ನನ್ನ ಸಾಮರ್ಥ್ಯದ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ; ಕುಮಾರಸ್ವಾಮಿಗೆ ಗೃಹ ಸಚಿವ ಪರಮೇಶ್ವರ್ ತಿರುಗೇಟು

ಗುಪ್ತಚರ ವಿಭಾಗಕ್ಕೆ ಹೇಮಂತ್ ನಿಂಬಾಳ್ಕರ್ ವರ್ಗಾವಣೆ ವಿಚಾರವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದು, ಅದು ಮುಖ್ಯಮಂತ್ರಿಗಳ ತೀರ್ಮಾನ. ಯಾರ ಮೇಲೆ ಕಾನ್ಫಿಡೆಂಟ್ ಇದೆಯೋ ಅವರನ್ನು ನೇಮಕ ಮಾಡಿರುತ್ತಾರೆ. ಮುಖ್ಯಮಂತ್ರಿಗಳ ಬಳಿಯೇ ಗುಪ್ತಚರ ಇಲಾಖೆ ಇದೆ. ಆ ಬಗ್ಗೆ ನನ್ನ ಬಳಿಯೂ ಚರ್ಚೆ ಮಾಡಿದ್ದರು ಎಂದು ಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ನನ್ನ ಸಾಮರ್ಥ್ಯದ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ; ಕುಮಾರಸ್ವಾಮಿಗೆ ಗೃಹ ಸಚಿವ ಪರಮೇಶ್ವರ್ ತಿರುಗೇಟು
ಗೃಹ ಸಚಿವ ಡಾ. ಜಿ. ಪರಮೇಶ್ವರ್
Follow us
| Updated By: ಸುಷ್ಮಾ ಚಕ್ರೆ

Updated on:Sep 13, 2024 | 8:25 PM

ಬೆಂಗಳೂರು: ಗೃಹ ಸಚಿವ ಆಗಲು ನಾನು ಸಮರ್ಥನಿಲ್ಲ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಅದು ನನಗೆ ಬಹಳ ಸಂತೋಷ ತಂದಿದೆ. ಅವರು ಹೇಳಿದ್ದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕು. ನಾನು ಮೂರ್ನಾಲ್ಕು ಬಾರಿ ಗೃಹ ಸಚಿವನಾಗಿದ್ದೇನೆ. ಸಮರ್ಥವಾಗಿ ನಾನು ಎಲ್ಲವನ್ನೂ ನಿಭಾಯಿಸಿದ್ದೇನೆ. ನನ್ನ ಸಾಮರ್ಥ್ಯ ರಾಜ್ಯದ ಜನರಿಗೆ ಗೊತ್ತಿದೆ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಹೇಳಿದ್ದಾರೆ.

