Govt Employees Strike: ನಾಳೆ ಸರ್ಕಾರಿ ನೌಕರರ ಮುಷ್ಕರ; ಇಂದು ರಾತ್ರಿ ತುರ್ತು ಸಭೆ ಕರೆದ ಸಿಎಂ ಬೊಮ್ಮಾಯಿ

7ನೇ ವೇತನ ಆಯೋಗದ ವರದಿ ಜಾರಿಗೆ ಸರ್ಕಾರಿ ನೌಕರರು ಪಟ್ಟು ಹಿಡಿದಿದ್ದು, ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ನೌಕರರ ಸಂಘ ಹೇಳಿದೆ. ನಾಳೆ ರಾಜ್ಯಾದ್ಯಂತ ಮುಷ್ಕರ ನಡೆಸಲಿದ್ದಾರೆ. ಹೀಗಾಗಿ ಇಂದು ರಾತ್ರಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ.

Govt Employees Strike: ನಾಳೆ ಸರ್ಕಾರಿ ನೌಕರರ ಮುಷ್ಕರ; ಇಂದು ರಾತ್ರಿ ತುರ್ತು ಸಭೆ ಕರೆದ ಸಿಎಂ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Follow us
|

Updated on:Feb 28, 2023 | 6:17 PM

ಬೆಂಗಳೂರು: 7ನೇ ವೇತನ ಆಯೋಗದ (7th Pay Commission) ವರದಿ ಜಾರಿಗೆ ಸರ್ಕಾರಿ ನೌಕರರು ಪಟ್ಟು ಹಿಡಿದಿದ್ದು, ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ನೌಕರ ಸಂಘ ಹೇಳಿದೆ. ಅದರಂತೆ ನಾಳೆ (ಮಾರ್ಚ್ 1) ರಾಜ್ಯಾದ್ಯಂತ ಮುಷ್ಕರ ನಡೆಸಲಿದ್ದಾರೆ. ಹೀಗಾಗಿ ಇಂದು ರಾತ್ರಿ ಮುಖ್ಯಮಂತ್ರಿ ಬೊಮ್ಮಾಯಿ (Basavaraj Bommai) ಅವರು ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ರಾತ್ರಿ 9.30ಕ್ಕೆ ಅಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳ ಸಭೆ ಕರೆಯಲಾಗಿದೆ.

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿಯೇ ಸಿದ್ಧ ಎಂದು ಪಟ್ಟು ಹಿಡಿದಿರುವ ಸರ್ಕಾರಿ ನೌಕರರ ಮನವೊಲಿಸಲು ರಾಜ್ಯ ಸರ್ಕಾರ ಕಸರತ್ತು ನಡೆಸುತ್ತಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್​ ಷಡಕ್ಷರಿ, ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಸೇರಿದಂತೆ ಹಲವು ನೌಕರ ಮುಖಂಡರ ಜತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಇಂದು ಮಧ್ಯಾಹ್ನ ನಡೆಸಿದ್ದ ಸಭೆ ವಿಫಲವಾಗಿದೆ. ಇದರ ಬೆನ್ನಲ್ಲೇ ಸಂಜೆ ಮತ್ತೊಂದು ಸುತ್ತಿನ ಸಭೆ ನಡೆಸಲು ಸರ್ಕಾರ ಮುಂದಾಗಿದೆ. ಸಿಎಸ್​ ಷಡಕ್ಷರಿ ಜತೆ ವಂದಿತಾ ಶರ್ಮಾ ಅವರು ಸಂಜೆ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರ ಮನವೊಲಿಸಲು ಸರ್ಕಾರದ ಕಸರತ್ತು; ಸಂಜೆ ಮತ್ತೆ ಸಭೆ

ನಾಳೆ (ಮಾರ್ಚ್ 1) ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ಸರ್ಕಾರಿ ನೌಕರರು ಕಚೇರಿಗಳಿಗೆ ತೆರಳದೆ ಮುಷ್ಕರ ನಡೆಸಲಿದ್ದಾರೆ. ಮುಷ್ಕರದಿಂದ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಸರ್ಕಾರ ಯಾವಾಗ ಸಭೆಗೆ ಕರೆದರೂ ಭಾಗವಹಿಸುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್​ ಷಡಕ್ಷರಿ ಹೇಳಿದ್ದಾರೆ.

ಇದನ್ನೂ ಮುನ್ನ, ಮುಷ್ಕರಕ್ಕೆ ಕರೆ ನೀಡಿರುವ ವಿಚಾರವಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಧ್ಯಂತರ ವರದಿ ತರಿಸಿಕೊಂಡು ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.  ವೇತನ ಪರಿಷ್ಕರಣೆ ವಿಚಾರವಾಗಿ ಸಂಜೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಕೂಡಲೇ ಮಧ್ಯಂತರ ವರದಿ ನೀಡುವಂತೆ ಈಗಾಗಲೇ ಸೂಚಿಸಿದ್ದೇನೆ. ಬಜೆಟ್​ ಮಂಡನೆ ವೇಳೆಯೇ ಈ ವಿಚಾರ ತಿಳಿಸಿದ್ದೆ ಎಂದೂ ಅವರು ಹೇಳಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Tue, 28 February 23