AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mount Carmel College: ಕಾಲೇಜು ಈವೆಂಟ್ ಆಯೋಜನೆಯಲ್ಲಿ ಅವ್ಯವಸ್ಥೆ, ಮೌಂಟ್ ಕಾರ್ಮೆಲ್ ವಿರುದ್ಧ ಪೊಲೀಸ್ ಕೇಸ್

ಈವೆಂಟ್​ನಲ್ಲಿ ಸುಮಾರು 10 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆ ಕೆಲವರು ಕಾಲೇಜು ವಿದ್ಯಾರ್ಥಿಗಳನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಲು ಯತ್ನಿಸಿದ್ದರು ಎಂದು ದೂರಲಾಗಿದೆ.

Mount Carmel College: ಕಾಲೇಜು ಈವೆಂಟ್ ಆಯೋಜನೆಯಲ್ಲಿ ಅವ್ಯವಸ್ಥೆ, ಮೌಂಟ್ ಕಾರ್ಮೆಲ್ ವಿರುದ್ಧ ಪೊಲೀಸ್ ಕೇಸ್
ಮೌಂಟ್ ಕಾರ್ಮೆಲ್ ಕಾಲೇಜು (ಸಂಗ್ರಹ ಚಿತ್ರ)
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Aug 19, 2022 | 8:41 AM

Share

ಬೆಂಗಳೂರು: ನಗರದ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾಲೇಜಿನ (Mount Carmel College) ಆಡಳಿತ ಮಂಡಳಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ (Bengaluru Police) ದೂರು ದಾಖಲಾಗಿದೆ. ಈ ಸಂಬಂಧ ಪೊಲೀಸರು ಎಫ್​ಐಆರ್ ಸಹ ಮಾಡಿದ್ದಾರೆ. ಅನುಮತಿ‌ ಇಲ್ಲದೆ ಸಾವಿರಾರು ಮಂದಿಯನ್ನು ಸೇರಿಸಿ ಕಾಲೇಜು ಈವೆಂಟ್ ಆಯೋಜಿಸಿದ್ದ ಆರೋಪವನ್ನು ಆಡಳಿತ ಮಂಡಳಿ ವಿರುದ್ಧ ಹೊರಿಸಲಾಗಿದೆ. ಈವೆಂಟ್​ನಲ್ಲಿ ಸುಮಾರು 10 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈವೆಂಟ್​ಗೆ ಸೇರಿದ್ದ ಕೆಲವರು ಕಾಲೇಜು ವಿದ್ಯಾರ್ಥಿಗಳನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಲು ಯತ್ನಿಸಿದ್ದರು.

ಮೌಂಟ್ ಕಾರ್ಮಲ್ ಕಾಲೇಜಿನಿಂದ ನಡೆದಿದ್ದ ಈವೆಂಟ್​ಗಾಗಿ ಪ್ರತಿ ವಿದ್ಯಾರ್ಥಿಗೆ 20 ಪಾಸ್​ಗಳನ್ನು ನೀಡಲಾಗಿತ್ತು. ಈ ಪಾಸ್​ಗಳನ್ನು ಕೆಲ ವಿದ್ಯಾರ್ಥಿಗಳು ಮಾರಿಕೊಂಡಿದ್ದರು. ಆಗಸ್ಟ್ 15ರ ಸ್ವತಂತ್ರ ಭಾರತದ ಅಮೃತ ಮಹೋತ್ಸವದ ದಿನದಂದೇ ಮೌಂಟ್ ಕಾರ್ಮೆಲ್ ಕಾಲೇಜು ಈವೆಂಟ್ ಆಯೋಜಿಸಿತ್ತು. ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಇತರ ಕಾಲೇಜುಗಳ ವಿದ್ಯಾರ್ಥಿಗಳೂ ಈವೆಂಟ್​ಗೆ ಬಂದಿದ್ದರು.

ಪೂರ್ವಾನುಮತಿ ಪಡೆಯದೇ ಈವೆಂಟ್ ಆಯೋಜಿಸಿದ್ದರಿಂದ ಏಕಾಏಕಿ ಜನಸಂದಣಿ ಮತ್ತು ವಾಹನದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಗುಂಪು ಚದುರಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಠಾಣೆ ಸಬ್​ಇನ್​ಸ್ಪೆಕ್ಟರ್ ಸಚಿನ್ ನೀಡಿದ್ದ ದೂರಿನ ಅನ್ವಯ ಎಫ್​ಐಆರ್ ದಾಖಲು ಮಾಡಲಾಗಿದೆ.

