ಶೀಲ ಶಂಕಿಸಿ ಪತ್ನಿ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ: ಕಿಂಚಿತ್ತು ಪಶ್ಚಾತ್ತಾಪವಿಲ್ಲದೇ ಪತಿ ಬಿಚ್ಚಿಟ್ಟ ಮರ್ಡರ್ ಕಹಾನಿ
ಅವರಿಬ್ಬರಿಗೂ ಎರಡನೇ ಮದುವೆ. ದಾಂಪತ್ಯ ಕಲಹದಿಂದ ಮೊದಲ ಮದುವೆ ಮುರಿದು ಬಿದ್ದು, ದೂರುವಾಗಿದ್ದವರ ಬಾಳಿಗೆ ಮತ್ತೊಂದು ಮದುವೆ ಅವಕಾಶ ಮಾಡಿಕೊಟ್ಟಿತ್ತು. ಜೊತೆಗೂಡಿ ಹೊಸ ಬದುಕುಕಟ್ಟಿಕೊಳ್ಳಬೇಕಾದ ದಂಪತಿ ನಡುವೆ ಶುರುವಾದ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯವಾಗಿದೆ. ಪತ್ನಿ ತನ್ನ ಪತಿಯೇ ಕೊಂದಿದ್ದೇಕೆ..? ಕೊಲೆಗೆ ಕಾರಣವೇನು ಅನ್ನೋದರ ಕುರಿತ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರು, (ನವೆಂಬರ್ 07): ಶೀಲ ಶಂಕಿಸಿ ಪತಿಯೇ (Husband) ಪತ್ನಿಯನ್ನ (Wife) ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಅಮೃತಹಳ್ಳಿಯ ಗಂಗಮ್ಮ ಲೇಔಟ್ನಲ್ಲಿ ನಡೆದಿದೆ. ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಂಜಲಿ (20) ಮೃತ ಮಹಿಳೆಯಾಗಿದ್ದು, ಟ್ರಾವೆಲ್ಸ್ ಕಚೇರಿಯಲ್ಲಿ ಡ್ರೈವರ್ ಆಗಿದ್ದ ಆರೋಪಿ ಪತಿ ರವಿಚಂದ್ರನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ರವಿಚಂದ್ರ ಕಿಂಚಿತ್ತು ಪಶ್ಚಾತ್ತಾಪವಿಲ್ಲದೇ ಪೊಲೀಸರ ಮುಂದೆ ಮರ್ಡರ್ ಕಹಾನಿ ಬಿಚ್ಚಿಟ್ಟಿದ್ದಾನೆ.
ಕೊಲೆಯಾದ ಅಂಜಲಿ ಮೂಲತಃ ತುಮಕೂರು ಜಿಲ್ಲೆ ಪಾವಗಡದಳು. ಈಗಾಗಲೇ ಒಂದು ಮದುವೆಯಾಗಿ ಮಗು ಇದ್ದು ದಾಂಪತ್ಯ ಕಲಹದಿಂದ ಮೊದಲ ಪತಿಯಿಂದ ದೂರುವಾಗಿದ್ದಳು. ಈ ನಡುವೆ ಯಾದಗಿರಿಯ ಸುರಪುರ ಮೂಲದ ರವಿಚಂದ್ರ ಎಂಬಾತನ ಮೇಲೆ ಲವ್ ಶುರುವಾಗಿತ್ತು.ಆತನಿಗೂ ಮದಿವೆಯಾಗಿ ಹೆಂಡ್ತಿ ಬಿಟ್ಟಿದ್ದ.ಆ ಬಳಿಕ ಇಬ್ಬರೂ ಮದುವೆಯಾಗಿದ್ದು,ಅಮೃತಹಳ್ಳಿಯ ಗಂಗಮ್ಮ ಲೇಔಟ್ ಮನೆಗೆ ಕಳೆದ ಎರಡು ತಿಂಗಳ ಹಿಂದೆ ಬಾಡಿಗೆಗೆ ಬಂದು ವಾಸವಾಗಿದ್ದರು. ಅಂಜಲಿ, ದಾಸರಹಳ್ಳಿಯಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ರವಿ ಟ್ರಾವೆಲ್ಸ್ ನಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ಈತ ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದ.
