
ಬೆಂಗಳೂರು, ಆ.21: ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯದ ಭದ್ರತೆ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಹಾಗೂ ಸಾಧಕರ ಹಿತರಕ್ಷಣೆ ಕುರಿತಂತೆ ಪ್ರಮುಖ ಚರ್ಚೆಗಳು ನಡೆದಿದ್ದು, ಮೂರು ಪ್ರಮುಖ ವಿಚಾರಗಳು ತೀವ್ರ ಗಮನ ಸೆಳೆದಿವೆ. ಇನ್ನು ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿರುವ ಅಕ್ರಮ ನುಸುಳುಕೋರರ ಪತ್ತೆ ಕಾರ್ಯಚರಣೆ ಬಗ್ಗೆ, ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಮಹತ್ವದ ಹೇಳಿಯೊಂದನ್ನು ನೀಡಿದ್ದಾರೆ. ಒಟ್ಟು 911 ಅಕ್ರಮ ನುಸುಳುಕೋರರ ಪತ್ತೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನು ಅತಿಥಿ ಉಪನ್ಯಾಸಕರ ವೇತನವನ್ನು ಹೆಚ್ಚಿಸುವಂತೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಸದನದಲ್ಲಿ ಆಗ್ರಹ ಮಾಡಿದ್ದಾರೆ. ಮೂರುನೇ ವಿಚಾರ ಪದ್ಮ ಪ್ರಶಸ್ತಿ ವಿಜೇತರಿಗೆ ಪಿಂಚಣಿ ನೀಡಲು ಶಾಸಕರು ಮನವಿ ಮಾಡಿದ್ದಾರೆ.
ವಿಧಾನ ಪರಿಷತ್ನಲ್ಲಿ ಎಂಎಲ್ಸಿ ಹೆಚ್.ಎಸ್. ಗೋಪಿನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 911 ಅಕ್ರಮ ನುಸುಳುಕೋರರನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ. ಪತ್ತೆಯಾದ 911 ನುಸುಳುಕೋರರಲ್ಲಿ 868 ಜನರು ಬಾಂಗ್ಲಾದೇಶದವರು, 20 ಜನರು ಪಾಕಿಸ್ತಾನ, 13 ನೈಜೀರಿಯಾ, 8 ಶ್ರೀಲಂಕಾ ಹಾಗೂ ಮ್ಯಾನ್ಮಾರ್ ಮತ್ತು ಉಗಾಂಡಾದ ತಲಾ ಒಬ್ಬರು ಸೇರಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 5,304 ವಿದೇಶಿ ಪ್ರಜೆಗಳು ಸಿಂಧುತ್ವ ಹೊಂದಿರುವ ವೀಸಾ ಹೊಂದಿದ್ದಾರೆ. ಆದರೆ 446 ವಿದೇಶಿಗರು ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದಾರೆ. ಅವಧಿ ಮುಗಿದ ಪಾಸ್ಪೋರ್ಟ್ ಹೊಂದಿರುವ ಯಾವುದೇ ವಿದೇಶಿಗರು ಕಂಡುಬಂದಿಲ್ಲ. ವೀಸಾ ಅವಧಿ ಮೀರಿದವರ ವಿವರಗಳನ್ನು ಪೊಲೀಸ್ ಮಾಡ್ಯೂಲ್ ಹಾಗೂ ‘ಫಾರಿನರ್ಸ್ ಐಡೆಂಟಿಫಿಕೇಶನ್ ಪೋರ್ಟಲ್’ನಲ್ಲಿ ದಾಖಲಿಸಿ, ಮುಂದಿನ ಕ್ರಮಕ್ಕಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (FRRO) ಸಲ್ಲಿಸಲಾಗುತ್ತಿದೆ.
ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ವಿಧಾನಸಭೆಯಲ್ಲಿ ಪದವಿ ಪೂರ್ವ (PU) ಕಾಲೇಜುಗಳ ಅತಿಥಿ ಉಪನ್ಯಾಸಕರ ಕನಿಷ್ಠ ವೇತನದ ಸಮಸ್ಯೆಯನ್ನು ಪ್ರಸ್ತಾಪಿಸಿದರು. ರಾಜ್ಯದಲ್ಲಿ 5,910 ಪಿಯು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಅವರ ಒಪ್ಪಂದವನ್ನು ಪ್ರತಿ ವರ್ಷ ನವೀಕರಿಸಲಾಗುತ್ತದೆ. ಆದರೆ, ಅವರಿಗೆ ನೀಡಲಾಗುತ್ತಿರುವ ಮಾಸಿಕ ಗೌರವಧನ ಕೇವಲ 14,000 ರೂ.ಇದು ಕಾಫಿ ತೋಟದ ದಿನಗೂಲಿ ಕಾರ್ಮಿಕರ ತಿಂಗಳ ಆದಾಯಕ್ಕಿಂತಲೂ ತೀರ ಕಡಿಮೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಅವರ ಗೌರವಧನವನ್ನು ತಕ್ಷಣವೇ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: ವಿಧಾನಸೌಧದಲ್ಲಿ ಇಂದು ಕಾಂಗ್ರೆಸ್ ನಾಯಕರ ಪ್ರತಿಭಟನೆ; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ
ಬಾದಾಮಿ ಕಾಂಗ್ರೆಸ್ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರು ಕರ್ನಾಟಕದ ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಮಾಸಿಕ ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಪ್ರಶಸ್ತಿ ಬಂದಾಗ ಗೌರವಿಸುವ ಸಮಾಜ ಮತ್ತು ಸರ್ಕಾರ, ತದನಂತರ ಸಾಧಕರನ್ನು ಮರೆತುಬಿಡುತ್ತದೆ. ಬಡತನದಲ್ಲಿರುವ ಅನೇಕ ಪದ್ಮ ಪ್ರಶಸ್ತಿ ವಿಜೇತರಿಗೆ ಆರ್ಥಿಕ ನೆರವಿನ ಅಗತ್ಯವಿದೆ. ನೆರೆ ರಾಜ್ಯಗಳಾದ ತೆಲಂಗಾಣ 25,000 ರೂ. ಹಾಗೂ ಒಡಿಶಾ 30,000 ರೂ. ಮಾಸಿಕ ಪಿಂಚಣಿಯನ್ನು ತಮ್ಮ ರಾಜ್ಯದ ಪದ್ಮ ಪ್ರಶಸ್ತಿ ವಿಜೇತರಿಗೆ ನೀಡುತ್ತಿವೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಪಿಂಚಣಿ ಯೋಜನೆ ಜಾರಿಗೆ ತರಬೇಕೆಂದು ಅವರು ಮನವಿ ಮಾಡಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:43 am, Fri, 21 August 26