ವಸಂತನಗರದ ಅರಮನೆ ರಸ್ತೆಯಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆದ ಈವೆಂಟ್​ನಿಂದ ಜನಜೀವನಕ್ಕೆ ತೊಂದರೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರು ದಾಖಲಿಸಿರುವ ಎಫ್​ಐಆರ್​ನಲ್ಲಿ ಸಾರ್ವಜನಿಕರ ಬದುಕಿಗೆ ತೊಂದರೆ ಉಂಟು ಮಾಡುವುದು, ಅಪಾಯ ತಂದೊಡ್ಡುವುದು, ಗಾಯಗಳಾಗಲು ಕಾರಣವಾಗುವುದು, ಹುಚ್ಚಾಟದ ವರ್ತನೆ ಮತ್ತು ಕಾನೂನು ಬಾಹಿರವಾಗಿ ಸಭೆ ಸೇರಿದ್ದಕ್ಕೆ ಸಂಬಂಧಿಸಿ ಐಪಿಸಿ ಸೆಕ್ಷನ್​ಗಳನ್ನು ಉಲ್ಲೇಖಿಸಲಾಗಿದೆ.

ಕಾಲೇಜಿನ 70ನೇ ವಾರ್ಷಿಕೋತ್ಸವ ಮತ್ತು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕಾಲೇಜು ಒಟ್ಟಿಗೆ ಆಯೋಜಿಸಿತ್ತು. ಆಗಸ್ಟ್ 15ರಂದು ಬೆಳಿಗ್ಗೆ 9ರಿಂದ ಸಂಜೆ 3ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಬೇಕಿತ್ತು. ಕಾಲೇಜಿನ ಎಲ್ಲ 8,000 ಪದವಿ ಮತ್ತು 3,000 ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯಗೊಳಿಸಲಾಗಿತ್ತು. ವಿದ್ಯಾರ್ಥಿಗಳ ಪೋಷಕರು ಮತ್ತು ಸಂಬಂಧಿಕರು ಮತ್ತು ಸಾರ್ವಜನಿಕರಿಗೂ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ಜನದಟ್ಟಣೆ ಏಕಾಏಕಿ ಹೆಚ್ಚಾಗಿದ್ದರಿಂದ ನಿಯಂತ್ರಿಸಲು ಕಾಲೇಜಿನ ಸಿಬ್ಬಂದಿ ಪರದಾಡಬೇಕಾಯಿತು. ನೂರಾರು ಮಂದಿ ಪ್ರವೇಶ ದ್ವಾರದಲ್ಲಿ ಇರುವಾಗಲೇ ಒಳಗಿನ ಸೀಟುಗಳು ಭರ್ತಿಯಾಗಿ, ನಿಲ್ಲಲೂ ಅವಕಾಶವಿಲ್ಲದ ಪರಿಸ್ಥಿತಿ ನಿರ್ಮಾಣವಾಯಿತು. ಈ ಹಂತದಲ್ಲಿ ಕಾಲೇಜು ಸಿಬ್ಬಂದಿ ಪ್ರವೇಶವನ್ನು ನಿರ್ಬಂಧಿಸಿದರು. ಸಿಟ್ಟಿಗೆದ್ದ ಜನರು ಕೂಗಾಡಿದರು, ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಯಿತು.

ಪರಿಸ್ಥಿತಿ ಕೈಮೀರಿದಾಗ, ಮಧ್ಯಾಹ್ನ 12.30ರ ಹೊತ್ತಿಗೆ ಕಾರ್ಯಕ್ರಮವನ್ನು ನಿಲ್ಲಿಸಲು ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿತು. ಒಳಗಿದ್ದವರು ಹೊರಗೆ ಬಂದಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಒಳಗೆ ನುಗ್ಗಿದ್ದ ಒಂದಿಷ್ಟು ಜನರು ಸಿಗರೇಟ್ ಸೇದುತ್ತಾ, ಗಲಾಟೆ ಮಾಡುತ್ತಿದ್ದರು. ಅನಿವಾರ್ಯ ಪರಿಸ್ಥಿತಿಯಲ್ಲಿ ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ಕಾಲೇಜಿನಿಂದ ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಕಾಲೇಜು ಆಡಳಿತ ಮಂಡಳಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಮುಂದಿನ ದಿನಗಳಲ್ಲಿ ಇಂಥ ಪರಿಸ್ಥಿತಿ ಉದ್ಭವಿಸಬಾರದು ಎಂದು ಎಚ್ಚರಿಕೆ ನೀಡಲೆಂದು ಪ್ರಕರಣ ದಾಖಲಿಸಿದ್ದೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸಿದರು.

‘ಕಾರ್ಯಕ್ರಮದಲ್ಲಿ ಯಾವುದೇ ಅನಾಹುತಕಾರಿ ಘಟನೆ ನಡೆದಿಲ್ಲ. ನಮ್ಮ ವಿದ್ಯಾರ್ಥಿನಿಯರು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಇದು ಯಶಸ್ವಿ ಕಾರ್ಯಕ್ರಮ’ ಎಂದು ಕಾಲೇಜು ಕ್ಷೇಮಾಭಿವೃದ್ಧಿ ಅಧಿಕಾರಿ ಡಾ ಪವಿತ್ರಾ ರಾಜ್ ಹೇಳಿದರು.

Published On - 8:41 am, Fri, 19 August 22