
ಬೆಂಗಳೂರು, ಆಗಸ್ಟ್ 05: ಸಚಿವ ಸಂಪುಟ ವಿಸ್ತರಣೆ ಬಳಿಕ ಮಂತ್ರಿಸ್ಥಾನ ವಂಚಿತ ಆಕಾಂಕ್ಷಿ ಶಾಸಕರ ಅಸಮಾಧಾನ ಕಾಂಗ್ರೆಸ್ನಲ್ಲಿ ತಾರಕಕ್ಕೇರಿದೆ. ಪಕ್ಷದ ವರಿಷ್ಠರ ಮನವೊಲಿಕೆ ಯತ್ನದ ಹೊರತಾಗಿಯೂ ಹಲವು ಶಾಸಕರು ಆಕ್ರೋಶ ಮುಂದುವರಿಸಿರೋದು ಪಕ್ಷಕ್ಕೀಗ ತಲೆನೋವಾಗಿ ಮಾರ್ಪಟ್ಟಿದೆ. ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನೆಲೆ ಬೆಂಗಳೂರಿನಿತ್ತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೊರಟಿದ್ದು, ಅಸಮಾಧಾನಿತ ಶಾಕರನ್ನು ಭೇಟಿಯಾಗಿ ಅವರು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ವಂಚಿತರಾದ ಹಿನ್ನೆಲೆ ವಿಧಾನಸಭೆಯಲ್ಲಿ ವಿಪಕ್ಷ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸುವಂತೆ ವಿಧಾನಸಭಾಧ್ಯಕ್ಷರಿಗೆ ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ಪತ್ರ ಬರೆಯಲು ಮುಂದಾಗಿದ್ದಾರೆ. ಆಡಳಿತ ಪಕ್ಷದ ಸದಸ್ಯರ ಸಾಲಿನಲ್ಲಿ ಕುಳಿತುಕೊಳ್ಳಲು ಇಚ್ಛೆಯಿಲ್ಲ. ಹೀಗಾಗಿ ವಿರೋಧ ಪಕ್ಷದ ಸಾಲಿನಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಬೇಕು ಎಂಬ ಬಗ್ಗೆ ಆಗ್ರಹವಿರುವ ಪತ್ರವನ್ನು ಜಯಚಂದ್ರ ಸಿದ್ಧಪಡಿಸಿಕೊಂಡಿದ್ದಾರೆ. ಅಲ್ಲಿಂದಲೇ ಸರ್ಕಾರದ ಕಾರ್ಯ ವೈಖರಿ ಗಮನಿಸಿ ಸಲಹೆ, ಮಾರ್ಗದರ್ಶನ ನೀಡುವ ಬಗ್ಗೆಯೂ ಅವರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ನೂತನ ವಿಧಾನಸಭಾಧ್ಯಕ್ಷರ ಆಯ್ಕೆ ನಡೆಯಬೇಕಿರುವ ಹಿನ್ನೆಲೆ, ರಾಜ್ಯಪಾಲರು ಸಿಎಂ ಶಿಫಾರಸಿನ ಮೇರೆಗೆ ಹಂಗಾಮಿ ಸ್ಪೀಕರ್ ಆಗಿ ಟಿ.ಬಿ.ಜಯಚಂದ್ರ ನೇಮಿಸಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಈ ಜವಾಬ್ದಾರಿಯನ್ನೂ ಅವರು ನಿರಾಕರಿಸಿರುವ ಮಾಹಿತಿ ಇದೆ.
ಇದನ್ನೂ ಓದಿ: ಅಸಮಾಧಾನಿತರ ಕೋಪ ಶಮನಕ್ಕೆ ಮುಂದಾದ ಕಾಂಗ್ರೆಸ್: ಶಾಸಕರ ಜೊತೆ ನಾಯಕರ ಚರ್ಚೆ
ಮತ್ತೊಂದೆಡೆ, ನಾನು ಕುಮಾರಸ್ವಾಮಿರನ್ನು ಈಗ ನೆನೆಪು ಮಾಡಿಕೊಳ್ಳಬೇಕು. ನನಗೆ ಸಚಿವ ಸ್ಥಾನ ಸಿಗಲ್ಲ ಎಂದು ಮನೆಯಲ್ಲಿಯೇ ಕುಳಿತಿದ್ದೆ. ಆಗ ಹೆಚ್ಡಿಕೆ ಅವರೇ ಕರೆ ಮಾಡಿ ಸಚಿವರನ್ನಾಗಿ ಮಾಡಿದ್ರು. ಅದನ್ನು ನಾನು ಯಾವತ್ತೂ ಮರೆಯಲ್ಲ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ. ಯಾವುದೋ ಒಂದು ವಿಚಾರಕ್ಕೆ ಮಾತ್ರ ಭಿನ್ನಾಭಿಪ್ರಾಯ ಆಗಿತ್ತು. ಉಳಿದಂತೆ ನಮ್ಮಿಬ್ಬರ ನಡುವೆ ಏನೂ ಇಲ್ಲ ಎಂದವರು ಹೇಳಿರೋದು ಅಚ್ಚರಿಗೆ ಕಾರಣವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:41 pm, Wed, 5 August 26