ಒಂಟಿ ಕಾಲಿನ ಖದೀಮ, ಶಾಸಕರ ಕಾರಿಗೆ ಬೆಂಕಿ ಹಚ್ಚಿದ್ದ ಕಿರಾತಕ: ನಟೋರಿಯಸ್ ಕಳ್ಳರ ಫ್ಲ್ಯಾಶ್​ ಬ್ಯಾಕೇ ಭಯಾನಕ

ಬೆಂಗಳೂರು ಹೊರವಲಯ ಆನೇಕಲ್ ಉಪವಿಭಾಗದ ಜಿಗಣಿ ಪೊಲೀಸರು ಇಬ್ಬರು ನಟೋರಿಯಸ್​​ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಜೈಲಿಗೆ ಹೋಗಿ ಮುದ್ದೆ ಮುರಿದು ಬಂದಿದ್ದರೂ ಬುದ್ಧಿ ಕಲಿಯದೆ ತಮ್ಮ ಹಳೆ ಚಾಳಿಯನ್ನೇ ಮುಂದುವರೆಸಿದ್ದರು. ಇವರಿಬ್ಬರ ಮೇಲೆ ಸಾಕಷ್ಟು ಕೇಸ್​​ಗಳು ದಾಖಲಾಗಿವೆ. ಇನ್ನು ಇವರ ಫ್ಲ್ಯಾಶ್​ ಬ್ಯಾಕ್​​​ ಅಂತೂ ಸಿಕ್ಕಾಪಟ್ಟೆ ಭಯಾನಕವಾಗಿದೆ.

ಒಂಟಿ ಕಾಲಿನ ಖದೀಮ, ಶಾಸಕರ ಕಾರಿಗೆ ಬೆಂಕಿ ಹಚ್ಚಿದ್ದ ಕಿರಾತಕ: ನಟೋರಿಯಸ್ ಕಳ್ಳರ ಫ್ಲ್ಯಾಶ್​ ಬ್ಯಾಕೇ ಭಯಾನಕ
ಬಂಧಿತರ ಕುಖ್ಯಾತ ದರೋಡೆಕೋರರು
Image Credit source: tv9 kannada
Edited By:

Updated on: Apr 12, 2026 | 4:42 PM

ಆನೇಕಲ್​​, ಏಪ್ರಿಲ್​ 12: ಒಬ್ಬ ಒಂಟಿ ಕಾಲಿನಲ್ಲಿ ರಾಬರಿ ಮಾಡುವ ಖದೀಮ, ಮತ್ತೊಬ್ಬ ಶಾಸಕರ ಕಾರಿಗೆ ಬೆಂಕಿ ಹಚ್ಚಿದ್ದ ಕಿರಾತಕ. ಈ ಇಬ್ಬರು ಸೇರಿಕೊಂಡು ಸಿಕ್ಕ ಸಿಕ್ಕ ಕಡೆಗಳಲ್ಲಿ ದರೋಡೆ ಮಾಡುತ್ತಿದ್ದರು. ಆದರೆ ಇದೀಗ ಬೆಂಗಳೂರು ಹೊರವಲಯ ಆನೇಕಲ್ ಉಪವಿಭಾಗದ ಜಿಗಣಿ ಪೊಲೀಸರು ನಟೋರಿಯಸ್ ದರೋಡೆಕೋರರನ್ನು (robbers) ಬಂಧಿಸಿ ಮತ್ತೆ ಜೈಲಿಗಟ್ಟಿದ್ದಾರೆ. ಕೃಷ್ಣನಾಯಕ್​​ ಅಲಿಯಾಸ್​​ ಕುಂಟ ಕೃಷ್ಣ. ಇತನಿಗೆ ಹಾವಳಿ ಕೃಷ್ಣ ಅಂತ ಕೂಡ ಕರೆಯುತ್ತಾರೆ. ಇನ್ನೊಬ್ಬ ನವೀನ್​ ಅಲಿಯಾಸ್​​ ಕಾಳಪ್ಪ. ರಾಬರಿ ಕಾಳ ಅಂತ ಇನ್ನೊಂದು ಹೆಸರಿದೆ. ಸದ್ಯ ಪೊಲೀಸರು ಇವರಿಬ್ಬರ ಹೆಡೆಮುರಿ ಕಟ್ಟಿದ್ದಾರೆ.

ನಟೋರಿಯಸ್ ಕಳ್ಳರ ಫ್ಲ್ಯಾಶ್​ ಬ್ಯಾಕ್ ಭಯಾನಕ

ಇನ್ನು ಈ ಇಬ್ಬರು ನಟೋರಿಯಸ್ ಕಳ್ಳರ ಫ್ಲ್ಯಾಶ್​ ಬ್ಯಾಕ್ ಭಯಾನಕವಾಗಿದೆ. ಕೃಷ್ಣನಾಯರ್​​​ ಆಟೋ ಓಡಿಸಿಕೊಂಡಿದ್ದ. ಚಿಕ್ಕ ವಯಸ್ಸಿನಲ್ಲಿಯೇ ಕಳ್ಳತನ, ರಾಬರಿ ಮಾಡುತ್ತಿದ್ದ. ಆಟೋದಲ್ಲಿ ವ್ಯಕ್ತಿಗಳನ್ನ ಕಿಡ್ನ್ಯಾಪ್ ಮಾಡಿಕೊಂಡು ಹೋಗಿ ರಾಬರಿ ಮಾಡುತ್ತಿದ್ದ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಈತನ ಕಾಲಿಗೆ ಫೈರಿಂಗ್ ಮಾಡಿದ್ದರು. ಹೀಗಾಗಿ ಒಂದು ಕಾಲು ಕಳೆದುಕೊಂಡಿದ್ದ.

