ಫುಟ್​​ಪಾತ್​​ ಒತ್ತುವರಿ ತೆರವು ಕಾರ್ಯಾಚರಣೆ: ಜಂಟಿ ಹೋರಾಟ ಸಮಿತಿಯಿಂದ ಸರ್ಕಾರಕ್ಕೆ ಸಪ್ತ ಪ್ರಶ್ನೆ

Footpath Encroachment Drive: ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ವಿರೋಧಿಸಿ ಜಂಟಿ ಹೋರಾಟ ಸಮಿತಿಯು ಸರ್ಕಾರಕ್ಕೆ ಸಪ್ತ ಪ್ರಶ್ನೆಗಳನ್ನು ಕೇಳಿದ್ದು, ಕ್ರಮವನ್ನು ಖಂಡಿಸಿ ಜುಲೈ 8ರಂದು ನಗರಾದ್ಯಂತ ಬೀದಿ ಬದಿ ವ್ಯಾಪಾರ ಬಂದ್‌ಗೆ ಕರೆ ನೀಡಿದೆ. ಮೂರು ತಿಂಗಳ ಹಿಂದೆ ನಗರದ ಶಾಸಕರ ಸಭೆ ನಂತರ ನಮ್ಮನ್ನು ಎತ್ತಂಗಡಿ ಮಾಡುತ್ತಾರೆಂದು ಘೋಷಿಸಿದ್ದು ನಿಜ. ಆದರೆ ಇಂತಹ ಮೌಖಿಕ ಆದೇಶವನ್ನೇ, ನೋಟಿಸ್ ಎಂದು ಪರಿಗಣಿಸಬೇಕು ಎಂದು ಹೇಳುತ್ತೀರಲ್ಲ, ಇದು ಸರಿಯೇ? ಎಂದು ಸಮಿತಿ ಪ್ರಶ್ನಿಸಿದೆ.

ಫುಟ್​​ಪಾತ್​​ ಒತ್ತುವರಿ ತೆರವು ಕಾರ್ಯಾಚರಣೆ: ಜಂಟಿ ಹೋರಾಟ ಸಮಿತಿಯಿಂದ ಸರ್ಕಾರಕ್ಕೆ ಸಪ್ತ ಪ್ರಶ್ನೆ
ಫುಟ್​​ಪಾತ್​​ ಅತಿಕ್ರಮಣ ತೆರವು ಕಾರ್ಯಾಚರಣೆ
Image Credit source: Tv9 Kannada
Edited By:

Updated on: Jul 06, 2026 | 2:23 PM

ಮುಖ್ಯಾಂಶಗಳು

  • ಫುಟ್​​ಪಾತ್​​ ಒತ್ತುವರಿ ತೆರವು ಕಾರ್ಯಾಚರಣೆಗೆ ಭಾರಿ ವಿರೋಧ
  • ಬೀದಿ ಬದಿ ವ್ಯಾಪಾರಿಗಳಿಂದ ರಾಜ್ಯ ಸರ್ಕಾರಕ್ಕೆ ಸಪ್ತ ಪ್ರಶ್ನೆ
  • ಜುಲೈ 8ರಂದು ಬೀದಿ ಬದಿ ವ್ಯಾಪಾರ ಬಂದ್​​ಗೂ ನಿರ್ಧಾರ

ಬೆಂಗಳೂರು, ಜುಲೈ 06: ನಗರದಲ್ಲಿ ನಡೆಯುತ್ತಿರುವ ಫುಟ್​​ಪಾತ್​​ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಸಿಡಿದೆದ್ದಿರುವ ಬೀದಿ ಬದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿ ರಾಜ್ಯ ಸರ್ಕಾರಕ್ಕೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದೆ. ಪಾದಚಾರಿ ಮಾರ್ಗದ ಬಗ್ಗೆ ಹೇಗೆ ಕೋರ್ಟ್ ಆದೇಶ ಮಾಡಿದಿಯೋ, ಅದೇ ರೀತಿ ಬೀದಿ ಬದಿ ವ್ಯಾಪಾರಿಗಳ ಬಗ್ಗೆಯೂ ನ್ಯಾಯಾಲಯದ ಆರ್ಡರ್​​ ಆಗಿದೆ. ನಾವು ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಿದೆ.