ಗೃಹಸಚಿವ ಡಾ.ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ವಿಧಾನಸೌಧದಲ್ಲಿ ಸಂಪುಟ ಉಪಸಮಿತಿ ಸಭೆ ನಡೆಸಲಾಗಿದೆ. ಬಿಜೆಪಿ ಕಾಲದ ಹಗರಣಗಳ ತನಿಖೆಗೆ ಸಮಿತಿ ರಚಿಸಲಾಗಿದೆ. ನಾವು ಇಂದು ಮೊದಲ ಸಭೆ ಮಾಡಿದ್ದೇವೆ. ಮೂರ್ನಾಲ್ಕು ಕೇಸ್​ಗಳನ್ನು ತನಿಖೆಗೆ ಕೊಡುವ ಬಗ್ಗೆ ನಿರ್ಧಾರ ಮಾಡಿದ್ದೇವೆ. 2 ತಿಂಗಳೊಳಗೆ ವರದಿ ಕೊಡಿ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅದರಂತೆ ನಾವು ಕೊಡುತ್ತೇವೆ. ಸುಮಾರು ವರ್ಷಗಳ ಪ್ರಕರಣಗಳು ಬಾಕಿ ಇವೆ. ನಮ್ಮ ಸರ್ಕಾರದ ಪ್ರಕರಣಗಳೂ ಇವೆ. ಎಲ್ಲವನ್ನೂ ತನಿಖೆ ಮಾಡಬೇಕಿದೆ ಎಂದು ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಇದನ್ನೂ ಓದಿ: ನಾಗಮಂಗಲ ಗಲಭೆ: ಪರಮೇಶ್ವರ್ ಹೇಳಿಕೆಯಿಂದ ಕೆರಳಿದ ಕುಮಾರಸ್ವಾಮಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಈ ಸಭೆಯಲ್ಲಿ ಬಿಜೆಪಿ ಅವಧಿಯ ಹಗರಣಗಳ ತನಿಖೆ ಕುರಿತು ಚರ್ಚೆ ನಡೆಸಲಾಗಿದೆ. ಯಾವ್ಯಾವ ಪ್ರಕರಣಗಳ ತನಿಖೆಯಾಗಬೇಕು? ಯಾವ ಪ್ರಕರಣಗಳು ತನಿಖೆಯಾಗಿದೆ? ಯಾವ ಪ್ರಕರಣಗಳ ತನಿಖಾ ವರದಿ ಸಲ್ಲಿಕೆಯಾಗಿದೆ? ಉಳಿದ ಯಾವ ಪ್ರಕರಣಗಳ ವರದಿ ಸಲ್ಲಿಕೆಯಾಗಬೇಕು? ಮಧ್ಯಂತರ ವರದಿ ಸಲ್ಲಿಕೆಯಾದ ಪ್ರಕರಣ ಯಾವುವು? ಎಂಬುದರ ಕುರಿತು ಸಮಿತಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ.

ಈ ಸಭೆಯಲ್ಲಿ ಪಿಎಸ್​ಐ, ಉಪನ್ಯಾಸಕರ ನೇಮಕಾತಿ ಹಗರಣ, ಬಿಟ್ ಕಾಯಿನ್ ಹಗರಣ, ಶೇ. 40ರಷ್ಟು ಕಮಿಷನ್ ಹಗರಣ, ಅಂಬೇಡ್ಕರ್, ಅರಸು ಅಭಿವೃದ್ಧಿ ನಿಗಮದ ಹಗರಣ, ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ ಇಲಾಖೆ ಹಗರಣ, ಕೋವಿಡ್ ಹಗರಣ ಸೇರಿ ಹಲವು ಹಗರಣಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ಇದನ್ನೂ ಓದಿ: Nandini Milk Price Hike: ನಂದಿನಿ ಹಾಲಿನ ದರ ಹೆಚ್ಚಳ ಮಾಡುತ್ತೇವೆ: ಮಾಗಡಿಯಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

ಹಾಲಿನ ದರ ಏರಿಕೆ ವಿಚಾರವಾಗಿ ಇದು ನನ್ನ ಇಲಾಖೆಗೆ ಬರುವುದಿಲ್ಲ. ಅದು ಪಶುಸಂಗೋಪನೆ ಇಲಾಖೆಗೆ ಬರುತ್ತದೆ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಕೆಪಿಎಸ್​​ಸಿ ಗ್ರೂಪ್ ಬಿ ಪರೀಕ್ಷೆ ಮುಂದೂಡಿಕೆ ವಿಚಾರವಾಗಿ ನನಗೆ ಮಾಹಿತಿಯಿಲ್ಲ ಎಂದು ವಿಧಾನಸೌಧದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ನಾವೇನೂ‌ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಮುಡಾ ಪ್ರಕರಣದ ಮುಂಚೆಯೇ ಹಳೇ ಕೇಸ್‌ಗಳ ತನಿಖೆ ನಡೆಯುತ್ತಿದೆ. ಅವುಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗ್ತೇವೆ, ಯಾವುದನ್ನೂ ಬಿಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಈ ಸಭೆಯಲ್ಲಿ ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ, ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಭಾಗಿಯಾಗಿದ್ದರು.

ವರದಿ: ಈರಣ್ಣ ಬಸವ

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:22 pm, Fri, 13 September 24