RV Devaraj Death: ಕಾಂಗ್ರೆಸ್​​ ಮಾಜಿ ಶಾಸಕ ಆರ್​ವಿ ದೇವರಾಜ್ ಹೃದಯಾಘಾತದಿಂದ ನಿಧನ

ಆರ್​ ವಿ ದೇವರಾಜ್​ ನಿಧನ: ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್​​ ಮಾಜಿ ಶಾಸಕ ಆರ್​​ವಿ ದೇವರಾಜ್​ ನಿಧನ ಹೊಂದಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಾಗ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಮೈಸೂರಿನಲ್ಲಿರುವ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ. ವೈದ್ಯರು ಕುಟುಂಬಸ್ಥರಿಗೆ ಆರ್​​ವಿ ದೇವರಾಜ್ ಮೃತದೇಹವನ್ನು ಹಸ್ತಾಂತರಿಸಿದ್ದಾರೆ.

RV Devaraj Death: ಕಾಂಗ್ರೆಸ್​​ ಮಾಜಿ ಶಾಸಕ ಆರ್​ವಿ ದೇವರಾಜ್ ಹೃದಯಾಘಾತದಿಂದ ನಿಧನ
ಆರ್​ವಿ ದೇವರಾಜ್
Updated By: Digi Tech Desk

Updated on: Dec 02, 2025 | 9:53 AM

ಬೆಂಗಳೂರು, ಡಿಸೆಂಬರ್​ 01: ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್​​ ಮಾಜಿ ಶಾಸಕ ಆರ್​. ವಿ. ದೇವರಾಜ್ (RV Devaraj) ಹೃದಯಾಘಾತದಿಂದ (heart attack) ಸೋಮವಾರ ನಿಧನ ಹೊಂದಿದ್ದಾರೆ. ಡಿ.3ರಂದು ಜನ್ಮದಿನ ಹಿನ್ನೆಲೆ ಚಾಮುಂಡಿಬೆಟ್ಟಕ್ಕೆ ತೆರಳಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಮೈಸೂರಿನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ. ಸದ್ಯ ವೈದ್ಯರು ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

ಆರ್​ವಿ ದೇವರಾಜ್​ ರಾಜಕೀಯ ಜೀವನ

1957ರ ಡಿಸೆಂಬರ್ 3ರಂದು ಆರ್​.ವಿ.ದೇವರಾಜ್ ಜನಿಸಿದ್ದರು. ಶಿಕ್ಷಣದ ಬಳಿಕ 1989-99ರಲ್ಲಿ ಬೆಂಗಳೂರಿನ ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದರು. 2000ರಿಂದ ಅಕ್ಟೋಬರ್ 2007ರವರೆಗೆ ಕೆಎಸ್​​ಆರ್​​​ಟಿಸಿ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಎಐಸಿಸಿ ಸದಸ್ಯರಾಗಿದ್ದರು.

2008ರಲ್ಲಿ ಕ್ಷೇತ್ರ ಮರುವಿಂಗಡನೆಯಾದಾಗ ಎಸ್​ಎಂ ಕೃಷ್ಣ ಅವರಿಗೆ ಬೆಂಗಳೂರಿನಲ್ಲಿ ಸ್ಪರ್ಧಿಸಲು ಕ್ಷೇತ್ರ ಬಿಟ್ಟುಕೊಡುತ್ತಾರೆ. ಚಾಮರಾಜಪೇಟೆ ಕ್ಷೇತ್ರ ಆ ಸಮಯದಲ್ಲಿ ಕಾಂಗ್ರೆಸ್​ಗೆ ಪೂರಕವಾಗಿತ್ತು. ಎಸ್​. ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಆರ್​.ವಿ. ದೇವರಾಜ್ ಆಪ್ತರಾಗಿದ್ದರು. ಬಳಿಕ ಚಿಕ್ಕಪೇಟೆ ಕ್ಷೇತ್ರ ಚುನಾವಣೆಗೆ ಸ್ಪರ್ಧಿಸಿದ್ದರು.

ಇದನ್ನೂ ಓದಿ: ಕನಕನ ಕಿಂಡಿ ಸ್ವರ್ಣ ಕವಚ ಉದ್ಘಾಟನೆ ವಿವಾದ: ಗೊಂದಲಗಳಿಗೆ ಪ್ರಮೋದ್​​ ಮಧ್ವರಾಜ್​​ ತೆರೆ

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಚಾಮರಾಜಪೇಟೆ ಕ್ಷೇತ್ರದ ಕ್ಷೇತ್ರ ಪುನರ್ವಿಂಗಡಣೆ ನಂತರ ಚಿಕ್ಕಪೇಟೆಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಬಳಿಕ 2016ರಲ್ಲಿ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದರು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಸಂತಾಪ​​

ಮಾಜಿ ಶಾಸಕ ಆರ್​.ವಿ. ದೇವರಾಜ್ ಅವರ ಅಗಲಿಕೆ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ಈ ಕುರಿತಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಎಕ್ಸ್​ನಲ್ಲಿ (Formerly Twitter) ​ಪೋಸ್ಟ್​ ಮಾಡಿದ್ದು, ಚಿಕ್ಕಪೇಟೆ ಮಾಜಿ ಶಾಸಕ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶ್ರೀ ಆರ್.ವಿ. ದೇವರಾಜ್ ಅವರ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ರಾಜಕೀಯ ಮತ್ತು ಸಮಾಜಸೇವೆ ಮೂಲಕ ಚಿಕ್ಕಪೇಟೆ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಅವರ ಅಗಲಿಕೆಯಿಂದಾಗಿ ರಾಜ್ಯ ರಾಜಕಾರಣ ಮತ್ತು ಚಿಕ್ಕಪೇಟೆ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟಾಗಿದೆ. ದೇವರಾಜ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಸಂತಾಪ ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:37 pm, Mon, 1 December 25