ಅನ್ಯೋನ್ಯವಾಗಿದ್ದ ನಮ್ಮ ಮತ್ತು ಪಾದಚಾರಿಗಳ ನಡುವೆ ಈಗ ಸರ್ಕಾರವೇ ಒಡಕು ಮೂಡಿಸಿದೆ. ನ್ಯಾಯಾಲಯ ಹೇಳಿದೆ ಅಂತ ತೆರವು ಮಾಡ್ತಿದ್ದೀರಿ. ಆದರೆ ಅದೇ ನ್ಯಾಯಾಲಯ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು, ವೆಂಡಿಂಗ್ ಝೋನ್ ಗುರುತಿಸಬೇಕು ಎಂದು ಹೇಳಿದೆ. ಇದನೆಲ್ಲ ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಎತ್ತಂಗಡಿ ಮಾಡುತ್ತಿದ್ದಾರೆ. ನೋಟಿಸ್​​ ಕೂಡ ನೀಡದೆ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ ಎಂದು ಆರೋಪಿಸಿರುವ ಸಮಿತಿ, ಬೆಂಗಳೂರು ನಗಾರಭಿವೃದ್ದಿ ಸಚಿವ ಕೃಷ್ಣ ಭೈರೇಗೌಡರಿಗೆ ಸಪ್ತ ಪ್ರಶ್ನೆಗಳನ್ನು ಕೇಳಿದೆ.

ಇದನ್ನೂ ಓದಿ: ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್; ಮುಖ್ಯ ರಸ್ತೆಗಳಲ್ಲಿ ವ್ಯಾಪಾರ ಬೇಡ

