
ಬೆಂಗಳೂರು, ಏಪ್ರಿಲ್ 25: ಕರ್ನಾಟದಲ್ಲಿ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ಹಿಂದೆ ಬಳ್ಳಾರಿ, ಕಲಬುರಗಿ, ರಾಯಚೂರಿನಂತಹ ಜಿಲ್ಲೆಗಳಿಗೆ ಸೀಮಿತವಾಗಿದ್ದ ಉಷ್ಣ ಅಲೆ (Heat Wave) ಈಗ ಬೆಂಗಳೂರಿಗರನ್ನೂ (Bangalore) ಬೆವರಿಸುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಉಷ್ಣಾಂಶ ಈಗಾಗಲೇ 36 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ್ದು, ಅತಿಯಾದ ಶಾಖದಿಂದ ಜನರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ರಾಜ್ಯಾದ್ಯಂತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಬಿಸಿಗಾಳಿ ಹಾಗೂ ಹೀಟ್ ಸ್ಟ್ರೋಕ್ನಿಂದ ಬಾಧಿತರಾಗುವವರಿಗೆ ತುರ್ತು ಚಿಕಿತ್ಸೆ ನೀಡಲು ಸರ್ಕಾರ ವಿಶೇಷ ಸುತ್ತೋಲೆ ಹೊರಡಿಸಿದೆ. ಜುಲೈ 31ರವರೆಗೆ ಜಾರಿಯಲ್ಲಿರುವಂತೆ ರಾಜ್ಯದಾದ್ಯಂತ ವಿಶೇಷ ವಾರ್ಡ್ಗಳನ್ನು ತೆರೆಯಲಾಗುತ್ತಿದೆ.
ಈ ಕೊಠಡಿಗಳಲ್ಲಿ ಫ್ಯಾನ್, ಏರ್ ಕೂಲರ್, ಐಸ್ ಕ್ಯೂಬ್ಸ್, ಥರ್ಮಾಮೀಟರ್ ಮತ್ತು ಓಆರ್ಎಸ್ (ORS) ಕಾರ್ನರ್ಗಳನ್ನು ಕಡ್ಡಾಯವಾಗಿ ಸ್ಥಾಪಿಸಲು ಸೂಚಿಸಲಾಗಿದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈಗಾಗಲೇ 5 ಬೆಡ್ಗಳ ಪ್ರತ್ಯೇಕ ‘ಹೀಟ್ ಸ್ಟ್ರೋಕ್ ವಾರ್ಡ್’ ಸಜ್ಜಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆಯ ಡೀನ್ ಡಾ. ಲಕ್ಷ್ಮೀಪತಿ ಅವರು, ‘ಬಿಸಿಲಿನಿಂದ ಅಸ್ವಸ್ಥರಾಗುವವರಿಗೆ ಚಿಕಿತ್ಸೆ ನೀಡಲು ಅಗತ್ಯ ಔಷಧಿಗಳು ಹಾಗೂ ತಂಪಾದ ವಾತಾವರಣದ ವ್ಯವಸ್ಥೆ ಮಾಡಲಾಗಿದೆ’ ಎಂದಿದ್ದಾರೆ. ಇದೇ ರೀತಿ ದೊಡ್ಡಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲೂ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬಿಸಿಲಿನ ಪ್ರಭಾವ ಕೇವಲ ಮನುಷ್ಯರ ಮೇಲಷ್ಟೇ ಅಲ್ಲದೆ ಪ್ರಾಣಿ-ಪಕ್ಷಿಗಳ ಮೇಲೂ ಆಗುತ್ತಿದೆ. ಬೆಳಗಾವಿಯ ಪಕ್ಷಿ ಸಂಗ್ರಹಾಲಯದಲ್ಲಿ ಸ್ಪ್ರಿಂಕ್ಲರ್ಗಳ (Sprinklers) ವ್ಯವಸ್ಥೆ ಮಾಡಲಾಗಿದ್ದು, ಪಕ್ಷಿಗಳ ಆಹಾರ ಕ್ರಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮಹತ್ವದ ಬದಲಾವಣೆ ಮಾಡಿದ್ದಾರೆ.
ಇದನ್ನೂ ಓದಿ: ಹೀಟ್ ವೇವ್ ಎದುರಿಸಲು ಮೈಸೂರಿನ ಆಸ್ಪತ್ರೆ ಸನ್ನದ್ಧ; ರೋಗಿಗಳಿಗಾಗಿ ಬೆಡ್ ಮೀಸಲು, ವಾರ್ಡ್ನಲ್ಲಿ ಎಸಿ, ಫ್ಯಾನ್ ಅಳವಡಿಕೆ!
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಲಾಖೆಯ ಎಲ್ಲಾ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಹೀಟ್ ಸ್ಟ್ರೋಕ್ ನಿರ್ವಹಣೆ ಕುರಿತು ತರಬೇತಿ ನೀಡಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