ಇದನ್ನೂ ಓದಿ: ಮದುವೆ ಮನೆಗಳೇ ಈತನ ಟಾರ್ಗೆಟ್: ಕುಖ್ಯಾತ ಕಳ್ಳ ಪಲ್ಸರ್ ಬಾಬು ಅರೆಸ್ಟ್; 42 ಲಕ್ಷ ರೂ.ಗೂ ಅಧಿಕ ಮೌಲ್ಯದ ಸ್ವತ್ತು ವಶ!

ಕಾಲು ಹೋಗಿದ್ದರು, ಅಷ್ಟೇ ಅಲ್ಲದೆ ಜೈಲಿಗೆ ಹೋಗಿ ಬಂದಿದ್ದರೂ ಬುದ್ಧಿ ಕಲಿಯದ ಕಿರಾತಕ, ಒಂದೇ ಕಾಲಿನಲ್ಲಿ ಆಟೋ ಓಡಿಸುತ್ತಾನೆ. ಅದೇ ಒಂಟಿ ಕಾಲಿಟ್ಟುಕೊಂಡು ಸಹಚರರ ಜೊತೆ ಸೇರಿ ಅಮಾಯಕರ ಕಿಡ್ನ್ಯಾಪ್ ಮಾಡುತ್ತಾನೆ. ಹಣ ದೋಚಿ, ಹಲ್ಲೆ ನಡೆಸಿ ಬಳಿಕ ಬಿಟ್ಟು ಪರಾರಿಯಾಗುತ್ತಾನೆ. ಈವರೆಗೆ ಬರೋಬ್ಬರಿ 20ಕ್ಕೂ ಹೆಚ್ಚು ಕೇಸ್​ಗಳಲ್ಲಿ ಭಾಗಿಯಾಗಿದ್ದು, ಬನ್ನೇರುಘಟ್ಟ, ಸೂರ್ಯನಗರ, ಹೆಬ್ಬಗೋಡಿ, ಜಿಗಣಿ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ಶಾಸಕರ ಕಾರಿಗೆ ಬೆಂಕಿಯಿಟ್ಟಿದ್ದ ಭೂಪ

ಮತ್ತೊರ್ವ ಕಳ್ಳ ನವೀನ್​​ ಅಲಿಯಾಸ್​​ ರಾಬರಿ ಕಾಳ, 2021ರಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟಿದ್ದ. ಮನೆಯ ಬಳಿ ನಿಲ್ಲಿಸಿದ್ದ ಎರಡು ಕಾರುಗಳು ಬೆಂಕಿಗಾಹುತಿಯಾಗಿದ್ದವು. ಆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಆದರೆ ಜೈಲಿನಿಂದ ಹೊರಬಂದು ಹಳೆ ಚಾಳಿ ಮುಂದುವರೆಸಿದ್ದ. ಈತ ಬೈಕ್ ಸೇರಿದಂತೆ ರಾಬರಿ ಮಾಡುತ್ತಿದ್ದ. ಬಳಿಕ ಹಾವಳಿ ಕೃಷ್ಣನ ಜೊತೆ ಸೇರಿದ ಕಾಳಪ್ಪ ಸಿಕ್ಕ ಸಿಕ್ಕ ಕಡೆಗಳಲ್ಲಿ ರಾಬರಿ ಮಾಡುತ್ತಿದ್ದ.

ಆಟೋಗೆ ಹತ್ತಿಸಿಕೊಂಡು ವ್ಯಕ್ತಿಯ ರಾಬರಿ: ಕಿವಿ ಕಟ್ ಮಾಡಿ ಚಿತ್ರಹಿಂಸೆ

ಇನ್ನು ಈ ಇಬ್ಬರು ನಟೋರಿಯಸ್​​ ದರೋಡೆಕೋರರು ಇತ್ತೀಚೆಗೆ ಯಾರಂಡಹಳ್ಳಿ ಸಮೀಪ ರಾಬರಿ ಮಾಡಿದ್ದಾರೆ. ಸುಂದರ್ ರಾಜ್​ ಎಂಬುವವರನ್ನು ಹಾವಳಿ ಕೃಷ್ಣನ ಆಟೋಗೆ ಹತ್ತಿಸಿಕೊಂಡ ಖದೀಮರು, ಮೊದಲಿಗೆ ಜೇಬಿನಲ್ಲಿದ್ದ ಹಣ, ಮೊಬೈಲ್ ಕಿತ್ತುಕೊಂಡಿದ್ದಾರೆ. ಬಳಿಕ ಎಟಿಎಂ ಕಾರ್ಡ್ ಕೊಡುವಂತೆ ಆವಾಜ್​​ ಹಾಕಿದ್ದಾರೆ. ಕೊಡದಿದ್ದಾಗ ಕಿವಿ ಕಟ್ ಮಾಡಿ ಚಿತ್ರಹಿಂಸೆ ನೀಡಿದ್ದಾರೆ. ಬಳಿಕ ಎಟಿಎಂ ಕಿತ್ತುಕೊಂಡು 1 ಲಕ್ಷ ರೂ ಹಣ ಡ್ರಾ ಮಾಡಿದ್ದಾರೆ. ನಂತರ ಆತನನ್ನ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿ ಆಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಜಿಗಣಿ ಪೊಲೀಸರು, ಇನ್ಸ್​ಪೆಕ್ಟರ್​ ಮಂಜುನಾಥ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:26 pm, Sun, 12 April 26

Follow Us