
ಬೆಂಗಳೂರು, ಆಗಸ್ಟ್ 28: ರಾಜ್ಯದ ಸರ್ಕಾರಿ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಪೂರೈಸಲಾಗುವ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾಲು ಸಾಲು ದೂರುಗಳು ಹಾಗೂ ಗಂಭೀರ ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ, ರಾಜ್ಯ ಆರೋಗ್ಯ ಇಲಾಖೆ ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ವಿದ್ಯಾರ್ಥಿಗಳ ಆರೋಗ್ಯದ ಜೊತೆ ಆಟವಾಡುತ್ತಾ, ಬೇಕಾಬಿಟ್ಟಿ ಕಳಪೆ ಊಟ ನೀಡುತ್ತಿದ್ದ ಹಾಸ್ಟೆಲ್ ಆಡಳಿತ ಮಂಡಳಿಗಳಿಗೆ ಶಾಕ್ ನೀಡಲು ಸರ್ಕಾರ ಸಜ್ಜಾಗಿದ್ದು, ಶೀಘ್ರದಲ್ಲೇ ಸರ್ಕಾರಿ ಹಾಸ್ಟೆಲ್ಗಳಿಗಾಗಿಯೇ ಪ್ರತ್ಯೇಕ ‘ಆಹಾರ ಸುರಕ್ಷತಾ ಮಾರ್ಗಸೂಚಿ’ ಹೊರಡಿಸಲು ಸಿದ್ಧತೆ ನಡೆಸಿದೆ.
ಕಳೆದ ಕೆಲವು ದಿನಗಳಿಂದ ಹಲವು ಸರ್ಕಾರಿ ಹಾಸ್ಟೆಲ್ಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಹಾಗೂ ಅಶುಚಿತ್ವದ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ದೂರುಗಳ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ (FSSAI) ಅಧಿಕಾರಿಗಳು ರಾಜ್ಯದ ಹಲವು ಹಾಸ್ಟೆಲ್ಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
ಈ ತಪಾಸಣೆ ವೇಳೆ ಅಡುಗೆ ಮನೆಗಳಲ್ಲಿ ನೈರ್ಮಲ್ಯದ ತೀವ್ರ ಕೊರತೆ, ಕಳಪೆ ಮಟ್ಟದ ಸಾಮಗ್ರಿಗಳ ಬಳಕೆ ಹಾಗೂ ಹಲವೆಡೆ ದಿನಾಂಕ ಮುಗಿದ (Expired) ಆಹಾರ ಪದಾರ್ಥಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಅಡುಗೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಈ ಅಪಾಯಕಾರಿ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ಈಗ ಹೊಸ ಕಟ್ಟುನಿಟ್ಟಿನ ನಿಯಮಾವಳಿ ರೂಪಿಸಲು ಮುಂದಾಗಿದೆ.
“ಹಾಸ್ಟೆಲ್ಗಳು, ಪಿಜಿಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ನೈರ್ಮಲ್ಯ ಕಾಪಾಡದ ಮತ್ತು ಕಳಪೆ ಆಹಾರ ನೀಡುವ ಕೇಂದ್ರಗಳ ವಿರುದ್ಧ ದಾಳಿ ಮುಂದುವರಿಯಲಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.” ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