಕ ನಂದಿನಿ ತುಪ್ಪ ಪೂರೈಸಲಾಗುತ್ತೆ. ಈ ಹಿಂದೆ ಇದ್ದ ಸರ್ಕಾರದಲ್ಲಿ ಟಿಟಿಡಿಗೆ ತುಪ್ಪ ಪೂರೈಕೆ ಮಾಡಿರಲಿಲ್ಲ. ಇದೀಗ ಟಿಟಿಡಿ ಬೇಡಿಕೆ ಮೇರೆಗೆ ನಂದಿನಿ ತುಪ್ಪ ಪೂರೈಕೆ ಮಾಡ್ತಿದ್ದೇವೆ. ಹಿಂದೆ ತಿರುಪತಿಗೆ ಯಾಕೆ ತುಪ್ಪ ಪೂರೈಸುತ್ತಿಲ್ಲ ಎಂದು ಕೇಳುತ್ತಿದ್ದರು. ಇಂದು ತಿಮ್ಮಪ್ಪನ ಕೃಪೆಯಿಂದ ಹೆಚ್ಚು ತುಪ್ಪ ಪೂರೈಕೆ ಮಾಡುತ್ತಿದ್ದೇವೆ. ಇದು ಕೆಎಂಎಫ್​​ನ ಹೆಮ್ಮೆಯ ವಿಚಾರ ಎಂದು ಟಿವಿ9ಗೆ ಕೆಎಂಎಫ್​​ ಎಂಡಿ ಜಗದೀಶ್​ ತಿಳಿಸಿದರು.

ಇದನ್ನೂ ಓದಿ: ಕರ್ನಾಟಕದ ದೇಗುಲಗಳಲ್ಲಿ ನಂದಿನಿ ತುಪ್ಪ ಬಳಕೆಗೆ ಸೂಚನೆ: ಧಾರ್ಮಿಕ ದತ್ತಿ ಇಲಾಖೆ ಆದೇಶ

ಲ್ಯಾಬ್ ವರದಿಯಿಂದ ಆತಂಕಕ್ಕೆ ಒಳಗಾದ ಭಕ್ತರು

ತಿರುಪತಿ ಲಡ್ಡು ವಿವಾದ ಇದೀಗ ದೇಶದಲ್ಲೇ ಭಾರೀ ಸಂಚಲನ ಮೂಡಿಸಿದೆ. ಚಂದ್ರಬಾಬು ನಾಯ್ಡು ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ತಿರುಮಲ ಶ್ರೀವಾರಿ ಲಡ್ಡು ಭಕ್ತರ ಪಾಲಿಗೆ ಅತ್ಯಂತ ಪವಿತ್ರ. ಆದ್ರೆ ಇದೀಗ ಈ ಪಾವಿತ್ರ್ಯತೆಗೆ ಧಕ್ಕೆ ಬಂದಿದೆ ಅಂತ ಭಕ್ತರು ಕೂಡ ಆಕ್ರೋಶವನ್ನ ಹೊರ ಹಾಕ್ತಿದ್ದಾರೆ. ಇನ್ನೂ ಇವತ್ತು ಶ್ರೀರಾಮ ಸೇನೆ ಸಂಘಟನೆ ಬೆಂಗಳೂರು ಘಟಕದ ಮುಖಂಡರು, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಟಿಟಿಡಿ ದೇವಸ್ಥಾನದ ಆಡಳಿತ ಮಂಡಳಿಗೆ ಲಡ್ಡು ವಿತರಣೆಯನ್ನ ಲ್ಯಾಬ್ ನಲ್ಲಿ ಪರಿಶೀಲಿಸುವೆಗೂ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ರು.

ತುಪ್ಪದ ಬದಲಾಗಿ ಬೀಫ್ ಫ್ಯಾಟ್, ಫಿಶ್ ಆಯಿಲ್ ಬಳಕೆ ಮಾಡಿದ್ದಾರೆ. ಯಾವ ಯಾವ ಅಂಶ ಎಷ್ಟು ಪರ್ಸೆಂಟ್ ಇದೆ ಅನ್ನೋದರ ರಿಪೋರ್ಟ್ ಬಂದಿದೆ.‌ ಈ ಹಿನ್ನೆಲೆ, ನಾವು ಬೆಂಗಳೂರಿನ TTD ದೇವಾಲಯಕ್ಕೆ ಮನವಿ ನೀಡಿದ್ದೇವೆ. ಹಿಂದೆ ಇದ್ದಂತಹ ಆಡಳಿತ ಮಂಡಳಿಯವರು ಈ ಕೆಲಸವನ್ನು ಮಾಡಿದ್ದು, ಹಿಂದೂಗಳ ಬಾಯಿಗೆ ಮಣ್ಣು ಹಾಕಿದ್ದವರಿಗೆ ಶಿಕ್ಷೆ ಆಗ್ಬೇಕು. ಬ್ರಾಹ್ಮಣ, ಲಿಂಗಾಯತ, ಅಯ್ಯಂಗಾರ, ಅಯ್ಯರ್ಸ್, ಜೈನ, ಬೌದ್ಧರಿಗೆ ಈ ರೀತಿಯ ವಿಷ ಪೂರಿತ ಪ್ರಸಾದವನ್ನು ತಿನಿಸಿದ್ದಾರೆ. ಈ ವಿಷಯದ ಬಗ್ಗೆ FIR ಮಾಡುವುದರ ಮೂಲಕ ಅದನ್ನು SIT CBI ಗೆ ತನಿಖೆ ಮಾಡಲು ಕೊಡಬೇಕು.

ದೇವಸ್ಥಾನಳಲ್ಲಿ ಎಲ್ಲಾ ಕಡೆ ಲ್ಯಾಬ್ ಗಳನ್ನ ನಿರ್ಮಾಣ ಮಾಡ್ಬೇಕು. ಯಾರಿಗಾದ್ರೂ ಪ್ರಸಾದದಲ್ಲಿ ಕಲಬೆರಿಕೆ ಆಗಿದೆ ಅನ್ನೋ ಅನುಮಾನ ಬಂದರೆ, ಅಲ್ಲೇ ಪರೀಕ್ಷಿಸುವ ವ್ಯವಸ್ಥೆ ಮಾಡ್ಬೇಕು.‌ ಇನ್ನೂ 1 ವಾರದ ಒಳಗೆ ಇಲ್ಲಿ ಲ್ಯಾಬ್ ವ್ಯವಸ್ಥೆ ಮಾಡ್ಬೇಕು. ಇಲ್ಲವಾದ್ರೆ ಶ್ರೀರಾಮ ಸೇನೆ ವತಿಯಿಂದ ಧರಣಿ ಮಾಡ್ತೀವಿ. ಇಲ್ಲಿ ಯಾವುದೇ ರೀತಿಯ ಪ್ರಸಾದ ವಿನಿಯೋಗ ಆಗದಂತೆ ನೋಡಿಕೊಳ್ಳುತ್ತೇವೆ ಅಂತ ಶ್ರೀರಾಮ ಸೇನೆ ಯಿಂದ ಖಡಕ್ ಎಚ್ಚರಿಕೆ ನೀಡಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