ಬೌರಿಂಗ್ ಆಸ್ಪತ್ರೆ ದುರಂತ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್: ಸರ್ಕಾರಿ ಆಸ್ಪತ್ರೆ ಕಟ್ಟಡಗಳ ಸ್ಥಿತಿಗತಿ ಪರಿಶೀಲನೆಗೆ ಆದೇಶ
ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತ ದುರಂತದಲ್ಲಿ 7 ಮಂದಿ ಪ್ರಾಣ ಕಳೆದುಕೊಂಡ ಬಳಿಕ, ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಸಚಿವ ದಿನೇಶ್ ಗುಂಡೂರಾವ್ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಕಟ್ಟಡ ಮತ್ತು ಕಾಂಪೌಂಡ್ ಸುರಕ್ಷತೆಯನ್ನು 15 ದಿನಗಳೊಳಗೆ ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಮುಂಬರುವ ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು, ಮೇ 06: ನಗರದಲ್ಲಿ ಇತ್ತೀಚೆಗೆ ನಡೆದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿತದ (Bowring Hospital Tragedy) ದುರಂತದಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯ ಬಳಿಕ ಎಚ್ಚೆತ್ತಿರುವ ಆರೋಗ್ಯ ಇಲಾಖೆ (Health Department), ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳ ಸುರಕ್ಷತೆಯನ್ನು ಖಾತ್ರಿಪಡಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳು ಮತ್ತು ಕಾಂಪೌಂಡ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ವರದಿ ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮುಖ್ಯಾಂಶಗಳು
- ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಕಾಂಪೌಂಡ್ ಮತ್ತು ಕಟ್ಟಡಗಳ ಸ್ಥಿತಿಗತಿಯನ್ನು 15 ದಿನಗಳೊಳಗೆ ಪರಿಶೀಲಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಗಡುವು.
- ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ತಪಾಸಣೆಗೆ ಅಧಿಕಾರಿಗಳಿಗೆ ಆದೇಶ.
- ಶಿಥಿಲಗೊಂಡಿರುವ ಕಟ್ಟಡಗಳನ್ನು ಗುರುತಿಸಿ, ರೋಗಿಗಳನ್ನು ಕೂಡಲೇ ಸುರಕ್ಷಿತ ವಾರ್ಡ್ಗಳಿಗೆ ಸ್ಥಳಾಂತರಿಸಲು ಹಾಗೂ ಅಗತ್ಯವಿದ್ದಲ್ಲಿ ಕಟ್ಟಡ ತೆರವು ಅಥವಾ ದುರಸ್ತಿ ಮಾಡಲು ನಿರ್ದೇಶನ.
ಕಳೆದ ವಾರವಷ್ಟೇ ನಗರದಲ್ಲಿ ಸುರಿದ ಅಕಾಲಿಕ ಮಳೆಗೆ ಇಡೀ ಬೆಂಗಳೂರೇ ತತ್ತರಿಸಿ ಹೋಗಿತ್ತು. ಈ ವೇಳೆ ಶಿಥಿಲಾವಸ್ಥೆಯಲ್ಲಿದ್ದ ಬೌರಿಂಗ್ ಆಸ್ಪತ್ರೆಯ ಕಾಂಪೌಡ್ ಬಿದ್ದು, ಏಳು ಜನರ ದುರ್ಮರಣ ಸಂಭವಿಸಿತ್ತು. ಈ ಪ್ರಕರಣ ಬೆನ್ನಲ್ಲೇ ಇದೀಗ ಸರ್ಕಾರ ಅಲರ್ಟ್ ಆಗಿದೆ.
ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಸ್ಥಳ ಪರಿಶೀಲನೆ ಬಳಿಕ ಲೋಕಾಯುಕ್ತ ಶಾಕಿಂಗ್ ಹೇಳಿಕೆ
ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಹೊಸ ಟಾಸ್ಕ್ ನೀಡಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದ್ದಂತೆ ಸರ್ಕಾರಿ ಆಸ್ಪತ್ರೆಗಳ ಕೌಂಪೌಡ್ ಹಾಗೂ ಕಟ್ಟಡಗಳನ್ನು ಸಂಪೂರ್ಣವಾಗಿ ಪರಿಶೀಲನೆಗೆ ಸೂಚಿಸಿದ್ದಾರೆ. ಸರಕಾರಿ ಆಸ್ಪತ್ರೆಗಳ ಕಟ್ಟಡ, ಕಾಂಪೌಂಡ್ಗಳನ್ನ ಪರಿಶೀಲಿಸಿ, ವರದಿ ನೀಡುವಂತೆ ಅಧಿಕಾರಿಗಳಿಗೆ ಟಾಸ್ಕ್ ಕೊಟ್ಟಿದ್ದು, ಆಸ್ಪತ್ರೆಯ ಕಟ್ಟಡದ ಫುಟ್ಪಾತ್ಗಳಲ್ಲಿ ಬೀದಿ ಬದಿ ವ್ಯಾಪರಕ್ಕೂ ಕಡಿವಾಣ ಹಾಕಲು ಸೂಚನೆ ನೀಡಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಬೀಳುವ ಹಂತದ ಕಟ್ಟಡಗಳು ಅಥವಾ ಕಾಂಪೌಂಡ್ಗಳಿದ್ದರೆ ಕೂಡಲೇ ತೆರವು ಮಾಡುವಂತೆ ಸೂಚನೆ ನೀಡಲಾಗಿದೆ.
15 ದಿನದೊಳಗೆ ವರದಿ ನೀಡುವಂತೆ ಸೂಚನೆ
ರಾಜ್ಯದ ಅಡಿಯಲ್ಲಿರುವ ಅನೇಕ ಸರ್ಕಾರಿ ಆಸ್ಪತ್ರೆಗಳು 20 ರಿಂದ 30 ವರ್ಷಗಳಷ್ಟು ಹಳೆಯದಾಗಿವೆ. ಮುಂಬರುವ ಮಳೆಗಾಲಕ್ಕೂ ಮುನ್ನ ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಡಿಹೆಚ್ಒ, ಟಿಹೆಚ್ಒ ಮತ್ತು ತಾಲೂಕು ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಒಂದು ವೇಳೆ ಯಾವುದೇ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದರೆ, ಕೂಡಲೇ ನಿಯಮಾನುಸಾರ ದುರಸ್ತಿ ಕಾರ್ಯ ಅಥವಾ ಕಟ್ಟಡ ತೆರವು ಪ್ರಕ್ರಿಯೆಯನ್ನು ಕೈಗೊಂಡು, ಈ ಬಗ್ಗೆ ವರದಿಯನ್ನು 15 ದಿನದೊಳಗೆ ಇಂಜಿನಿಯರಿಂಗ್ ವಿಭಾಗಕ್ಕೆ ಸಲ್ಲಿಸಬೇಕೆಂದು ಸಚಿವರು ಸೂಚಿಸಿದ್ದಾರೆ. ಇದಲ್ಲದೆ, ಆಸ್ಪತ್ರೆಯ ಆವರಣದ ಫುಟ್ಪಾತ್ಗಳಲ್ಲಿ ನಡೆಯುವ ಬೀದಿಬದಿ ವ್ಯಾಪಾರಕ್ಕೂ ಕಡಿವಾಣ ಹಾಕಲು ನಿರ್ದೇಶನ ನೀಡಲಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ಎಚ್ಚರ ವಹಿಸಲು ಇಲಾಖೆ ಸೂಚಿಸಿದ್ದು, ಈಗಾಗಲೇ ಮಳೆಯಿಂದಲೇ ಅನೇಕ ಆಸ್ಪತ್ರೆಗಳು ಹದಗೆಟ್ಟಿದ್ದು, ಅವುಗಳನ್ನ ಸರಿಪಡಿಸಲು ಈ ಬಗ್ಗೆ ವರದಿ ನೀಡುವಂತೆ ಆರೋಗ್ಯ ಹೇಳಿದೆ.
ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಇಬ್ಬರು ಅಧಿಕಾರಿಗಳ ತಲೆಂಡ
ಬೌರಿಂಗ್ ಆಸ್ಪತ್ರೆ ದುರಂತದ ನಂತರ ಸರ್ಕಾರ ಕೈಗೊಂಡಿರುವ ಈ ನಿರ್ಧಾರ ಅತ್ಯಂತ ಮಹತ್ವದ್ದಾಗಿದೆ. ಮುಂಬರುವ ಮಳೆಗಾಲದಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸದಂತೆ ತಡೆಯಲು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸಚಿವರು ನೀಡಿರುವ ಈ ಟಾಸ್ಕ್ ಅನ್ನು ಎಷ್ಟು ಶೀಘ್ರವಾಗಿ ಮತ್ತು ಸಮರ್ಥವಾಗಿ ಪೂರೈಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



