ಲಂಚದ ಅರೋಪ: ಬೆಂಗಳೂರು ನಗರದ ಮಾಜಿ ಜಿಲ್ಲಾಧಿಕಾರಿ ಮಂಜುನಾಥ್​ಗೆ ಜಾಮೀನು

ಉಪತಹಶೀಲ್ದಾರ್ ಪಿ.ಸಿ.ಮಹೇಶ್ ಮತ್ತು ನಾಗರಿಕ ಚೇತನ್ ಕುಮಾರ್ ಆರೋಪಿಗಳಾಗಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಜೆ.ಮಂಜುನಾಥ್ 3ನೇ ಆರೋಪಿಯಾಗಿದ್ದಾರೆ.

ಲಂಚದ ಅರೋಪ: ಬೆಂಗಳೂರು ನಗರದ ಮಾಜಿ ಜಿಲ್ಲಾಧಿಕಾರಿ ಮಂಜುನಾಥ್​ಗೆ ಜಾಮೀನು
ಬೆಂಗಳೂರು ನಗರದ ಮಾಜಿ ಜಿಲ್ಲಾಧಿಕಾರಿ ಜೆ ಮಂಜುನಾಥ್
Edited By:

Updated on: Sep 04, 2022 | 9:50 AM

ಬೆಂಗಳೂರು: ಲಂಚದ ಆರೋಪ ಹೊತ್ತಿರುವ ಬೆಂಗಳೂರು ನಗರ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಗೆ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ಶನಿವಾರ ಜಾಮೀನು (ಡಿಫಾಲ್ಟ್​ ಬೇಲ್) ಮಂಜೂರು ಮಾಡಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ಜಾಲತಾಣ ವರದಿ ಮಾಡಿದೆ. ಉಪತಹಶೀಲ್ದಾರ್ ಪಿ.ಸಿ.ಮಹೇಶ್ ಮತ್ತು ನಾಗರಿಕ ಚೇತನ್ ಕುಮಾರ್ ಆರೋಪಿಗಳಾಗಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಜೆ.ಮಂಜುನಾಥ್ 3ನೇ ಆರೋಪಿಯಾಗಿದ್ದಾರೆ (A3).

ನಿಯಮಗಳಿಗೆ ಅನುಗುಣವಾಗಿ 60 ದಿನಗಳ ಒಳಗೆ ತನಿಖಾ ಸಂಸ್ಥೆಯು ಅಂತಿಮ ವರದಿಯನ್ನು ಸಲ್ಲಿಸಬೇಕಿತ್ತು. ಆದರೆ ವರದಿ ಸಲ್ಲಿಸಲು ತನಿಖಾ ಸಂಸ್ಥೆಯು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯವು ಮಾಜಿ ಜಿಲ್ಲಾಧಿಕಾರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ಮೊದಲು ಮಂಜುನಾಥ್ ಅವರ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ಹಾಗೂ ಹೈಕೋರ್ಟ್​ ತಿರಸ್ಕರಿಸಿತ್ತು.

ಮಹೇಶ್ ಮತ್ತು ಚೇತನ್ ಅವರನ್ನು ಅಂದಿನ ಜಿಲ್ಲಾಧಿಕಾರಿ ಮಂಜುನಾಥ್ ಅವರ ಸೂಚನೆ ಮೇರೆಗೆ ₹ 5 ಲಕ್ಷ ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳ (Anti-Corruption Bureau – ACB) ಬಂಧಿಸಿತ್ತು. ಮಹೇಶ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಜಿಲ್ಲಾಧಿಕಾರಿ ಹೆಸರನ್ನು ಆರೋಪಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಹೈಕೋರ್ಟ್​ ಎಸಿಬಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಬೆಳವಣಿಗೆಯ ನಂತರ ಮಂಜುನಾಥ್ ಅವರನ್ನು ರಾಜ್ಯ ಸರ್ಕಾರವು ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆ ಮಾಡಿತ್ತು. ಕೊನೆಗೆ ಅವರನ್ನು ಜುಲೈ 4ರಂದು ಬಂಧಿಸಲಾಗಿತ್ತು.

ಮಂಜುನಾಥ್‌ ವಿರುದ್ಧ ಭೂವ್ಯಾಜ್ಯ ಸಂಬಂಧ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಕೆಳ ಹಂತದ ಅಧಿಕಾರಿಗಳ ಮೂಲಕ ಲಂಚ ಪಡೆದಿರುವ ಪ್ರಕರಣದಲ್ಲಿ ಅವರು ಮೂರನೇ ಆರೋಪಿಯಾಗಿದ್ದರು. ಈ ಮೊದಲು ಆಗಸ್ಟ್​ 3ರಂದು ಮಂಜುನಾಥ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.