ಜಂಟಿ ಹೋರಾಟ ಸಮಿತಿಯ ಸಪ್ತ ಪ್ರಶ್ನೆಗಳು

  1. ಏಕಾಏಕಿ ಎತ್ತಂಗಡಿಯಿಂದ ಬೀದಿ ವ್ಯಾಪಾರಿಗಳಿಗೆ ಆದ ನಷ್ಟಕ್ಕೆ ನೀವು ಪರಿಹಾರ ಕೊಡ್ತೀರಾ?
  2. ಮುಖ್ಯ ರಸ್ತೆಯಲ್ಲಿ ವ್ಯಾಪಾರ ಮಾಡಬೇಡಿ ಅಂತ ಆದೇಶಿಸದ್ದೀರಲ್ಲ, ಅದೇ ರಸ್ತೆಗಳಲ್ಲಿನ ಉಚಿತ ಕಾರ್ ಪಾರ್ಕಿಂಗ್ ಯಾಕೆ ನಿಷೇಧಿಸಿಲ್ಲ?
  3. ಮುಖ್ಯ ರಸ್ತೆ ಬಿಟ್ಟು ಅಕ್ಕ ಪಕ್ಕದ ರಸ್ತೆಗೆ ಹೋಗಿ ಅಂತೀರ. ಅಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗ ಇನ್ನೂ ಕಿರಿದಾಗಿದೆ, ಅದು ತೊಂದರೆ ಆಗೋದಿಲ್ವಾ? ಅಲ್ಲಿ ಯಾರೋ ಅಭ್ಯಂತರ ಮಾಡಿದರೆ ಆಗ ಏನು ಮಾಡೋದು ?
  4. ತಮಗೆ ಬೀದಿ ವ್ಯಾಪಾರಿಗಳ ಕಾನೂನು ಹಾಗೂ ಸಂಬಂಧ ಪಟ್ಟ ನ್ಯಾಯಾಲಯದ ತೀರ್ಪುಗಳ ಬಗ್ಗೆ ಗೊತ್ತಿಲ್ಲವೋ ಅಥವಾ ಗೊತ್ತಿದ್ದೂ ಉಲ್ಲಂಘನೆ ಮಾಡುತಿದ್ದಿರೋ?
  5. ತಾವು ಅಧಿಕಾರಕ್ಕೆ ಬಂದ ಮೇಲೆ ಒಮ್ಮೆಯೂ ನಾವು ಎದುರಿಸುತ್ತಿರುವ ಕಷ್ಟದ ಬಗ್ಗೆ ವಿಚಾರಿಸಿಲ್ಲ. ಬೀದಿ ವ್ಯಾಪಾರಿಗಳ ಕಾಯ್ದೆ ಅನುಷ್ಠಾನ ಆಗಿದಿಯ ಕೇಳಲಿಲ್ಲ. ಮೊದಲೇ ಹೆಜ್ಜೆಯೇ ಕಾನೂನು ಬಾಹಿರವಾಗಿ ನಮ್ಮನ್ನು ಎತ್ತಂಗಡಿ ಮಾಡಿದ್ದೀರಿ, ಏಕೆ?
  6. ಪಾದಚಾರಿಗಳು ಸಾವಿನಪ್ಪುತ್ತಿರುವುದು ನಿಜ. ಆದರೆ ಅದರಲ್ಲಿ ಒಬ್ಬರಾದರು ಬೀದಿ ವ್ಯಾಪಾರಿಗಳಿಂದ ಸತ್ತಿದ್ದಾರಾ? ರಸ್ತೆ ದಾಟುತ್ತಾ ಬಹಳ ಜನ ಸತ್ತಿದ್ದಾರೆ. ಅದರ ಬಗ್ಗೆ ಏನು ಮಾಡಿಲ್ಲವೇಕೆ?
  7. ಮೂರು ತಿಂಗಳ ಹಿಂದೆ ನಗರದ ಶಾಸಕರ ಸಭೆ ನಂತರ ನಮ್ಮನ್ನು ಎತ್ತಂಗಡಿ ಮಾಡುತ್ತಾರೆಂದು ಘೋಷಿಸಿದ್ದು ನಿಜ. ಆದರೆ ಇಂತಹ ಮೌಖಿಕ ಆದೇಶವನ್ನೇ, ನೋಟಿಸ್ ಎಂದು ಪರಿಗಣಿಸಬೇಕು ಎಂದು ಹೇಳುತ್ತೀರಲ್ಲ, ಇದು ಸರಿಯೇ?

ಜುಲೈ 8ರಂದು ಬೀದಿ ಬದಿ ವ್ಯಾಪಾರ ಬಂದ್

ಇನ್ನು ಸರ್ಕಾರದ ಕ್ರಮ ವಿರೋಧಿಸಿ ಜುಲೈ 8ರಂದು ಬೆಳ್ಳಗ್ಗೆ 6 ಗಂಟೆಯಿಂದಲೇ ಬೀದಿ ಬದಿ ವ್ಯಾಪಾರ ಬಂದ್ ಆಗಲಿದ್ದು, ಅಂದು ಹಣ್ಣು ಮತ್ತು ತರಕಾರಿಗಳು ಸಿಗೋದು ಡೌಟ್​​ ಎನ್ನಲಾಗಿದೆ. ರಸ್ತೆ ಬದಿಯ ಫಾಸ್ಟ್​​ಫುಡ್​​ ಅಂಗಡಿಗಳೂ ಕ್ಲೋಸ್​​ ಆಗಬಹುದು ಎನ್ನಲಾಗಿದ್ದು, ಬೀದಿ ಬದಿ ವ್ಯಾಪಾರ ಬಂದ್ ಮಾಡಲು ವ್ಯಾಪಾರಿಗಳಿಂದಲೂ ಸಮ್ಮತಿ ಸಿಕ್ಕಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 2:16 pm, Mon, 6 July 26

Follow Us