ಇದನ್ನೂ ಓದಿ: ವಿಚ್ಛೇದನ ಕೇಳಿದ್ದಕ್ಕೆ ಪತ್ನಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ಪತಿ! ಅಮೇಲೇನಾಯ್ತು?
ಈ ನಡುವೆ ಅಂಜಲಿ ಗೆ ಬೇರೆ ಯುವಕನ ಜೊತೆ ಅಕ್ರಮ ಸಂಬಂಧ ಇರುವುದಾಗಿ ಶಂಕಿಸಿದ್ದ ಪತಿ ರವಿಚಂದ್ರ ನಿನ್ನೆ (ನವೆಂಬರ್ 06) ರಾತ್ರಿ ರವಿ ಹನ್ನೊಂದು ಗಂಟೆಗೆ ಬಂದಾಗ ಪತ್ನಿ ಮನೆಯಲ್ಲಿ ಇರಲಿಲ್ಲ. ಪೋನ್ ಮಾಡಿದ್ರೆ ಸ್ವಿಚ್ ಆಪ್ ಬಂದಿದೆ. ಈ ನಡುವೆ ರವಿಚಂದ್ರ ಹೊರ ಹೋಗಿ ಕುಡಿದು ರಾತ್ರಿ 1ಕ್ಕೆ ಮತ್ತೆ ಮನೆಗೆ ಬಂದಿದ್ದು, ಆ ವೇಳೆ ಪತ್ನಿ ಅಂಜಲಿ ನಿದ್ರೆಗೆ ಜಾರಿದ್ದಳು. ಇದರಿಂದ ಕುಪಿತಗೊಂಡು ಗಲಾಟೆ ಮಾಡಿ ಮನೆಯಲ್ಲಿದ್ದ ಚಾಕುವಿನಿಂದ ಅಂಜಲಿಗೆ ಇರಿದಿದ್ದಾನೆ. ಅಲ್ಲದೇ ಕೈಯನ್ನು ಮುಷ್ಟಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಆ ಬಳಿಕ ಆರೋಪಿಯೇ ಪೊಲೀಸ್ರಿಗೆ ಮಾಹಿತಿ ನೀಡಿದ್ದಾನೆ.
ಅಷ್ಟರಲ್ಲಿ ಸ್ಥಳಕ್ಕೆ ಅಮೃತಹಳ್ಳಿ ಮಾಹಿತಿ ಆಧರಿಸಿ ಬಂದು ಪರಿಶೀಲಿಸಿದಾಗ ಅಂಜಲಿ ಉಸಿರಾಡುತ್ತಿರೋದು ಗೊತ್ತಾಗಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾಳೆ. ಇನ್ನೂ ಮನೆಯಲ್ಲಿ ಯಾವುದೇ ಜಗಳ ಏನು ಆಗುತ್ತಿರಲಿಲ್ಲ. ಏನಾಯ್ತೋ ಗೊತ್ತೇ ಇಲ್ಲ ಅಂತಾರೆ ಪಕ್ಕದ ಮನೆಯವರು.
ಇನ್ನು ಘಟನೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಅಂಜಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ ರವಾನೆ ಮಾಡಲಾಗಿದೆ. ಅದೇನೇ ಇರಲಿ ಮೊದಲೇ ವೈವಾಹಿಕ ಜೀವನದಿಂದ ಇಬ್ಬರೂ ಪ್ರತ್ಯೇಕವಾಗಿ ಹೊಸ ಜೀವನ ಶುರುಮಾಡಿದ್ರು. ದಾಂಪತ್ಯ ಜೀವನದಲ್ಲಿ ಒಬ್ಬರಿಗೊಬ್ಬರ ಆಸರೆಯಾಗಿ ಬದುಕು ಕಟ್ಟಿಕೊಳ್ಳುವ ಬದಲಾಗಿ, ಪತಿ ಪತ್ನಿಯ ಶೀಲ ಶಂಕೆಗೆ ಬಲಿಯಾಗಿದ್ದು ವಿಪರ್ಯಾಸವೇ ಸರಿ.




