AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಕೈ-ಕಾಲು ಕತ್ತರಿಸಿದಾಗಷ್ಟೇ ಜನಕ್ಕೆ ಕಾನೂನಿನ ಭಯ ಬರತ್ತೆ”: ಲೈಂಗಿಕ ದೌರ್ಜನ್ಯ ಆರೋಪಿ ಜಾಮೀನು ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಆಕ್ರೋಶ!

ಕರ್ನಾಟಕ ಹೈಕೋರ್ಟ್ ಅಪರಾಧಗಳ ಹೆಚ್ಚಳ ಮತ್ತು ಕಾನೂನಿನ ಭಯವಿಲ್ಲದಿರುವಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಯ ಲೈಂಗಿಕ ದೌರ್ಜನ್ಯ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆ ವೇಳೆ, ನ್ಯಾಯಾಲಯವು ಜನರು ಕಾನೂನು ಪಾಲಿಸಲು ಕಠಿಣ ಶಿಕ್ಷೆಗಳು ಅಗತ್ಯವೆಂದು ಅಭಿಪ್ರಾಯಪಟ್ಟಿತು. ಕಾನೂನು ಸಡಿಲವಾಗಿರುವುದರಿಂದ ಅಪರಾಧಗಳು ಸುಲಭವಾಗಿ ನಡೆಯುತ್ತಿವೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ, ಮಧ್ಯಪ್ರಾಚ್ಯ ದೇಶಗಳ ಉದಾಹರಣೆ ನೀಡಿತು.

ಕೈ-ಕಾಲು ಕತ್ತರಿಸಿದಾಗಷ್ಟೇ ಜನಕ್ಕೆ ಕಾನೂನಿನ ಭಯ ಬರತ್ತೆ: ಲೈಂಗಿಕ ದೌರ್ಜನ್ಯ ಆರೋಪಿ ಜಾಮೀನು ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಆಕ್ರೋಶ!
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Jun 02, 2026 | 10:59 PM

Share

ಬೆಂಗಳೂರು, ಜೂ.2: ಕರ್ನಾಟಕ ಹೈಕೋರ್ಟ್​​​ ಇಂತಹ ಹೇಳಿಕೆಯನ್ನು ಈ ಹಿಂದೆ ನೀಡಿದ ಇತಿಹಾಸ ಇಲ್ಲ ಎಂದನ್ನಿಸುತ್ತದೆ. ಹೌದು ವಿಚಾರಣೆ ವೇಳೆ ಹೈಕೋರ್ಟ್​​ ನ್ಯಾಯಮೂರ್ತಿಗಳು ಭಾರೀ ಆಕ್ರೋಶದ ಮಾತುಗಳನ್ನು ಹೇಳಿದ್ದಾರೆ.   ಜನರು ಅತ್ಯಂತ ಸುಲಭವಾಗಿ ಅಪರಾಧಗಳನ್ನು ಎಸಗುತ್ತಿದ್ದಾರೆ. ಬಹುಶಃ ನೀವು ಯಾರಾದರೂ ತಪ್ಪು ಮಾಡಿದಾಗ ಕೈ ಅಥವಾ ಕಾಲು ಕತ್ತರಿಸಿದಾಗ ಮಾತ್ರ ಜನರಿಗೆ ಕಾನೂನನ್ನು ಹೇಗೆ ಪಾಲಿಸಬೇಕು ಎಂಬುದು ಅರಿವಾಗಬಹುದು” ಎಂದು ಕರ್ನಾಟಕ ಹೈಕೋರ್ಟ್ ಅತ್ಯಂತ ಗಂಭೀರ ಹಾಗೂ ಆಕ್ರೋಶದ ಹೇಳಿಕೆಯನ್ನು ನೀಡಿದೆ. ಇದೀಗ ಈ ಬಗ್ಗೆ ಭಾರೀ ಚರ್ಚೆಗೂ ಕಾರಣವಾಗಿದೆ. ಅತ್ಯಾಚಾರ, ಕೊಲೆ, ಇನ್ನೂ ಇಂತಹ ಅನೇಕ ಅಪರಾಧಗಳು ನಮಲ್ಲಿ ನಡೆಯುತ್ತಿರುವುದಕ್ಕೆ ಕಾರಣ, ಜನರಿಗೆ ಕಾನೂನಿನ ಭಯ ಇಲ್ಲದಿರುವುದು ಎಂದು ಹೇಳಿದೆ.

ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನ ಮೇಲಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆಯನ್ನು ಮೇ 29 ರಂದು ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ಪೀಠವು ಈ ಹೇಳಿಕೆಯನ್ನು ನೀಡಿದೆ. “ನಮ್ಮಲ್ಲಿ ಪ್ರಜಾಪ್ರಭುತ್ವ ಇರುವುದರಿಂದ ಪ್ರತಿಯೊಬ್ಬರೂ ಕಾನೂನನ್ನು ತೀರಾ ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ” ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

ವಿಚಾರಣೆ ವೇಳೆ ಕಾನೂನು ವ್ಯವಸ್ಥೆಯ ಸಡಿಲತೆಯ ಬಗ್ಗೆ ಅಸಮಾಧಾನ ಹೊರಹಾಕಿದ ನ್ಯಾಯಮೂರ್ತಿಗಳು, “ನಾವು ಅಪರಾಧಿಗಳನ್ನು ಕಠಿಣವಾಗಿ ನಡೆಸಿಕೊಳ್ಳದ ಕಾರಣ ಕಾನೂನು ತನ್ನ ಪ್ರಭಾವವನ್ನು ಕಳೆದುಕೊಂಡಿದೆ. ಅದಕ್ಕಾಗಿಯೇ ಇಲ್ಲಿ ಅಪರಾಧ ಮಾಡುವುದು ತುಂಬಾ ಸುಲಭವಾಗಿದೆ. ಆದರೆ ಮಧ್ಯಪ್ರಾಚ್ಯ ದೇಶಗಳಲ್ಲಿ ಈ ಪರಿಸ್ಥಿತಿ ಇಲ್ಲ” ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ, ಆರೋಪಿ ಪರ ವಕೀಲರು ವಾದ ಮಂಡಿಸಿ, “ನನ್ನ ಕಕ್ಷಿದಾರ ಯಾವುದೇ ತಪ್ಪು ಮಾಡಿಲ್ಲ. ಈಗಾಗಲೇ ಎರಡು ತಿಂಗಳಿನಿಂದ ಜೈಲಿನಲ್ಲಿದ್ದು, ಇದು ಆತನ ವೃತ್ತಿಪರ ಜೀವನಕ್ಕೆ ಧಕ್ಕೆ ತರುತ್ತದೆ” ಎಂದು ಜಾಮೀನಿಗೆ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, “ಆತ ಇನ್ನು ಕೆಲವು ದಿನಗಳ ಕಾಲ ಜೈಲಿನಲ್ಲೇ ಇರಲಿ… ಒಂದು ವೇಳೆ ವಿಚಾರಣಾ ನ್ಯಾಯಾಲಯವು ಆತನನ್ನು ಅಪರಾಧಿ ಎಂದು ಘೋಷಿಸಿದರೆ, ಆತ ಮತ್ತೆ ಜೈಲಿಗೇ ಹೋಗಬೇಕಾಗುತ್ತದೆ” ಎಂದು ಮೌಖಿಕವಾಗಿ ಹೇಳಿ, ಅರ್ಜಿಯ ಮುಂದಿನ ವಿಚಾರಣೆಯನ್ನು ಜೂನ್ 8 ಕ್ಕೆ ಮುಂದೂಡಿದೆ.

ಇದನ್ನೂ ಓದಿ: ಗಂಡನ ಮನೆಗೆ ಹೋದ ತಕ್ಷಣ ಹೆತ್ತವರ ಬಾಂಧವ್ಯ ಮುಗಿಯಲ್ಲ!: ಸರ್ಕಾರದ ನಿಯಮ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಪ್ರಕರಣದ ಹಿನ್ನೆಲೆ ಏನು?:

ಸಹಪಾಠಿಯಾಗಿದ್ದ ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ, ಆರೋಪಿಯು ಜುಲೈ 2023 ರಲ್ಲಿ ತನ್ನ ಪ್ರೀತಿಯನ್ನು ನಿವೇದಿಸಿಕೊಂಡಿದ್ದನು. ನಂತರ ಸೆಪ್ಟೆಂಬರ್ 12, 2023 ರಂದು ಮನವೊಲಿಸುವ ನೆಪದಲ್ಲಿ ಆಕೆಯನ್ನು ತನ್ನ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಇದರಿಂದ ತೀವ್ರ ಆಘಾತಕ್ಕೊಳಗಾದ ಸಂತ್ರಸ್ತೆ ಖಿನ್ನತೆಗೆ ಒಳಗಾಗಿ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಬೆಂಗಳೂರಿಗೆ ಸ್ಥಳಾಂತರಗೊಂಡು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.

ಪ್ರಕರಣವು ಪೋಲಿಸ್ ಮೆಟ್ಟಿಲೇರಿದ ನಂತರ, ಆರೋಪಿಯು ಮಾರ್ಚ್ 20, 2026 ರಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಿ ಮನೆಗೆ ಮರಳಿದ್ದನು. ಆದರೆ, ಏಪ್ರಿಲ್ 4 ರಂದು ಮಹಿಳೆ ಮತ್ತೆ ಅತ್ಯಾಚಾರದ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಮೇ 14 ರಂದು ವಿಚಾರಣಾ ನ್ಯಾಯಾಲಯವು ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕಾರಣ, ಆತ ಹೈಕೋರ್ಟ್ ಮೆಟ್ಟಿಲೇರಿದ್ದನು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:53 pm, Tue, 2 June 26

Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More